ಮಂಗಳೂರು: ಡಿಕೆಶಿ ಸಿದ್ದು ಮನೆಗೆ, ಸಿದ್ದು ಡಿಕೆಶಿ ಮನೆಗೆ ಹೋಗಿ ಬ್ರೇಕ್ ಫಾಸ್ಟ್ ಮಾಡಿ ಬಂದು ಉಭಯ ನಾಯಕರೂ, ಸಿಎಂ ಬದಲಾವಣೆ ಹೈಕಮಾಂಡ್ ನಿರ್ಧರಿಸುತ್ತೆ ಎಂದು ಮೀಡಿಯಾ ಮುಂದೆ ಹೇಳಿ, ನಾವಿಬ್ಬರೂ ಒಟ್ಟಾಗಿದ್ದೆವು ಎಂದು ಮೀಡಿಯಾ ಮುಂದೆ ತೋರಿಸಿಕೊಂಡಿದ್ದರು. ಇದೀಗ ಮಂಗಳೂರಿಗೆ ಬಂದಿರುವ ಸಿದ್ದರಾಮಯ್ಯ ಎಐಸಿಸಿ ಸೆಕ್ರೆಟರಿ ಕೆ ಸಿ ವೇಣುಗೋಪಾಲ್ ಜೊತೆ ಗೌಪ್ಯ ಚರ್ಚೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ.

ನಾರಾಯಣ ಗುರು-ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಿದ್ದು ಕೆಸಿವಿ ಆಗಮಿಸಿದ್ದು, ಕಾರ್ಯಕ್ರಮದಲ್ಲಿ ಭರ್ಜರಿಯಾಗಿ ಪಾಲ್ಗೊಂಡಿದ್ದರು. ಆದರೆ ಇಬ್ಬರ ಮಧ್ಯೆಯೂ ಗೌಪ್ಯವಾಗಿ ಸಿಎಂ ಬದಲಾವಣೆ, ಸಂಪುಟ ಸರ್ಜರಿ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಕೆಸಿವಿ ಅವರು ಹೈಕಮಾಂಡ್ ನೀಡಿರುವ ಸಂದೇಶವನ್ನು ಸಿದ್ದುಗೆ ನೀಡಿದ್ದಾರೆ ಎನ್ನಲಾಗಿದ್ದು, ಈ ವಿಚಾರವಾಗಿಯೇ ದೆಹಲಿಯಲ್ಲಿ ಹೈ ವೋಲ್ಟೇಜ್ ಮೀಟಿಂಗ್ ನಡೆಯಲಿದೆ. ಅಲ್ಲದೇ ಕೆಲ ದಿನಗಳಲ್ಲೇ ದೆಹಲಿಗೆ ಕರೆದು ಮುಂದಿನ ಹಂತದ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಆದರೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಜೊತೆ ಯಾವುದೇ ರಾಜಕೀಯ ಚರ್ಚೆಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಡ್ಡಿ ಮುರಿದಂತೆ ಹೇಳಿದ್ದಾರೆ.
