ಮೂಲ್ಕಿ : ಕಿನ್ನಿಗೋಳಿಯ ಯುಗಪುರುಷ ಸಂಸ್ಥೆಯ ನೇತೃತ್ವದಲ್ಲಿ ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡೆತ್ತೂರು ಭುವನಾಭಿರಾಮ ಉಡುಪ ಅವರು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ನಾವೆಲ್ಲರೂ ಗೌರವಿಸಿ, ಉಳಿಸಬೇಕು ಕನ್ನಡ ಭಾಷೆಗೆ ಸ್ವಾಭಿಮಾನದ ಗೌರವವಿದೆ. ಮಕ್ಕಳಲ್ಲಿ ಕನ್ನಡ ಅಭಿಮಾನವನ್ನು ಬೆಳೆಸೋಣ ಎಂದು ಹೇಳಿದರು.

ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ ಪುನರೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ನಮ್ಮ ಪಾತ್ರ ಎನ್ನುವ ವಿಷಯದಲ್ಲಿ ಪಾಂಪೈ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಪುರುಷೋತ್ತಮ ಕೆ. ವಿ. ಮಾತನಾಡಿ, ಕನ್ನಡ ನಶಿಸದ ಭಾಷೆಯಲ್ಲ, ಆತಂಕ ಬೇಡ ಓದುಗರು ಕಡಿಮೆಯಾದರೂ ಸಾಹಿತ್ಯ ಚಟುವಟಿಕೆ ಕಡಿಮೆಯಾಗಿಲ್ಲ. ಬರಹಗಾರರನ್ನು ಬೆಳೆಸಿ ಓದುಗರನ್ನು ಸೃಷ್ಟಿಸೋಣ ಎಳೆಯ ಮಕ್ಕಳಲ್ಲಿ ಸಾಹಿತ್ಯ ಅಭಿಮಾನವನ್ನು ಜಾಗೃತಗೊಳಿಸೋಣ ಕನ್ನಡಿಗರ ಹೋರಾಟದಿಂದ ಕನ್ನಡ ಭಾಷೆಗೆ ಸ್ಥಾನಮಾನ ಸಿಕ್ಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಟೀಲು ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆಯ ತಜ್ಞ ವೈದ್ಯ ಡಾ. ಶಿವಾನಂದ ಪ್ರಭು ಅವರನ್ನು ರಾಜ್ಯೋತ್ಸವ ಗೌರವಾರ್ಪಣೆ ನೀಡಲಾಯಿತು.

ಉದ್ಯಮಿ ಅಗರಿ ರಾಘವೇಂದ್ರರಾವ್ ಸುರತ್ಕಲ್, ಸಾಣೂರು ಅರುಣ್ ಶೆಟ್ಟಿಗಾರ್, ಸತೀಶ್ ಬಂಗೇರ, ಉಷಾ ಕಿರಣ್, ಸಾಹಿತ್ಯ ಸಂಘಟಕ ಪ್ರದೀಪ್ ಕುಮಾರ್, ಮೂಲ್ಕಿ ಹೋಬಳಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜೊಸ್ಸಿ ಪಿಂಟೋ, ಹಿರಿಯ ಸಾಹಿತಿ ಬಾಲಕೃಷ್ಣ ಉಡುಪ, ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ಪದ್ಮಶ್ರೀ ಭಟ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಂಭ್ರಮ್ ವಂದಿಸಿದರು. ಅಭಿಷೇಕ್ ಸನ್ಮಾನ ಪತ್ರ ವಾಚಿಸಿದರು, ಪತ್ರಕರ್ತ ನರೇಂದ್ರ ಕೆರೆಕಾಡು ನಿರೂಪಿಸಿದರು.