ಬೆಂಗಳೂರು: ಎರಡೂವರೆ ವರ್ಷಗಳ ಬಳಿಕ ಮುಖ್ಯಮಂತ್ರಿ ಸ್ಥಾನವನ್ನು ಡಿಕೆಶಿಗೆ ಬಿಟ್ಟುಕೊಡುವುದಾಗಿ ಸಿದ್ದರಾಮಯ್ಯ ವಾಗ್ದಾನ ಮಾಡಿದ್ದರು ಎಂಬ ಹೇಳಿಕೆ ರಾಜಕೀಯ ಪಡಸಾಲೆಯಲ್ಲಿ ತೀವ್ರತೆ ಪಡೆಯುತ್ತಿದೆ. ಇದೀಗ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಡುವುದಿಲ್ಲ ಎಂದು ಸೂಚ್ಯವಾಗಿ ಹೇಳುತ್ತಿದ್ದಾರೆ. ಒಂದು ಸಿಎಂ ಸ್ಥಾನವನ್ನು ಡಿಕೆಶಿಗೆ ಬಿಟ್ಟುಕೊಡದೇ ಇದ್ದರೆ ಸಿದ್ದು ಮೇಕೆ ವಚನಭ್ರಷ್ಟ ಆರೋಪ ಬರುವ ಸಾಧ್ಯತೆಯೂ ಇದೆ.

ಇವೆಲ್ಲವುಗಳ ನುವೆಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮಾತೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 2018ರಲ್ಲಿ ಅಧಿವೇಷನ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಯಡಿಯೂರಪ್ಪನವರು ಶಿವಕುಮಾರ್ ಅವರ ಭವಿಷ್ಯವನ್ನೇ ನುಡಿದುಬಿಟ್ಟಿದ್ದರು ಎಂದು ಹೇಳಲಾಗುತ್ತಿದೆ. ಆಗ ಯಡಿಯೂರಪ್ಪನವರು ಹೇಳಿದ ಮಾತಿಗೆ ಶಿವಕುಮಾರ್ ಸುಮ್ಮನೇ ನಕ್ಕಿದ್ದರು. ಆದರೆ ಇದೀಗ ಅದೇ ನಿಜವಾಗುವಂತೆ ರಾಜ್ಯ ರಾಜಕೀಯದಲ್ಲಿ ಕಾಣಿಸುತ್ತಿದೆ.

ನೀವು ಅಲ್ಲಿದ್ರೆ ಮುಖ್ಯಮಂತ್ರಿ ಆಗ್ತೀರಾ ಎಂದು ನಂಬಿದ್ದೀರಾ
ಅಷ್ಟಕ್ಕೂ ಯಡಿಯೂರಪ್ಪನವರು ಹೇಳಿದ್ದೇನು ಎಂದರೆ, ಡಿ.ಕೆ.ಶಿವಕುಮಾರ್ ಅವರೇ, ನೀವು ನಾಳೆ ಪಶ್ಚಾತ್ತಾಪ ಪಡುವವರು ಇದ್ದೀರಿ. ಯಾರೂ ಮಾಡಬಾರದ ಒಂದು ಅಕ್ಷಮ್ಯ ಅಪರಾಧ ಮಾಡಿ, ಈ ನಾಡಿನ ಜನರ ನಂಬಿಕೆ, ವಿಶ್ವಾಸ ದ್ರೋಹ ಮಾಡಿರುವವರನ್ನು ಮುಖ್ಯಮಂತ್ರಿ ಮಾಡಿದ್ದೀರಿ ಎಂದಿದ್ದರು. ನೀವೇ ಮುಖ್ಯಮಂತ್ರಿಯಾಗಬೇಕು ಎಂದು ಕನಸು ಕಾಣುತ್ತಿರುವ ನನ್ನನ್ನೇ ನೀವು ಖಳನಾಯಕ ಎನ್ನುತ್ತೀರಾ ಎಂದು ಪ್ರಶ್ನಿಸಿದ್ದರು.
2018ರಲ್ಲಿ ಮಾಜಿ ಸಿಎಂ ಯಡಿಯೂರಪ್ಪ ನುಡಿದಿದ್ದ ಭವಿಷ್ಯ
ನೀವು ಅಲ್ಲಿದ್ರೆ ಮುಖ್ಯಮಂತ್ರಿ ಆಗ್ತೀರಾ ಎಂದು ನಂಬಿದ್ದೀರಾ ಎಂದು ಹೇಳಿದಾಗ ಡಿ.ಕೆ.ಶಿವಕುಮಾರ್ ಜೋರಾಗಿ ನಕ್ಕಿದ್ದರು. ಇದರ ವಿಡಿಯೋ ವೈರಲ್ ಆಗುತ್ತಿದ್ದು, ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲ್ಲ ಎನ್ನುವ ವಿಶ್ವಾಸ ಅಂದೇ ಯಡಿಯೂರಪ್ಪನವರಿಗೆ ಇತ್ತು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಯಡಿಯೂರಪ್ಪನವರ ಬಾಯಲ್ಲಿ ಮಚ್ಚೆ ಇದ್ಯಾ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.
