ಭರವಸೆಯ ದೀಪವಾಗಿ ಬೆಳಗಿದ ಬಾಲ ಏಸು ಮಂದಿರ: ಬಿಕರ್ನಕಟ್ಟೆ ಜಾತ್ರೆಯಲ್ಲಿ ಜಾತಿ ಮತ ಮರೆತು ಒಂದಾದ ಜನಸಾಗರ

ಮಂಗಳೂರು: ಬಿಕರ್ನಕಟ್ಟೆಯಲ್ಲಿರುವ ಇನ್ಫಂಟ್ ಜೀಸಸ್ ಶ್ರೈನ್ (ಬಾಲ ಏಸು ಮಂದಿರ)ದಲ್ಲಿ ವಾರ್ಷಿಕ ಜಾತ್ರೆ ಇಂದು ಭಕ್ತಿ, ಶ್ರದ್ಧೆ ಹಾಗೂ ಸಡಗರದೊಂದಿಗೆ ಅದ್ದೂರಿಯಾಗಿ ನೆರವೇರಿತು. ಬೆಳಿಗ್ಗೆಯಿಂದಲೇ ಭಕ್ತರ ನಿರಂತರ ಹರಿವು ಕಂಡುಬಂದಿದ್ದು, ಜಾತಿ, ಧರ್ಮ ಮರೆತು ಅಪಾರ ಸಂಖ್ಯೆಯ ಬಾಲ ಕ್ರಿಸ್ತನ ಭಕ್ತರು ಶಿಸ್ತಿನಿಂದ ಜಾತ್ರಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

ಜಾತ್ರೆಯ ಪ್ರಮುಖ ಅಂಗವಾಗಿ ಕೊಂಕಣಿ ಭಾಷೆಯಲ್ಲಿ ಪ್ರಾರ್ಥನೆ, ಪ್ರವಚನ ಹಾಗೂ ಪವಿತ್ರ ಬಲಿಪೂಜೆಗಳು ನಡೆಯಿತು. ಭಕ್ತರು ಅಕ್ಕಿಯ ಕಾಣಿಕೆ ಅರ್ಪಿಸುವ ಮೂಲಕ ತಮ್ಮ ಕೃತಜ್ಞತೆ ಹಾಗೂ ಭಕ್ತಿಭಾವವನ್ನು ವ್ಯಕ್ತಪಡಿಸಿದರು. ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಕ್ಷೇತ್ರವೆಂದು ಜನಪ್ರಿಯವಾಗಿರುವ ಈ ಮಂದಿರವನ್ನು ‘ಪವಾಡ ಕ್ಷೇತ್ರ’ ಎಂದೂ ಕರೆಯಲಾಗುತ್ತಿದ್ದು, ಅನೇಕರು ಇದನ್ನು ಚೈತನ್ಯಮಯ ಹೀಲಿಂಗ್ ಕೇಂದ್ರವಾಗಿಯೂ ಭಾವಿಸುತ್ತಾರೆ.

ಕೊಂಕಣಿ ಭಾಷೆಯಲ್ಲಿ ನಡೆದ ಸ್ತುತಿ–ಸ್ತೋತ್ರಗಳ ಮೂಲಕ ಬಾಲ ಏಸುವಿನ ಮಹಿಮೆಯನ್ನು ಕೊಂಡಾಡಲಾಯಿತು. ಭಕ್ತಿ ಸಂಗೀತ ಹಾಗೂ ಪ್ರಾರ್ಥನಾ ವಾತಾವರಣದಿಂದ ಪೂರ್ಣ ಪ್ರದೇಶವೇ ಆಧ್ಯಾತ್ಮಿಕತೆಯಲ್ಲಿ ಲೀನವಾಗಿತ್ತು. ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಕುಟುಂಬ ಸಮೇತರಾಗಿ ಜಾತ್ರೆಯಲ್ಲಿ ಪಾಲ್ಗೊಂಡು ಬಾಲ ಏಸುವಿನ ಆಶೀರ್ವಾದವನ್ನು ಪಡೆದುಕೊಂಡರು.

ಜಾತ್ರೆಯ ಅಂಗವಾಗಿ ಭಕ್ತರಿಗೆ ಸಾತ್ವಿಕ ಸಸ್ಯಾಹಾರಿ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿದ್ದು, ಸೇವಾ ಮನೋಭಾವದೊಂದಿಗೆ ಸ್ವಯಂಸೇವಕರು ಕರ್ತವ್ಯ ನಿರ್ವಹಿಸಿದರು. ಮಂದಿರದ ಸುತ್ತಮುತ್ತಲಿನ ಮನೋಹರ ಹಾಗೂ ಸುಂದರ ಪರಿಸರವು ಈ ಕ್ಷೇತ್ರವನ್ನು ಪ್ರಮುಖ ದಿವ್ಯ ಆಕರ್ಷಣೆಯ ತಾಣವಾಗಿಸಿದೆ.

ಕಾರ್ಯಕ್ರಮದ ಅಂತ್ಯದಲ್ಲಿ ಬಾಲ ಏಸುವಿನ ಪುತ್ಥಳಿಗೆ ಭಕ್ತರು ಗೌರವ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ವಾರ್ಷಿಕ ಜಾತ್ರೆಯು ಭಕ್ತರ ಮನಗಳಲ್ಲಿ ಭರವಸೆ, ಶಾಂತಿ ಹಾಗೂ ಆತ್ಮವಿಶ್ವಾಸವನ್ನು ಮೂಡಿಸಿ ಆಧ್ಯಾತ್ಮಿಕ ಸಂಸ್ಕೃತಿಯ ಜೀವಂತ ಪ್ರತೀಕವಾಗಿ ಮೂಡಿಬಂದಿತು

error: Content is protected !!