ಮಂಗಳೂರು: ಬಹುಕೋಟಿ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಜಪ್ಪಿನಮೊಗರು ತಂದೊಳಿಗೆ ನಿವಾಸಿ ರೋಷನ್ ಸಲ್ಡಾನನ ಮನೆ ಮತ್ತು ಬ್ಯಾಂಕ್ ಖಾತೆ ಸೇರಿದಂತೆ ₹2.85 ಕೋಟಿ ಮೌಲ್ಯದ ಆಸ್ತಿಯನ್ನ ಜಾರಿ ನಿರ್ದೇಶನಾಲಯ (ಇ.ಡಿ.) ತಾತ್ಕಾಲಿಕ ಮುಟ್ಟುಗೋಲು ಹಾಕಿದೆ. ಜಾರಿ ನಿರ್ದೇಶನಾಲಯದ ಮಂಗಳೂರು ಉಪವಲಯ ಕಚೇರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮುಟ್ಟುಗೋಲು ಹಾಕಿದ್ದಾರೆ.

ರೋಚಕ ಕಾರ್ಯಾಚರಣೆ! ರಹಸ್ಯ ಅಡಗುತಾಣದಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದ ಕೋಟಿ ವಂಚಕನ ಕೋಟೆಗೆ ಲಗ್ಗೆ ಇಟ್ಟ ಪೊಲೀಸರು!
ರೋಷನ್ ಸಲ್ಡಾನ, ಅವರ ಪತ್ನಿ ಢಫ್ನಿ ನೀತು ಹಾಗೂ ಇತರರ ವಿರುದ್ಧ ದಾಖಲಾದ ಎಫ್ಐಆರ್ ಆಧಾರದಲ್ಲಿ ಇ.ಡಿ. ತನಿಖೆಯನ್ನು ಪ್ರಾರಂಭಿಸಿದೆ. ರೋಷನ್ ಸಲ್ಡಾನ್ ಕೋಟಿಗಟ್ಟಲೆ ಸಾಲ ಕೊಡಿಸುವ ಆಮಿಷವೊಡ್ಡಿ ₹200 ಕೋಟಿಗೂ ಅಧಿಕ ವಂಚನೆ ಮಾಡಿದ್ದರು. ದೇಶದ ಐಷಾರಾಮಿ ವ್ಯಕ್ತಿಗಳು ಹಾಗೂ ಉದ್ಯಮಿಗಳನ್ನು ವಂಚಿಸಿರುವ ಆರೋಪಿ, ನೂರಾರು ಕೋಟಿ ಸಾಲ ತೆಗೆಸಿಕೊಡುವುದಾಗಿ ಹೇಳಿ ₹5 ರಿಂದ 10 ಕೋಟಿ ಮುಂಗಡ ಹಣ ಪಡೆದು ಮೋಸ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
ಈ ಪ್ರಕರಣದಲ್ಲಿ ಇಬ್ಬರು ಉದ್ಯಮಿಗಳು ನೀಡಿದ ದೂರಿನ ಆಧಾರದಲ್ಲಿ ಕಳೆದ ಜುಲೈ 17ರಂದು ಮಂಗಳೂರು ಪೊಲೀಸರು ರೋಷನ್ ಸಲ್ಡಾನನನ್ನು ಬಂಧಿಸಿದ್ದರು.
