ಮಂಗಳೂರು: ನಾಗರಿಕನೋರ್ವನ ಒಂದು ಫೋನ್ ಕರೆಯಿಂದ ನಗರದ ಗೋರಿ ಗುಡ್ಡ ಪ್ರದೇಶದಲ್ಲಿ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದ ನಾಲ್ವರು ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಬುಧವಾರ(ಅ.05) ಬೆಳಿಗ್ಗೆ ನಡೆದಿದೆ.

ಬೆಳಿಗ್ಗೆ ಸುಮಾರು 9.45 ಗಂಟೆಯ ಸುಮಾರಿಗೆ, ಮಂಗಳೂರಿನ ನಿವಾಸಿ ದೀಕ್ಷಿತ್ ಅವರು ನಾಲ್ವರು ಮಹಿಳೆಯರು ಸಂಶಯಾಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿ ತಕ್ಷಣವೇ 112 ತುರ್ತುಸೇವಾ ಸಂಖ್ಯೆಗೆ ಮಾಹಿತಿ ನೀಡಿದರು.
ಸೂಚನೆ ಸ್ವೀಕರಿಸಿದ ಬಳಿಕ ತಕ್ಷಣವೇ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಕೇವಲ 5 ನಿಮಿಷಗಳಲ್ಲೇ ಮಹಿಳೆಯರನ್ನು ವಶಕ್ಕೆ ಪಡೆದರು. ವಿಚಾರಣೆ ವೇಳೆ ಅವರಲ್ಲಿ ಒಬ್ಬಳಾದ ಶಿವಗಾಮಿ (ಹೋಳೆನರಸೀಪುರ ನಿವಾಸಿ) ಹಿಂದಿನ ಮನೆಕಳ್ಳತನ ಪ್ರಕರಣದ ಆರೋಪಿ ಎಂಬುದು ಪತ್ತೆಯಾಯಿತು.

ಶಿವಗಾಮಿ ವಿರುದ್ಧ ಕದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಳೆಯ ಪ್ರಕರಣ ದಾಖಲಾಗಿದ್ದು, ಆಕೆ ಕೆಲವು ಕಾಲದಿಂದ ಪರಾರಿಯಾಗಿದ್ದಳು ಎನ್ನಲಾಗಿದೆ. ಆರೋಪಿಣಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಮತ್ತೆ ಮೂವರು ಮಹಿಳೆಯರ ವಿರುದ್ಧ ಯಾವುದೇ ಅಪರಾಧ ದಾಖಲೆಗಳಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಪ್ರತಿಕ್ರಿಯಿಸಿ, “ಒಬ್ಬ ಜಾಗೃತ ನಾಗರಿಕ ಸಮಯೋಚಿತವಾಗಿ ನೀಡಿದ ಕರೆ ನಮ್ಮ ಕಾರ್ಯಾಚರಣೆಗೆ ಸಹಾಯ ಮಾಡಿದೆ. ನಾಗರಿಕರೂ ಸಹ ಇಂತಹ ಸಂದರ್ಭಗಳಲ್ಲಿ ತಕ್ಷಣ ಮಾಹಿತಿ ನೀಡಬೇಕು” ಎಂದು ಕೋರಿದ್ದಾರೆ.