ಬ್ರಹ್ಮಕುಮಾರೀಸ್ ಮಂಗಳೂರು ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಕದ್ರಿ ಮೈದಾನದಲ್ಲಿ ಸುಪ್ರಸಿದ್ದ ದ್ವಾದಶ ಜ್ಯೋತಿರ್ಲಿಂಗ ಪ್ರದರ್ಶನ

ಮಂಗಳೂರು: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಮಂಗಳೂರು ಇವರ ವತಿಯಿಂದ ಕದ್ರಿ ಮೈದಾನದಲ್ಲಿ ದಿನಾಂಕ 17 ಫೆಬ್ರವರಿವರೆಗೆ ಆಯೋಜಿಸಲಾಗಿದ್ದ ಪ್ರಸಿದ್ಧ ದ್ವಾದಶ ಜ್ಯೋತಿಲಿಂಗ ದರ್ಶನ ಹಾಗೂ ಪ್ರದರ್ಶನ ಕಾರ್ಯಕ್ರಮವು ಭಕ್ತಿಭಾವಪೂರ್ಣ ವಾತಾವರಣದಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ದ್ವಾದಶ ಜ್ಯೋತಿಲಿಂಗಗಳ ನೈಜ ರೂಪದ ಕಲಾತ್ಮಕ ಪ್ರದರ್ಶನ ಜನಮನ ಸೆಳೆಯಿತು. ದೇಶದ ವಿವಿಧ ಪವಿತ್ರ ಕ್ಷೇತ್ರಗಳಲ್ಲಿ ಸ್ಥಿತವಾಗಿರುವ ಸೋಮನಾಥ, ಮಲ್ಲಿಕಾರ್ಜುನ, ಮಹಾಕಾಳೇಶ್ವರ, ಓಂಕಾರೇಶ್ವರ, ಕೇದಾರನಾಥ, ಭೀಮಾಶಂಕರ, ವಿಶ್ವನಾಥ, ತ್ರ್ಯಂಬಕೇಶ್ವರ, ವೈಧ್ಯನಾಥ, ನಾಗೇಶ್ವರ, ರಾಮೇಶ್ವರ ಮತ್ತು ಘೃಷ್ಣೇಶ್ವರ ಜ್ಯೋತಿಲಿಂಗಗಳ ಮಾದರಿಗಳನ್ನು ಅತ್ಯಂತ ಭಕ್ತಿಭಾವದಿಂದ ಹಾಗೂ ವೈಭವೋಪೇತವಾಗಿ ಪ್ರದರ್ಶಿಸಲಾಗಿತ್ತು.

ಭಕ್ತರು ದರ್ಶನ ಪಡೆದು ಆತ್ಮಶಾಂತಿ, ಭಕ್ತಿ ಹಾಗೂ ಧಾರ್ಮಿಕ ಪ್ರೇರಣೆಯನ್ನು ಅನುಭವ ಮಾಡಿದರು ವಿಶೇಷವಾಗಿ ಯುವಜನತೆ ಮತ್ತು ಮಹಿಳೆಯರ ಪಾಲ್ಗೊಳ್ಳುವಿಕೆ ಗಮನಾರ್ಹವಾಗಿತ್ತು.

ಕಾರ್ಯಕ್ರಮವನ್ನು ಶ್ರೀ ವರ್ಧರ್ಮಾನ ದುರ್ಗಾ ಪ್ರಸಾದ್ ಶೆಟ್ಟಿ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಎನ್. ಪ್ರದೀಪ್ ಕುಮಾರ್ ಕಲ್ಕೂರ ಶ್ರೀ ಕೃಷ್ಣಮೂರ್ತಿ ಹಾಗೂ ಶ್ರೀ ಕೀರ್ತಿರಾಜ್ ಅವರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಕುಮಾರಿ ವಿಶ್ವೇಶ್ವರಿ ಅವರು ವಹಿಸಿದ್ದರು. ಅವರು ಮಾತನಾಡಿ, ಇಂತಹ ಆಧ್ಯಾತ್ಮಿಕ ಪ್ರದರ್ಶನಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಕಾರ್ಯಕ್ರಮ ನಿರ್ವಹಣೆ ರೋಷನ್ ಮಾಡಿದರು, ಸಂಸ್ಥೆ ಪರಿಚಯ ಬಿ ಕೆ ಅಂಬಿಕಾ ನೀಡಿದರು, ಬಿ ಕೆ ಸ್ನೇಹ ಸ್ವಾಗತಿಸಿದರು.

ನೂರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ವಾದಶ ಜ್ಯೋತಿಲಿಂಗ ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಾರ್ವಜನಿಕರಿ 17 ರವರೆಗೆ ಉಚಿತವಾಗಿ ಪ್ರದರ್ಶನಕ್ಕೆ ಅವಕಾಶವನ್ನು ನೀಡಲಾಗಿದೆ.

error: Content is protected !!