ಮುಂಬೈ: ನಟಿ ದಿಶಾ ಪಟಾನಿ (Disha Patani) ಮನೆ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣ ಸಂಬಂಧ ಇದೀಗ ದೆಹಲಿ ಪೊಲೀಸರು ಮತ್ತಿಬ್ಬರು ಅಪ್ರಾಪ್ತರರನ್ನು ವಶಕ್ಕೆ ಪಡೆದಿದ್ದಾರೆ.
ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿ ನಡೆದ ಒಂದು ದಿನ ಮೊದಲು ಅಂದರೆ ಸೆ.11 ರಂದು ನಸುಕಿನ 4 ಗಂಟೆ ಸುಮಾರಿಗೆ ಇಬ್ಬರು ಅಪ್ರಾಪ್ತರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಈ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಉತ್ತರ ಪ್ರದೇಶದ (Uttarpradesh) ಬರೇಲಿಯಲ್ಲಿರುವ ಬಾಲಿವುಡ್ ನಟಿ ದಿಶಾ ಪಟಾನಿ ಅವರ ಮನೆ ಹೊರಗೆ ಇದೇ ಸೆ.12ರಂದು ನಸುಕಿನ 3:30ರ ಸುಮಾರಿಗೆ ಗುಂಡಿನ ದಾಳಿ ನಡೆದಿತ್ತು. ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೂರರಿಂದ ನಾಲ್ಕು ಸುತ್ತು ಗುಂಡು ಹಾರಿಸಿ ಎಸ್ಕೇಪ್ ಆಗಿದ್ದರು. ಗುಂಡಿನ ದಾಳಿ ನಡೆದ ಮನೆಯಲ್ಲಿ ದಿಶಾ ಪಟಾನಿ ಕುಟುಂಬ ವಾಸವಿತ್ತು. ಆ ಸಮಯದಲ್ಲಿ ದಿಶಾ ಅವರ ತಂದೆ ನಿವೃತ್ತ ಉಪ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಸಿಂಗ್ ಪಟಾನಿ, ತಾಯಿ ಅಕ್ಕ ಖುಷ್ಬು ಪಟಾನಿ ಇದ್ದರು. ಬಳಿಕ ಗೋಲ್ಡಿ ಬ್ರಾರ್ ಗ್ಯಾಂಗ್ ಗುಂಡಿನ ದಾಳಿ ಹೊಣೆ ಹೊತ್ತುಕೊಂಡಿತ್ತು.
ದುಷ್ಕರ್ಮಿಗಳ ಬೆನ್ನತ್ತಿ ಪೊಲೀಸರ ಮೇಲೆಯೇ ಶಂಕಿತರು ಗುಂಡಿನ ದಾಳಿಗೆ ಮುಂದಾದ್ರು. ಬಳಿಕ ಪೊಲೀಸರು ಪ್ರತಿದಾಳಿ ನಡೆಸಿದರು. ಈ ವೇಳೆ ಗಾಯಗೊಂಡಿದ್ದ ಶಂಕಿತರು ಬಳಿಕ ಸಾವನ್ನಪ್ಪಿದರು.
ಗುಂಡಿನ ದಾಳಿಗೆ ಕಾರಣ ಏನು?
ದಾಳಿ ಹೊಣೆ ಹೊತ್ತಿದ್ದ ಗೋಲ್ಡಿ ಬ್ರಾರ್ ಗ್ಯಾಂಗ್ ಅದಕ್ಕೆ ಕಾರಣ ಉಲ್ಲೇಖಿಸಿ ಪತ್ರವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ಎಲ್ಲಾ ಸಹೋದರರಿಗೆ ರಾಮ್ ರಾಮ್ ನಾನು, ವೀರೇಂದ್ರ ಚರಣ್, ಮಹೇಂದ್ರ ಶರಣ್. ‘ಸಹೋದರರೇ, ಇಂದು ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿಯನ್ನು ನಡೆಸಿದ್ದೇವೆ. ಅವರು ನಮ್ಮ ಪೂಜ್ಯ ಸಂತರಾದ ಪ್ರೇಮಾನಂದ ಜಿ ಮಹಾರಾಜ್ ಮತ್ತು ಅನಿರುದ್ಧಾಚಾರ್ಯ ಜಿ ಮಹಾರಾಜ್ ಅವರನ್ನು ಅವಮಾನಿಸಿದ್ದಾರೆ.
ಅಲ್ಲದೇ ನಮ್ಮ ಸನಾತನ ಧರ್ಮವನ್ನು ಅವಮಾನಿಸಲು ಪ್ರಯತ್ನಿಸಿದರು. ನಮ್ಮ ದೇವತೆಗಳ ಮೇಲಿನ ಅವಮಾನ ಸಹಿಸಲಾಗದು. ಇದು ಕೇವಲ ಟ್ರೈಲರ್ ಅಷ್ಟೇ. ಮುಂದಿನ ಬಾರಿ, ಅವರು ಅಥವಾ ಬೇರೆ ಯಾರಾದರೂ ನಮ್ಮ ಧರ್ಮದ ಬಗ್ಗೆ ಅಗೌರವ ತೋರಿಸಿದ್ರೆ, ಅವರ ಮನೆಯಲ್ಲಿ ಯಾರೂ ಜೀವಂತವಾಗಿ ಉಳಿಯುವುದಿಲ್ಲ’ ಎಂದು ಎಚ್ಚರಿಕೆ ನೀಡಿತ್ತು.