ಮಂಗಳೂರು: ಕಲೆ, ಸಾಹಿತ್ಯ ಸಮಾಜಸೇವೆ, ಸಂಘ ಸಂಸ್ಥೆಗಳಂತೆ ತುಳು ಚಿತ್ರರಂಗಕ್ಕೂ ರಾಜ್ಯೋತ್ಸವ ಪ್ರಶಸ್ತಿಯ ಮಾನ್ಯತೆ ನೀಡುವಂತೆ ಕೋರಲಾಗಿದ್ದರೂ, ಬೇಡಿಕೆ ಈಡೇರಿಲ್ಲ. ರಾಜ್ಯೋತ್ಸವ ದಿನದಂದು ತುಳು ಚಿತ್ರರಂಗದ ಕಲಾವಿದರು, ತಂತ್ರಜ್ಞರು, ನಿರ್ದೇಶಕ- ನಿರ್ಮಾಪಕರನ್ನು ಗುರುತಿಸುವ ಕಾರ್ಯ ಇನ್ನಾದರೂ ನಡೆಯಬೇಕು ಎಂದು ಚಿತ್ರ ನಿರ್ಮಾಪಕ ಆರ್ ಧನರಾಜ್ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳು ಸಿನೆಮಾಗಳಿಂದ ರಾಜ್ಯ ಸರಕಾರಕ್ಕೆ ದೊಡ್ಡ ಮೊತ್ತದ ತೆರಿಗೆ ಸಂದಾಯವಾಗುತ್ತದೆ. ಇಲ್ಲಿನ ಚಿತ್ರರಂಗವೂ ಬಹುದೊಡ್ಡ ಮಟ್ಟದಲ್ಲಿ ಬೆಳೆದಿದೆ. 55 ವರ್ಷಗಳ ಇತಿಹಾಸ ಇರುವ ತುಳು ಸಿನಿಮಾ ರಂಗದಲ್ಲಿ 150 ಕ್ಕೂ ಮಿಕ್ಕಿದ ಸಿನಿಮಾಗಳು ತೆರೆಗೆ ಬಂದಿದೆ. ಇಲ್ಲಿ ಬಹಳಷ್ಟು ನಟ ನಡಿಯರಿದ್ದಾರೆ, ಕಲಾವಿದರಿದ್ದಾರೆ, ತಂತ್ರಜ್ಞರಿದ್ದಾರೆ, ನಿರ್ದೇಶಕರಿದ್ದಾರೆ, ನಿರ್ಮಾಪಕರಿದ್ದಾರೆ ಅವರನ್ನು ಗುರುತಿಸುವ ಕೆಲಸ ಆಗಬೇಕು. ಇದಕ್ಕೆ ಮಾನ್ಯತೆ ನೀಡುವ ಅಗತ್ಯವಿದೆ ಎಂದರು.

ವರ್ಷದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಮಾಡಿದ್ದೆವು. 2 ತಿಂಗಳ ಹಿಂದಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳಿಗೂ ಮನವಿ ಮಾಡಿದ್ದೆವು. ಆದರೆ ತುಳುನಾಡಿನ ಚಿತ್ರರಂಗವನ್ನು ಈ ಬಾರಿಯೂ ಕಡೆಗಣಿಸಿದ್ದಾರೆ ಎಂದು ಆರ್ ಧನರಾಜ್ ಅಸಮಾಧಾನ ವ್ಯಕ್ತಪಡಿಸಿದರು.

ಇತರ ವಿಭಾಗಗಳಂತೆ ತುಳುವಿಗೂ ಜಿಲ್ಲಾ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಮಾನ್ಯತೆ ನೀಡಲೇಬೇಕು. ಸರಕಾರದ ಬಳಿ ಇದಕ್ಕೆ ಹಣವಿಲ್ಲ ಎಂದಾದರೆ ಪ್ರಶಸ್ತಿಗೆ ಖರ್ಚಾಗುವ ಮೊತ್ತವನ್ನು ನಾವೇ ಭರಿಸುತ್ತೇವೆ. ಆಗಲಾದರೂ ತುಳು ಚಿತ್ರರಂಗವನ್ನು ಗುರುತಿಸುವ ಕೆಲಸ ನಡೆಯಲಿ ಎಂದು ಆಗ್ರಹಿಸಿದರು.
ಪ್ರಸ್ತುತ ದ.ಕ. ಜಿಲ್ಲೆಯ ಅಬಕಾರಿ ಮತ್ತು ಪಿಡಬ್ಲ್ಯುಡಿ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಿದೆ ಎಂದು ಆರೋಪಿಸಿದ ಅವರು, ಅಬಕಾರಿ ಇಲಾಖೆಯಿಂದ ಸಿಎಲ್-7 ಲೈಸನ್ಸ್ ನೀಡಲು 20-22 ಲಕ್ಷ ರೂ. ಲಂಚ ಪಡೆಯಲಾಗುತ್ತಿದೆ. ಲೈಸನ್ಸ್ ಪಡೆಯಲು ಕನಿಷ್ಠ 10 ಕೊಠಡಿಗಳಿರಬೇಕು. ಸಿಎಲ್-7 ಯಾವ ಮೂಲಸೌಕರ್ಯ ಇಲ್ಲದಿದ್ದರೂ ಲಂಚ ಪಡೆದು ಬೇಕಾಬಿಟ್ಟಿ ಲೈಸನ್ಸ್ ನೀಡಲಾಗುತ್ತಿದೆ ಎಂದು ಆರ್. ಧನರಾಜ್ ಆರೋಪಿಸಿದರು.