ಅಪಹರಿಸಲಾದ ಹಿಂದೂ ಯುವತಿಯನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಿಸಿ ವೃದ್ಧ ಮುಸ್ಲಿಂ ವ್ಯಕ್ತಿಯೊಂದಿಗೆ ಬಲವಂತದಿಂದ ಮದುವೆ ಮಾಡಿಸಿರುವ ಘಟನೆ ಪಾಕಿಸ್ತಾನದ ಕರಾಚಿ ಬಳಿ ನಡೆದಿದೆ. ಮದುವೆಯಾದ ಮೂರು ತಿಂಗಳು ಚಿತ್ರಹಿಂಸೆ ಅನುಭವಿಸಿದ ಹಿಂದೂ ಯುವತಿ ಸಿಂಧ್ ನ್ಯಾಯಾಲಯದ ಆದೇಶದ ನಂತರ ಕೊನೆಗೂ ತನ್ನ ಕುಟುಂಬವನ್ನು ಮತ್ತೆ ಸೇರುವಂತಾಗಿದೆ ಎಂದು ಸಮುದಾಯದ ನಾಯಕರೊಬ್ಬರು ತಿಳಿಸಿದ್ದಾರೆ.

ಕರಾಚಿಯಿಂದ ಪೂರ್ವಕ್ಕೆ ಸುಮಾರು 310 ಕಿ.ಮೀ. ದೂರದಲ್ಲಿರುವ ಉಮರ್ಕೋಟ್ನ ಕೆಳ ನ್ಯಾಯಾಲಯ ಸುನೀತಾ ಕುಮಾರಿ ಮಹಾರಾಜ್ ಮತ್ತೆ ತನ್ನ ಕುಟುಂಬದೊಂದಿಗೆ ಮತ್ತೆ ಸೇರಲು ಶನಿವಾರ ಆದೇಶಿಸಿದೆ ಎಂದು ಅವರ ಪೋಷಕರ ಪರ ನ್ಯಾಯಾಲಯದಲ್ಲಿ ವಾದಿಸುವಲ್ಲಿ ನೆರವಾದ ಹಿಂದೂ ಕಾರ್ಯಕರ್ತ ಶಿವ ಕಾಚಿ ಹೇಳಿದ್ದಾರೆ.
ಸುನೀತಾ ಅವರನ್ನು ಮೀರ್ಪುರ್ಖಾಸ್ ಜಿಲ್ಲೆಯ ಕುನ್ರಿ ಎಂಬ ಪಟ್ಟಣದಿಂದ ಅಪಹರಿಸಿ, ನಂತರ ಬಲವಂತವಾಗಿ ಮತಾಂತರಗೊಳಿಸಿ ಮುಸ್ಲಿಂ ವೃದ್ಧನೊಂದಿಗೆ ಬಲವಂತದಿಂದ ಮದುವೆ ಮಾಡಿಸಲಾಗಿತ್ತು. ನ್ಯಾಯ ಪಡೆದ ಕೆಲವೇ ಅದೃಷ್ಟಶಾಲಿ ಹಿಂದೂ ಯುವತಿಯರಲ್ಲಿ ಈಕೆ ಒಬ್ಬಳಾಗಿದ್ದಾಳೆ ಎಂದು ಸ್ಥಳೀಯ ಹಿಂದೂ ಸಮುದಾಯದ ಮುಖಂಡರು ಮತ್ತು ಸಾಮಾಜಿಕ ಕಾರ್ಯಕರು ಹೇಳಿದ್ದಾರೆ.

ಸುನೀತಾ ಪ್ರಕರಣ ಪ್ರತ್ಯೇಕವಾದ ಪ್ರಕರಣವಲ್ಲ. ಈ ವ್ಯವಸ್ಥಿತ ಅಪಹರಣ, ಬಲವಂತದ ಮತಾಂತರ ಮತ್ತು ಹಿಂದೂ ಯುವತಿಯರ ವಿವಾಹಗಳು ಸಿಂಧ್ನಲ್ಲಿ ನಮ್ಮ ಸಮುದಾಯವನ್ನು ಭಯಭೀತಗೊಳಿಸುತ್ತಿರುವ ಬಿಕ್ಕಟ್ಟಾಗಿದೆ ಎಂದು ಉಮರ್ಕೋಟ್ನ ವಕೀಲ ಚಂದರ್ ಕೊಹ್ಲಿ ಸೋಮವಾರ ಹೇಳಿದ್ದಾರೆ. ಸುನೀತಾಳ ಪೋಷಕರು ಮತ್ತು ಕಾರ್ಯಕರ್ತರು ಪ್ರಕರಣ ದಾಖಲಿಸಿದ ನಂತರ ಉಮರ್ಕೋಟ್ನಲ್ಲಿ ಆಕೆಯನ್ನು ಪತ್ತೆ ಮಾಡಲಾಗಿದೆ. ಆದರೆ ಹಲವು ಬಾರಿ ವಿಚಾರಣೆಗಳ ನಂತರ ನ್ಯಾಯಾಲಯವು ಆಕೆಯನ್ನು ಸುರಕ್ಷಿತ ಮನೆಗೆ ಕಳುಹಿಸಿದೆ ಎಂದು ಅವರು ತಿಳಿಸಿದರು.
ಹೆಚ್ಚಿನ ಸಂದರ್ಭಗಳಲ್ಲಿ ತಮ್ಮ ಮದುವೆ ಕಾನೂನುಬದ್ಧವಾಗಿದೆ ಎಂದು ಸಾಬೀತುಪಡಿಸಲು ಆರೋಪಿಗಳು ನಕಲಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ಹೆಚ್ಚಾಗಿ ಬಡ ಕುಟುಂಬಗಳಿಗೆ ಸೇರಿದ ಯುವತಿಯರಿಗೆ, ನ್ಯಾಯಾಲಯದಲ್ಲಿ ಹೋರಾಟ ನಡೆಸಲು ಸಾಕಷ್ಟು ಹಣ ಇರುವುದಿಲ್ಲ ಅಥವಾ ಜ್ಞಾನವೂ ಇರಲ್ಲ. ಅದಕ್ಕಾಗಿಯೇ ಹಲವು ಹಿಂದೂ ನಾಯಕರು ಇಂತಹ ಹೋರಾಟದಲ್ಲಿ ಸಕ್ರಿಯರಾಗಿದ್ದು, ವಿದ್ಯಾವಂತ ಹಿಂದೂಗಳು ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಕೊಹ್ಲಿ ಹೇಳಿದರು.