ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಕೆಕ್ಕನಹಳ್ಳ ರಸ್ತೆಯಲ್ಲಿ ಪ್ರವಾಸಿಗನ ಮೇಲೆ ಕಾಡಾನೆ ದಾ ನಡೆದಿದೆ.
ಅದೃಷ್ಟವಶಾತ್ ಆನೆ ಕಾಲಿನಡಿ ಸಿಲುಕಿದರೂ ಪ್ರವಾಸಿಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಗಾಯಗೊಂಡಾತ ಕೇರಳ ಮೂಲದ ಪ್ರವಾಸಿಗನಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ಬಂಡೀಪುರ ರಸ್ತೆಯಲ್ಲಿ ಕಾಡಾನೆ ನಿಂತು ವಾಹನಗಳಲ್ಲಿ ನೀಡುವ ಆಹಾರ ತಿನ್ನುವ ಅಭ್ಯಾಸವಾಗಿ ಹೋಗಿದೆ. ಈ ರೀತಿ ರಸ್ತೆಯಲ್ಲಿ ನಿಂತಿದ್ದ ಆನೆಯನ್ನು ನೋಡಿದ ಪ್ರವಾಸಿಗರು ಕಾರಿನಿಂದ ಇಳಿದು ಹತ್ತಿರದಲ್ಲೇ ವೀಕ್ಷಿಸುತ್ತಿದ್ದರು.
ಈ ವೇಳೆ ಎದುರು ಇದ್ದ ಪ್ರವಾಸಿಗನೊಬ್ಬನ ಮೇಲೆ ಆನೆ ದಾಳಿ ಮಾಡಿದೆ. ಓಡುತ್ತಿದ್ದ ಪ್ರವಾಸಿಗ ಕೆಳಗೆ ಬಿದ್ದಾಗ ಆನೆ ತುಳಿಯಲು ಪ್ರಯತ್ನ ಮಾಡಿದೆ. ಆದರೆ ಪ್ರವಾಸಿಗನ ಅದೃಷ್ಟ ಚೆನ್ನಾಗಿದ್ದು, ಪ್ರಾಣ ಉಳಿದುಕೊಂಡಿದೆ. ಗಾಯಾಳುವನ್ನು ಜೊತೆಗೆ ಬಂದಿದ್ದವರು ಆಸ್ಪತ್ರೆಗೆ ದಾಖಲಿಸಿದ್ದಾರೆ ಸಾಮಾಜಿಕ ಜಾಲತಾಣಗಳಲ್ಲಿ ಆನೆ ದಾಳಿಯ ವಿಡಿಯೋ ವೈರಲ್ ಆಗಿದೆ.
ಬಂಡೀಪುರ ರಕ್ಷಿತಾರಣ್ಯದಲ್ಲಿ ಪ್ರವಾಸಿಗರ ಹುಚ್ಚಾಟ ಮಿತಿಮೀರಿದ್ದು, ಕಾಡುಪ್ರಾಣಿಗಳೊಂದಿಗೆ ಚೇಷ್ಠೆ ಮಾಡಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ರಾತ್ರಿ ವೇಳೆ ಪ್ರವಾಸಿಗರ ವಾಹನಗಳನ್ನು ಬಿಡಲಾಗುತ್ತಿದ್ದು, ವಾಹನಗಳ ಚಕ್ರಕ್ಕೆ ಸಿಲುಕಿ ಮುಗ್ಧ ಜೀವಿಗಳು ಅಸುನೀಗುತ್ತಿದೆ. ಆದರೆ ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ, ರಾತ್ರಿ ವೇಳೆ ಸಫಾರಿ ನಿಲ್ಲಿಸುತ್ತಿಲ್ಲ ಎಂದು ಪ್ರಾಣಿ ಪ್ರಿಯರು ಆರೋಪಿಸಿದ್ದಾರೆ.