ಭಟ್ಕಳ: ಮುರುಡೇಶ್ವರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯ ವೇಳೆ ತಾತ್ಕಾಲಿಕವಾಗಿ ಅಳವಡಿಸಲಾಗಿದ್ದ ಲಿಫ್ಟ್ ಕುಸಿದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುರುವಾರ(ನ.07) ಸಂಜೆ ನಡೆದಿದೆ.

ಮುರ್ಡೇಶ್ವರದ ಬಸ್ತಿಯ ನಿವಾಸಿ ಪ್ರಭಾಕರ ಮುತಪ್ಪ ಶೆಟ್ಟಿ ಮತ್ತು ಬೈಂದೂರು ತಾಲೂಕಿನ ನಿವಾಸಿ ಬಾಬಣ್ಣ ಪೂಜಾರಿ ಮೃತ ದುರ್ದೈವಿಗಳು.
ಮುರ್ಡೇಶ್ವರದ ಓಲಗಾ ಮಂಟಪದ ಸಮೀಪ ನಾಲ್ಕು ಮಹಡಿಗಳ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ಸಾಮಗ್ರಿಗಳನ್ನು ಮೇಲ್ಮಹಡಿಗೆ ಸಾಗಿಸಲು ತಾತ್ಕಾಲಿಕ ಲಿಫ್ಟ್ ಅಳವಡಿಸಲಾಗಿತ್ತು. ಆದರೆ ಲಿಫ್ಟ್ ಗೆ ಅತಿಭಾರವಾದ ಕಾರಣ ಅದರ ಹಗ್ಗ ಅಚಾನಕಾಗಿ ತುಂಡಾಗಿ, ಲಿಫ್ಟ್ ಭಾರವಾಗಿ ನೆಲಕ್ಕೆ ಉರುಳಿದ್ದು, ಈ ಸಂದರ್ಭ ಲಿಫ್ಟ್ನಲ್ಲಿದ್ದ ಇಬ್ಬರು ಕಾರ್ಮಿಕರು ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.