ಹೆಬ್ರಿ: ಹೆಬ್ರಿ ಸಮೀಪದ ಪ್ರಸಿದ್ಧ ಪ್ರವಾಸಿ ತಾಣವಾದ ಕೂಡ್ಲು ಫಾಲ್ಸ್ನಲ್ಲಿ ಬಂಡೆಯ ಮೇಲಿನಿಂದ ಜಾರಿ ಬಿದ್ದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ವರದಿಯಾಗಿದೆ. ಮೃತ ಯುವಕನನ್ನು ಉಡುಪಿಯ ಕೊಂಜಾಡಿ ಮೂಲದ ಹಾಗೂ ಬೆಂಗಳೂರಿನಲ್ಲಿ ವಾಸವಾಗಿದ್ದ ಸವಿತಾ ಪಿ. ಶೆಟ್ಟಿ ಅವರ ಪುತ್ರ ಮನ್ವಿತ್ (25) ಎಂದು ಗುರುತಿಸಲಾಗಿದೆ.

ಮಾಹಿತಿಯಂತೆ, ಮನ್ವಿತ್ ಅವರು ಡಿಸೆಂಬರ್ 12ರಂದು ತಮ್ಮ ಸ್ವಂತ ಮನೆ ಕೊಂಜಾಡಿಗೆ ಬಂದಿದ್ದು, ಡಿಸೆಂಬರ್ 14ರಂದು ಸ್ನೇಹಿತರೊಂದಿಗೆ ಹೆಬ್ರಿ ಸಮೀಪದ ಕೂಡ್ಲು ಫಾಲ್ಸ್ಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಸ್ನೇಹಿತರು ನೀರಿನಲ್ಲಿ ಸ್ನಾನ ಮಾಡುತ್ತಿದ್ದಾಗ, ಮನ್ವಿತ್ ಎತ್ತರದ ಬಂಡೆಯ ಮೇಲೆ ಕುಳಿತುಕೊಂಡಿದ್ದರು. ಆ ಸಂದರ್ಭ ಆಕಸ್ಮಿಕವಾಗಿ ಅವರಿಗೆ ತಲೆ ತಿರುಗಿ ಕೆಳಗಡೆಯ ನೀರಿಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮನ್ವಿತ್ ಅವರನ್ನು ತಕ್ಷಣ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 17ರಂದು ಬೆಳಗ್ಗೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮನ್ವಿತ್ ಅವರಿಗೆ ರಿಗ ಮೂರ್ಛೆ (ಎಪಿಲೆಪ್ಸಿ) ಸಮಸ್ಯೆ ಇದ್ದು, ಈ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.