
ಮಂಗಳೂರು: ಮಂಗಳೂರು ಹೊರವಲಯದ ಕುಡುಪು ಮೈದಾನದ ಸಮೀಪ ನಡೆದ ಯುವಕನ ಕೊಲೆಯಲ್ಲಿ ಮಾಜಿ ಕಾರ್ಪೊರೇಟರ್ ಓರ್ವರ ಪತಿಯೂ ಶಾಮೀಲಾಗಿದ್ದಾರೆನ್ನು ಆರೋಪವಿದೆ. ಪ್ರಕರಣದ ಸಮಗ್ರ ತನಿಖೆ ನಡೆಸಿ ಸತ್ಯ ಹೊರಗೆಳೆಯಬೇಕು ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ ಪೊಲೀಸರನ್ನು ಆಗ್ರಹಿಸಿದ್ದಾರೆ.
ಈ ಕುರಿತಂತೆ ಹೇಳಿಕೆ ನೀಡಿದ ಅವರು, ʻವಲಸೆ ಕಾರ್ಮಿಕನನ್ನು ಆತನ ಧರ್ಮದ ಗುರುತಿನ ಕಾರಣಕ್ಕೆ ಕಲ್ಲು, ದೊಣ್ಣೆ, ಬ್ಯಾಟುಗಳಿಂದ ಅಲ್ಲಿದ್ದ ಗುಂಪು ಹಲ್ಲೆ ನಡೆಸಿ ಕೊಂದು ಹಾಕಿರುವ ಆರೋಪ ಕೇಳಿಬರುತ್ತಿದೆ. ಮುಸ್ಲಿಂ ವಲಸೆ ಕಾರ್ಮಿಕ ದೇಶ ವಿರೋಧಿ ಘೋಷಣೆ ಕೂಗಿದ್ದಾನೆ ಎಂಬ ವದಂತಿ ಹಬ್ಬಿಸಿ ವಲಸೆ ಕಾರ್ಮಿಕನನ್ನು ಗುಂಪು ಕೊಂದಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿದೆ. ಮಾಜಿ ಕಾರ್ಪೊರೇಟರ್ ಓರ್ವರ ಪತಿಯೂ ಗುಂಪಿನಲ್ಲಿರುವ ಆರೋಪ ಕೇಳಿಬಂದಿದೆ. ಸ್ಥಳೀಯ ಶಾಸಕರು ಮತ್ತು ಬಿಜೆಪಿ ನಾಯಕರು ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗಿದೆ. ಮಂಗಳೂರು ಪೊಲೀಸರ ಮೌನದ ಬಗ್ಗೆಯೂ ಶಂಕೆ ಉಂಟಾಗಿದೆ. ಪೊಲೀಸರು ನಿಷ್ಪಕ್ಷಪಾತವಾಗಿ ಮತ್ತು ಗಂಭೀರವಾಗಿ ಈ ಪ್ರಕರಣವನ್ನು ತನಿಖೆ ನಡೆಸಬೇಕು, ವಿಶೇಷ ತನಿಖಾ ತಂಡವನ್ನು ರಚಿಸಿ ಅಮೂಲಾಗ್ರ ತನಿಖೆ ನಡೆಸಬೇಕು, ಸತ್ಯ ಹೊರಗೆ ಬರಬೇಕು ಶಾಹುಲ್ ಹಮೀದ್ ಕೆ.ಕೆ ಆಗ್ರಹಿಸಿದ್ದಾರೆ.