ಉಡುಪಿ: ಆಡಿಯೋ ಕಳಿಸಿ ತನ್ನ ಸ್ನೇಹಿತರಿಂದಲೇ ಹತ್ಯೆಗೀಡಾದ ಉಡುಪಿ ಪುತ್ತೂರು ಗ್ರಾಮದ ಲಿಂಗೋಟ್ಟುಗುಡ್ಡೆ ನಿವಾಸಿ ವಿನಯ್ ದೇವಾಡಿಗ(40) ದೇವಾಡಿಗನಿಗೆ ತುಳುನಾಡಿನ ಕಾರಣಿಕ ದೈವ ಬೊಬ್ಬರ್ಯನ ಶಾಪ ತಟ್ಟಿತೇ ಎಂಬ ಚರ್ಚೆಗಳು ಊರಿನಲ್ಲಿ ಆರಂಭಗೊಂಡಿದೆ.

ನಿನ್ನೆ ಹತ್ಯೆಗೀಡಾದ ವಿನಯ್ ದೇವಾಡಿಗ ಮಲ್ಪೆಯ ನಟೋರಿಯಸ್ ಸುಜಿತ್ ಪಿಂಟೋ ಗ್ಯಾಂಗ್ನ ಸದಸ್ಯನಾಗಿದ್ದು, ಈ ಹಿಂದೆ ನಡೆದಿದ್ದ ಯೋಗೀಶ್ ಪೂಜಾರಿ ಎಂಬಾತನ ಕೊಲೆ ಆರೋಪಿ ಎಂಬ ಮಾಹಿತಿ ಲಭಿಸಿದೆ.
2020ರ ಜುಲೈಯಲ್ಲಿ ಮಲ್ಪೆ ಸಮೀಪದ ತೆಂಕನಿಡಿಯೂರಿನ ಲಕ್ಷ್ಮಿನಗರ ನಿವಾಸಿ ಯೋಗೀಶ್ ಪೂಜಾರಿ(26) ಎಂಬಾತನ ಹತ್ಯೆ ನಡೆದಿತ್ತು. 2020ರ ಜುಲೈ 6ರ ಭಾನುವಾರ ರಾತ್ರಿ 11.30ರ ಸುಮಾರಿಗೆ ಕಾರಿನಲ್ಲಿ ಬಂದ ತಂಡವೊಂದು ಯೋಗೀಶ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೈದು ಹತ್ಯೆ ನಡೆಸಿತ್ತು. ಇದೀಗ ವಿನಯ್ ಕೂಡಾ ಇದೇ ಮಾದರಿಯಲ್ಲಿ ಹತ್ಯೆಯಾಗಿದ್ದಾನೆ. ಇದಕ್ಕೆ ಬೊಬ್ಬರ್ಯ ದೈವದ ಶಾಪವೇ ಕಾರಣ ಎನ್ನುವುದು ಸದ್ಯ ನಡೆಯುತ್ತಿರುವ ಚರ್ಚೆಯಾಗಿದೆ.

ಅಮಾಯಕ ಯೋಗೀಶ್ ಪೂಜಾರಿ ಹತ್ಯೆಯಲ್ಲಿ ಖ್ಯಾತ ರೌಡಿ ಶೀಟರ್ ಸುಜಿತ್ ಪಿಂಟೋ, ಈತನ ಅಣ್ಣ ರೋಹಿತ್ ಪಿಂಟೋ, ಅನ್ನು ಅಲಿಯಾಸ್ ಪ್ರದೀಪ್, ಅನುಪ್ ಕುಂದರ್ ಮತ್ತು ನಿನ್ನೆ ಹತ್ಯೆಗೀಡಾದ ವಿನಯ್ ದೇವಾಡಿಗ ಶಾಮೀಲಾಗಿದ್ದ.
ಯೋಗೀಶ್ ಪೂಜಾರಿ ಹತ್ಯೆಯಿಂದ ತೀವ್ರ ಸಂಕಟ ಪಡುತ್ತಿದ್ದ ಆತನ ಕುಟುಂಬಿಕರು ತಮ್ಮ ಕುಲದೈವ ಬೊಬ್ಬರ್ಯನ ಮೊರೆ ಹೋಗಿದ್ದರು. ಆಗ ದೈವ ಮನೆಯವರಿಗೆ ಅಭಯ ನೀಡಿತ್ತು ಎಂದು ಸ್ಥಳೀಯರು ಘಟನೆಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ವಿಚಿತ್ರ ಎಂಬಂತೆ ನಿನ್ನೆ ಯೋಗೀಶ್ ಪೂಜಾರಿ ಹತ್ಯೆಯ ಮಾದರಿಯಲ್ಲೇ ಸ್ನೇಹಿತರೇ ಮನೆಗೆ ನುಗ್ಗಿ ವಿನಯ್ ದೇವಾಡಿಗನನ್ನು ಎತ್ತಿಬಿಟ್ಟಿದ್ದಾರೆ.

