ಮಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ದೊರೆತ ರೂ. 5 ಲಕ್ಷವನ್ನು ಮಾನವೀಯ ಸೇವೆಗೈಯ್ಯುವ 5 ಸಂಸ್ಥೆಗಳಿಗೆ ನೀಡುವುದಾಗಿ ಪ್ರಶಸ್ತಿ ಪುರಸ್ಕೃತ ಅನಿವಾಸಿ ಉದ್ಯಮಿ ಝಕರಿಯ ಜೋಕಟ್ಟೆ ಘೋಷಿಸಿದ್ದಾರೆ.


ಮಂಗಳೂರಿನ ಸಾನಿಧ್ಯ ಮಾನಸಿಕ ವಿಕಲಚೇತನರ ವಸತಿ ಶಾಲೆ, ಸ್ನೇಹದೀಪ ಎಚ್ಐವಿ ಪೀಡಿತ ಮಕ್ಕಳ ಆಶ್ರಮ ಬೋಂದೆಲ್, ಸ್ನೇಹಾಲಯ ವ್ಯಸನ ವಿಮೋಚನಾ ಕೇಂದ್ರ ತಲಪಾಡಿ, ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ ಲೇಡಿಗೋಶನ್ ಕಾರುಣ್ಯ ಯೋಜನೆ, ಕಾವಳಕಟ್ಟೆ ಹಿದಾಯ ಕಾಲನಿಯ ವಿಕಲಚೇತನ ಮಕ್ಕಳ ಕೇಂದ್ರಕ್ಕೆ ತಲಾ ರೂ. ಒಂದು ಲಕ್ಷ ನೀಡುವುದಾಗಿ ತಿಳಿಸಿದ್ದಾರೆ. ಝಕರಿಯ ಜೋಕಟ್ಟೆ ಅಭಿಮಾನಿ ಬಳಗ ನವಂಬರ್ ತಿಂಗಳಲ್ಲಿ ಏರ್ಪಡಿಸಲುದ್ದೇಶಿಸಿರುವ ಪೌರ ಸನ್ಮಾನದಲ್ಲಿ ಈ ಮೊತ್ತವನ್ನು ವಿತರಿಸಲಿದ್ದಾರೆ.


ಕರ್ನಾಟಕ ಸರಕಾರವು ರಾಜ್ಯೋತ್ಸವದಂದು ಅನಿವಾಸಿ ಉದ್ಯಮಿ, ಕೊಡುಗೈ ದಾನಿ, ಎಂ.ಫ್ರೆಂಡ್ಸ್ ಚಾರಿಟೇಬಲ್ ಅಧ್ಯಕ್ಷ ಝಕರಿಯ ಜೋಕಟ್ಟೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಝೀರ್ ಅಹ್ಮದ್ ಸೇರಿಕೊಂಡು ಗೌರವಿಸಿದರು. ಪ್ರಶಸ್ತಿಯು ರೂ. 5 ಲಕ್ಷ ನಗದು, 25 ಗ್ರಾಮ್ ಚಿನ್ನದ ಪದಕ, ಪ್ರಶಸ್ತಿ ಪತ್ರ, ಸ್ಮರಣಿಕೆ ಒಳಗೊಂಡಿತ್ತು.
