ಮಂಗಳೂರು: ಕೆನರಾ ಇಂಜಿನಿಯರಿಂಗ್ ಕಾಲೇಜಿನ ಕೆನರಾ ಇನೋವೇಷನ್ ಫೌಂಡೇಶನ್ ಆಶ್ರಯದಲ್ಲಿ ಬೆಳೆಯುತ್ತಿರುವ “ಸಮೃದ್ಧಿ ಆರ್ಗಾನಿಕ್ಸ್” ವಿದ್ಯಾರ್ಥಿ ಸ್ಟಾರ್ಟಪ್ ಕೃಷಿ ಕ್ಷೇತ್ರದಲ್ಲಿ ತನ್ನ ನವೀನ ಕಾರ್ಯಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಿದೆ.

ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಾಹಿತಿ ತಂತ್ರಜ್ಞಾನ-ಜೈವಿಕ ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ, ಬೆಂಗಳೂರು ಬಯೋ ಇನೋವೇಷನ್ ಸೆಂಟರ್ (BBC) ವತಿಯಿಂದ ಮೇ 12ರಂದು ಕಲಬುರಗಿಯ “ಝೆಸ್ಟ್ ಕ್ಲಬ್”ನಲ್ಲಿ ಆಯೋಜಿಸಲಾದ “ಫಾರ್ಮರ್ ಪ್ರೊಡ್ಯೂಸರ್ ಆರ್ಗನೈಸೇಷನ್ಸ್ (FPOs) ಮತ್ತು ಸ್ಟಾರ್ಟಪ್ಸ್ ಸಮಾವೇಶ – 2026” ಕಾರ್ಯಕ್ರಮದಲ್ಲಿ ಈ ಸ್ಟಾರ್ಟಪ್ ತಂಡ ಭಾಗವಹಿಸಿ ವಿಶೇಷ ಮೆಚ್ಚುಗೆ ಗಳಿಸಿತು. ಸೆಕ್ಷನ್ ಇನ್ಫಿನ್-8 ಫೌಂಡೇಶನ್ ಸಲಹೆಯ ಮೇರೆಗೆ ಈ ತಂಡ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿತ್ತು.

ಕೆನರಾ ಇಂಜಿನಿಯರಿಂಗ್ ಕಾಲೇಜಿನ 3ನೇ ವರ್ಷದ ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ವಿಭಾಗದ ವಿದ್ಯಾರ್ಥಿ ಸಾತ್ವಿಕ್ ಕೃಷ್ಣ ನೇತೃತ್ವದ ತಂಡದಲ್ಲಿ ಸುಹಾನ್, ಧನುಷ್ ಹಾಗೂ ಶಾನ್ ಡಿಸೋಜ ಕಾರ್ಯನಿರ್ವಹಿಸುತ್ತಿದ್ದಾರೆ. ಕೃಷಿ ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಈ ತಂಡ ರೈತರ ಜಮೀನಿನಿಂದ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ, ಅವುಗಳ ಪರೀಕ್ಷಾ ವರದಿ ಆಧರಿಸಿ ಗೊಬ್ಬರ ಸಲಹೆಗಳನ್ನು ನೀಡುವ ಯೋಜನೆಯನ್ನು ರೂಪಿಸಿದೆ.

ಸಾವಯವ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಈ ಸ್ಟಾರ್ಟಪ್ ರೈತರಿಗೆ ತಾಂತ್ರಿಕ ನೆರವು ಹಾಗೂ ವೈಜ್ಞಾನಿಕ ಆಧಾರಿತ ಕೃಷಿ ಸಲಹೆಗಳನ್ನು ಒದಗಿಸುತ್ತಿದೆ. ಸಮಾವೇಶದಲ್ಲಿ ಕೃಷಿ ತಂತ್ರಜ್ಞಾನ, ಸಾವಯವ ಗೊಬ್ಬರ, ಎಫ್ಪಿಒಗಳ ಪಾತ್ರ ಮತ್ತು ಯುವ ಉದ್ಯಮಿಗಳ ಅವಕಾಶಗಳ ಕುರಿತು ವಿವಿಧ ತಜ್ಞರಿಂದ ಉಪನ್ಯಾಸಗಳು ನಡೆದವು. NABARD, KSDA ಹಾಗೂ KSDH ಸಂಸ್ಥೆಗಳ ಸಹಯೋಗವೂ ಕಾರ್ಯಕ್ರಮಕ್ಕೆ ಲಭ್ಯವಿತ್ತು.

ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಆಶ್ರಯದಲ್ಲಿ ಆರಂಭಗೊಂಡಿರುವ ಕೆನರಾ ಇನೋವೇಷನ್ ಫೌಂಡೇಶನ್ ವಿದ್ಯಾರ್ಥಿಗಳಲ್ಲಿ ನವೀನತೆ ಮತ್ತು ಸ್ಟಾರ್ಟಪ್ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ. ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಡಾ. ಉದಯ ಕುಮಾರ್ ಕೆ. ಶೆಣೈ ಮಾರ್ಗದರ್ಶನ ನೀಡುತ್ತಿದ್ದು, ಕೆನರಾ ಇನೋವೇಷನ್ ಫೌಂಡೇಶನ್ನ ಸಿಇಒ ಪ್ರಶಾಂತ್ ಕುಮಾರ್ ಎ. ಮಾರ್ಗದರ್ಶಕರಾಗಿ ಬೆಂಬಲ ನೀಡುತ್ತಿದ್ದಾರೆ.