ಕೆಂಪುಕೋಟೆ ಸ್ಫೋಟ ಪ್ರಕರಣ: ಕೊನೆಗೂ ಸಿಕ್ಕಿಬಿದ್ದ ಉಗ್ರರು

ನವದೆಹಲಿ: ಕಳೆದ ನವೆಂಬರ್‌ನಲ್ಲಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ನಡುಭಾಗದಲ್ಲಿ ಬಾಂಬ್ ಸಿಡಿದು 11 ಜೀವಗಳು ಬಲಿಯಾದಾಗ, ಅದು ಕೇವಲ ಒಂದು ಅಪಘಾತ ಅಥವಾ ಸಣ್ಣ ಗುಂಪಿನ ಕೃತ್ಯ ಎಂದು ಭಾವಿಸಲಾಗಿತ್ತು. ಆದರೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸದ್ದಿಲ್ಲದೆ ನಡೆಸಿದ ಕಾರ್ಯಾಚರಣೆ ಈಗ ಬೆಚ್ಚಿಬೀಳಿಸುವ ಸತ್ಯವೊಂದನ್ನು ಹೊರಹಾಕಿದೆ. ಕಾಶ್ಮೀರದ ಕಣಿವೆಯಲ್ಲಿ ಕುಳಿತು ದೆಹಲಿಯನ್ನು ನಡುಗಿಸಲು ಸ್ಕೆಚ್ ಹಾಕಿದ್ದ ‘ಅನ್ಸಾರ್ ಗಜ್ವತ್-ಉಲ್-ಹಿಂದ್’ (AGH) ಸಂಘಟನೆಯ ಇಬ್ಬರು ಪ್ರಮುಖ ಉಗ್ರರು ಈಗ NIA ಬಲೆಗೆ ಬಿದ್ದಿದ್ದಾರೆ.

ಬಂಧಿತರು ಸಾಮಾನ್ಯರಂತೆ ಕಂಡರೂ ಅವರ ಹಿನ್ನೆಲೆ ಮಾತ್ರ ಭಯಾನಕವಾಗಿದೆ. ಗಂದರ್‌ಬಾಲ್‌ನ ಜಮೀರ್ ಅಹ್ಮದ್ ಮತ್ತು ಶ್ರೀನಗರದ ತುಫೈಲ್ ಭಟ್ ಎಂಬ ಈ ಇಬ್ಬರು, ಸ್ಫೋಟದ ಮಾಸ್ಟರ್‌ಮೈಂಡ್ ಉಮರ್ ಉನ್ ನಬಿಗೆ ಬೇಕಾದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪೂರೈಸಿದ ‘ಡೆಡ್ಲಿ ಸಪ್ಲೈಯರ್ಸ್’. ಸ್ಫೋಟದ ವೇಳೆ ಮಾಸ್ಟರ್‌ಮೈಂಡ್ ಉಮರ್ ಸಾವನ್ನಪ್ಪಿದ್ದರೂ, ಅವನ ಹಿಂದೆ ನಿಂತು ಈ ಭಯಾನಕ ಸಂಚನ್ನು ಹೆಣೆದವರನ್ನು ಪತ್ತೆಹಚ್ಚಲು ಹೋದ ಅಧಿಕಾರಿಗಳಿಗೆ ಈ ಇಬ್ಬರು ಸಿಕ್ಕಿಬಿದ್ದಿದ್ದಾರೆ.

ಮುಂದಿನ ಅಪಾಯವೇನು?:
ಕೇವಲ ದೆಹಲಿ ಮಾತ್ರವಲ್ಲ, ಇಡೀ ಭಾರತದಾದ್ಯಂತ ಬಾಂಬ್ ಸ್ಫೋಟಗಳ ಸರಮಾಲೆ ನಡೆಸಲು ಈ ಉಗ್ರ ಜಾಲ ಮದ್ದುಗುಂಡುಗಳನ್ನು ಸಂಗ್ರಹಿಸಿತ್ತು ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ಪಟಿಯಾಲ ಹೌಸ್ ನ್ಯಾಯಾಲಯವು ಇವರನ್ನು 10 ದಿನಗಳ ಕಾಲ NIA ವಶಕ್ಕೆ ಒಪ್ಪಿಸಿದೆ. ಈ ಹತ್ತು ದಿನಗಳ ವಿಚಾರಣೆಯಲ್ಲಿ ಈ ಭಯೋತ್ಪಾದಕ ಜಾಲದ ಯಾವೆಲ್ಲಾ ‘ಬ್ಲಾಕ್ ಬಾಕ್ಸ್’ಗಳು ಓಪನ್ ಆಗಲಿವೆ ಎಂಬುದು ಈಗ ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದೆ.

error: Content is protected !!