ಸುಜಿತ್ ಪಿಂಟೋ ಗ್ಯಾಂಗ್ನಲ್ಲಿ ಗುರುತಿಸಿಕೊಂಡಿದ್ದ ವಿನಯ್ ದೇವಾಡಿಗನನ್ನು ಹತ್ಯೆ ನಡೆಸಿದ್ದ ಆರೋಪಿಗಳು ಮೊದಲು ಒಟ್ಟಾಗಿಯೇ ಇದ್ದರು. ವಿನಯ್ ಮೇಲೆ ಕೊಲೆ ಆರೋಪ ಮಾತ್ರವಲ್ಲದೆ ಇತರ ಪ್ರಕರಣಗಳೂ ದಾಖಲಾಗಿವೆ ಎನ್ನಲಾಗಿದೆ. ಊರಿನಲ್ಲಿ ಮೆರೆದಾಡುತ್ತಿದ್ದ ವಿನಯ್ ಬಗ್ಗೆ ಸ್ಥಳೀಯರಿಗೆ ಉತ್ತಮ ಅಭಿಪ್ರಾಯಗಳಿರಲಿಲ್ಲ. ಇದೀಗ ಯೋಗೀಶ್ ಪೂಜಾರಿ ಹತ್ಯೆಯ ಮಾದರಿಯಲ್ಲಿಯೇ ವಿನಯ್ ಹತ್ಯೆ ನಡೆದಿರುವುದಕ್ಕೆ ದೈವದ ಶಾಪವೇ ಕಾರಣ ಎಂದು ಊರವರು ಚರ್ಚಿಸಲಾರಂಭಿಸಿದ್ದಾರೆ.
ಗುಂಡು ಪಾರ್ಟಿ ಪ್ರಶ್ನಿಸಿದ್ದಕ್ಕೆ ಯೋಗೀಶ್ ಕೊಲೆ!
ಲಾಕ್ಡೌನ್ ಸಂದರ್ಭ ಆರೋಪಿಗಳು ಸ್ಥಳೀಯ ಶಾಲೆಯ ಜಗಲಿಯಲ್ಲಿ ಗುಂಡು ಪಾರ್ಟಿ ಮಾಡುತ್ತಿದ್ದಾಗ ಇದನ್ನು ಯೋಗೀಶ್ ಪೂಜಾರಿ ಪ್ರಶ್ನಿಸಿದ್ದ. ಈ ಬಗ್ಗೆ ತಮ್ಮ ತಂಡದ ಪ್ರಮುಖನಾದ ಸುಜಿತ್ ಪಿಂಟೋ ದೂರು ಹೋಗಿತ್ತು. ಅದರ ದ್ವೇಷದಿಂದ ಅಮಾಯಕ ಯೋಗೀಶ್ ಪೂಜಾರಿಯನ್ನು ತಂಡ ಮಾರಕಾಸ್ತ್ರಗಳಿಂದ ಇರಿದಿದ್ದು, ಗಂಭೀರ ಗಾಯಗೊಂಡಿದ್ದ ಯೋಗೀಶ್ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು.