ಮುಲ್ಕಿ: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದಲ್ಲಿ ಯುವಕನೋರ್ವನನ್ನು ಮುಲ್ಕಿ ಪೊಲೀಸರು ಕಾರ್ನಾಡ್ ಬಳಿ ಬಂಧಿಸಿದ್ದಾರೆ.
ಕೃಷ್ಣಾಪುರ ನಿವಾಸಿ ಯತಿರಾಜ್ (27) ಬಂಧಿತ ಆರೋಪಿ.
ಸೆ.14ರಂದು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಪಕ್ಷಿಕೆರೆ ಕಾಪಿಕಾಡು ನಿವಾಸಿ ಪ್ರಜ್ವಲ್, ಬೈಕಂಪಾಡಿ ಕೂರಿಕಟ್ಟಿ ನಿವಾಸಿ ಪ್ರಮೋದ್, ಸ್ಟೀವನ್ ರವರ ಮುಂದುವರಿದ ತನಿಖೆಯಿಂದ ಲಭಿಸಿದ ಮಾಹಿತಿಯಂತೆ ಆರೋಪಿ ಯತಿರಾಜ್ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
1.200 ಕೆಜಿ ಗಾಂಜಾ, ಸಾಗಾಟಕ್ಕೆ ಬಳಸಿದ ಆಟೊರಿಕ್ಷಾ, ಮಾರಾಟದಿಂದ ಬಂದ 300 ರೂ. ನಗದನ್ನು ಬಂಧಿತ ಆರೋಪಿಯಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.