ನವದೆಹಲಿ: ಕೇರಳ, ಮಂಗಳೂರು ಗೋವಾ ಮೂಲಕ ಮಹಾರಾಷ್ಟ್ರ ತಲುಪುವ ರೈಲ್ವೆ ಮಾರ್ಗ ಅಭಿವೃದ್ಧಿಪಡಿಸಿ ಪೂರ್ಣಮಾರ್ಗವನ್ನು ದ್ವಿಪಥಗೊಳಿಸಲು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಲು ಕೇರಳ, ಗೋವಾ ಸರಕಾರಗಳು ಈಗಾಗಲೇ ಒಪ್ಪಿಗೆ ನೀಡಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ಸರಕಾರಗಳು ಕೂಡ ಸಮ್ಮತಿಸಿದ ಬಗ್ಗೆ ಮಾಹಿತಿ ಇದೆ. ಆದಾಗ್ಯೂ ವಿಲೀನ ವಿಳಂಬವಾಗುತ್ತಿದ್ದು, ಕೊಂಕಣ ರೈಲ್ವೆ ಮಾರ್ಗ ಮತ್ತು ನಿಲ್ದಾಣ ಅಭಿವೃದ್ಧಿಗೆ ತೊಡಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೊಂಕಣ ರೈಲ್ವೆ ಏಕಪಥ ಹಳಿಯನ್ನು ಹೊಂದಿರುವುದರಿಂದ ಹೊಸ ರೈಲುಗಳನ್ನು ಓಡಿಸಲಾಗದ ಒತ್ತಡವಿದೆ. ರೈಲ್ವೆ ಹಳಿಗಳ ದ್ವಿಪಥ ಮತ್ತು ಆಧುನಿಕರಣ ಮಾಡಲು ಸಹಜವಾಗಿಯೆ ಕೊಂಕಣ ರೈಲ್ವೆ ಅನುದಾನದ ಕೊರತೆ ಅನುಭವಿಸುತ್ತಿದೆ.
ಹಾಗೊಂದು ವೇಳೆ ನಿಯಮಗಳು ಮತ್ತು ಸಮನ್ವತೆಯ ಗೊಂದಲದಿಂದ ಕೊಂಕಣ ರೈಲ್ವೆ ಭಾರತೀಯ ರೈಲ್ವೆಯಲ್ಲಿ ವಿಲೀನ ವಿಳಂಬವಾದರೆ ಪ್ರಯಾಣಿಕರ ಹಿತದೃಷ್ಟಿಯಿಂದ ಮಂಗಳೂರು, ಮುಂಬೈವರೆಗೆ ಹಳಿಗಳ ದ್ವಿಪಥ ಕಾಮಗಾರಿ ಕೈಗತ್ತಿಕೊಳ್ಳಬೇಕೆಂದು ಸಂಸದ ಕೋಟ ಲೋಕಸಭೆಯ ನಿಯಮ 377 ರಡಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
