ಮೂಲ್ಕಿ: ಮೂಲ್ಕಿ ತಾಲೂಕಿನ ಕೆರೆಕಾಡ್–ಬೆಳ್ಳಾಯರು ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರಲ್ಲಿ ಭಾರೀ ಆತಂಕ ಉಂಟಾಗಿದೆ. ಚಿರತೆಗಳ ಅಟ್ಟಹಾಸದಿಂದಾಗಿ ಸೂರ್ಯ ಪಶ್ಚಿಮಕ್ಕೆ ಮುಳುಗಿ ಕತ್ತಲೆ ಆವರಿಸುತ್ತಿದ್ದಂತೆ ಈ ಹಳ್ಳಿಗಳ ಗಲ್ಲಿಗಳಲ್ಲಿ ಮನುಷ್ಯರ ಓಡಾಟ ನಿಂತುಹೋಗುತ್ತಿದೆ.

ಇತ್ತೀಚೆಗೆ ಚಿರತೆ ನಾಯಿಯನ್ನು ಅಟ್ಟಿಸಿಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂದಿದ್ದು, ಇದರಿಂದ ಪ್ರದೇಶದ ನಾಯಿಗಳು ದಿಕ್ಕಾಪಾಲಾಗಿ ಓಡುತ್ತಿರುವುದು ಸ್ಥಳೀಯರಲ್ಲಿ ಭೀತಿಗೆ ಕಾರಣವಾಗಿದೆ. ಒಂದಕ್ಕಿಂತ ಹೆಚ್ಚು ಚಿರತೆಗಳು ಸಂಚರಿಸುತ್ತಿರುವ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಎಸ್ಕೋಡಿ, ಕಿನ್ನಿಗೋಳಿ, ಮೆನ್ನಬೆಟ್ಟು, ಕಾರ್ನಾಡ್ ಹಾಗೂ ಕೆರೆಕಾಡ್ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆಗಳ ಸಂಚಾರ ನಿರಂತರವಾಗಿ ಕಾಣಿಸಿಕೊಂಡಿರುವುದರಿಂದ ಗ್ರಾಮಸ್ಥರು ರಾತ್ರಿ ನಿದ್ರೆ ಕಳೆದುಕೊಳ್ಳುವಂತಾಗಿದೆ. ವಿಶೇಷವಾಗಿ ಪುಟಾಣಿ ಮಕ್ಕಳು ಹಾಗೂ ವೃದ್ಧರ ಸುರಕ್ಷತೆ ಕುರಿತು ಜನರು ತೀವ್ರ ಚಿಂತೆಯಲ್ಲಿದ್ದಾರೆ. ಸಂಜೆಯಿಂದಲೇ ಹೊರಗೆ ಓಡಾಡಲು ಜನರು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿರತೆಗಳನ್ನು ಭಯಪಡಿಸಿ ದೂರವಿಡಲು ಕೆಲ ಗ್ರಾಮಸ್ಥರು ಪಟಾಕಿ ಸಿಡಿಸುವಂತಹ ತಾತ್ಕಾಲಿಕ ಕ್ರಮಗಳಿಗೆ ಮುಂದಾಗಿದ್ದಾರೆ. ಆದರೆ ಇದರಿಂದ ಶಾಶ್ವತ ಪರಿಹಾರ ಸಾಧ್ಯವಿಲ್ಲವೆಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಬೆಳ್ಳಾಯರು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಪ್ರದೇಶದಲ್ಲಿ ಚಿರತೆಗಳ ಸಂಚಾರವನ್ನು ತಡೆಯಲು ತಕ್ಷಣವೇ ಬೋನ್ (ಕೇಜ್) ಅಳವಡಿಸಿ ಚಿರತೆಗಳನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ. ಅರಣ್ಯ ಇಲಾಖೆ ಕೂಡ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
