ಉಡುಪಿ: ಬೈದಿರುವ ಆಡಿಯೋವನ್ನು ವೈರಲ್ ಮಾಡಿದ ಕ್ಷುಲಕ ಕಾರಣಕ್ಕಾಗಿ ಮೂವರು ಸ್ನೇಹಿತರು ಮನೆಗೆ ನುಗ್ಗಿ ಮತ್ತೊಬ್ಬ ಸ್ನೇಹಿತನ ತಲೆಯನ್ನು ಕಡಿದು ಬರ್ಬರವಾಗಿ ಹತ್ಯೆಗೈದ ಘಟನೆ ಉಡುಪಿ ತಾಲೂಕಿ ಪುತ್ತೂರು ಗ್ರಾಮದ ಸುಬ್ರಮಣ್ಯನಗರ 9ನೇ ಅಡ್ಡರಸ್ತೆಯಲ್ಲಿರುವ ಲಿಂಗೋಟ್ಟುಗುಡ್ಡೆಯಲ್ಲಿ ಆ.12ರಂದು ರಾತ್ರಿ 11:30ರ ಸುಮಾರಿಗೆ ಸಂಭವಿಸಿದೆ. ಇಲ್ಲಿನ ನಿವಾಸಿ ವಿನಯ್ ದೇವಾಡಿಗ (40) ಕೊಲೆಗೀಡಾದ ದುರ್ದೈವಿ. ಕೃತ್ಯವನ್ನು ತಡೆಯಲು ಬಂದ ವಿನಯ್ ಪತ್ನಿಗೂ ಗಾಯವಾಗಿದೆ ಎನ್ನಲಾಗಿದೆ.

ಬ್ರಹ್ಮಾವರ ಕೊಕ್ಕರ್ಣೆಯ ಗಾಂಧಿನಗರ ನಿವಾಸಿಗಳಾದ ಅಜಿತ್(28), ಅಕ್ಷೇಂದ್ರ (34) ಹಾಗೂ ಕೊಕ್ಕರ್ಣೆ ಬೆನಗಲ್ ನಿವಾಸಿ ಪ್ರದೀಪ್ ಆಚಾರ್ಯ ಪ್ರಕರಣದ ಆರೋಪಿಗಳಾಗಿದ್ದಾರೆ. ಕೃತ್ಯ ಎಸಗಿದ ಆರೋಪಿಗಳು ಪೊಲೀಸರಿಗೆ ಸ್ವತಃ ಶರಣಾಗಿದ್ದು, ವಿಚಾರಣೆ ನಡೆಸಿದ್ದಾರೆ.

ಆರೋಪಿಗಳ ಪೈಕಿ ಅಕ್ಷೇಂದ್ರನಿಗೆ ಜೀವನ್ ಎಂಬಾರತ ಬೈದಿರುವ ಆಡಿಯೋವನ್ನು ವಿನಯ್ ದೇವಾಡಿಗ ಶೇರ್ ಮಾಡಿದ್ದಕ್ಕಾಗಿ ಆರೋಪಿಗಳು ಕೃತ್ಯ ಎಸಗಿದ್ದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಘಟನೆಯ ವಿವರ: ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ ವಿನಯ್ ದೇವಾಡಿಗರು ಉಡುಪಿಗೆ ಹೋಗಿ ಸಂಜೆ 6 ಗಂಟೆಗೆ ಮನೆಗೆ ಬಂದು ಕೋಣೆಯಲ್ಲಿ ಮಲಗಿದ್ದರು. ರಾತ್ರಿ 11ರ ಸುಮಾರಿಗೆ ವಿನಯ್ ಅಟಕಾಯಿಸಿದ ಸ್ನೇಹಿತರು ಮನೆಯನ್ನೆಲ್ಲಾ ಜಾಲಾಡಿದ್ದಾರೆ. ಶಬ್ದದಿಂದ ಎಚ್ಚರಗೊಂಡ ವಿನಯ್ ಎದ್ದಾಗ ಅವರ ಮೊಬೈಲನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಆಗ ಆರೋಪಿ ಅಜಿತ್, ವಿನಯ್ ರನ್ನು ತಪ್ಪಿಸಿಕೊಳ್ಳದಂತೆ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದ. ಆಗ ಆಕ್ಷೇಂದ್ರ ಹಾಗೂ ಪ್ರದೀಪ್ ಮಚ್ಚು ಹಾಗೂ ಚಾಕುವಿನಿಂದ ವಿನಯ್ ದೇವಾಡಿಗ ಅವರ ತಲೆಯನ್ನು ಕಡಿದು, ಕೊಲೆ ಮಾಡಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ಸ್ಕೂಟರ್ನಲ್ಲಿ ಪರಾರಿಯಾಗಿ ಮರುದಿನ ಪೊಲೀಸರಿಗೆ ಶರಣಾದರು ಎಂದು ಹೇಳಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.