ಮಂಗಳೂರು: ಬಂಟರು ಮತ್ತು ನಾಡವರು ಅನಾದಿ ಕಾಲದಿಂದಲೂ ಒಂದೇ ಆಗಿದ್ದಾರೆ. ಬ್ರಿಟಿಷರ ಕಾಲದ ದಾಖಲೆಗಳಲ್ಲೂ ಇದನ್ನೇ ಹೇಳಲಾಗಿದೆ. ಆನಂತರ ಬಂಟರು ಮತ್ತು ನಾಡವರನ್ನು ವಿಂಗಡಣೆ ಮಾಡಲಾಗಿದೆ. ಬಂಟರು ಮತ್ತು ನಾಡವರನ್ನು ಒಂದೇ ಕೆಟಗರಿಯಲ್ಲಿ ಸೇರಿಸುವಂತೆ ಅನೇಕ ಸರಕಾರಗಳ ಗಮನಕ್ಕೆ ತಂದರೂ ಇಲ್ಲಿಯವರೆಗೆ ಬೇಡಿಕೆ ಈಡೇರಿಲ್ಲ. ಇತ್ತೀಚಿಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನೀಡಿದ ಪತ್ರಿಕಾ ಪ್ರಕಟನೆಯಲ್ಲಿ ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಶ್ರೀ ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿದ ವರದಿಯಲ್ಲಿ ಬಂಟರ/ನಾಡವರ ಜನಸಂಖ್ಯೆ ಮೂರು ಲಕ್ಷದ ಹದಿನೈದು ಸಾವಿರ ಇದೆ ಎಂದು ನಮೂದಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಉಡುಪಿ, ದ.ಕ. ಜಿಲ್ಲೆ ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿ ಅಂದಾಜು ಇಪ್ಪತ್ತು ಲಕ್ಷಕ್ಕಿಂತ ಹೆಚ್ಚು ಬಂಟ ಸಮಾಜದವರು ಇದ್ದಾರೆ. ಶ್ರೀ ಕಾಂತರಾಜ್ ನೇತೃತ್ವದ ಆಯೋಗವು ಅವೈಜ್ಞಾನಿಕವಾಗಿ ವರದಿಯನ್ನು ತಯಾರಿಸಿರುವುದರಿಂದ ಮತ್ತು ಅದು ಕಾಲ ಬಾಧಿತವಾಗಿರುವ ಕಾರಣ ಅದನ್ನು ಮಂಡಿಸಬಾರದು ಮತ್ತು ಮಾನ್ಯ ಮಾಡಬಾರದು ಎಂದು ಮಾನ್ಯ ಮುಖ್ಯಮಂತ್ರಿ ಹಾಗೂ ಉಪ ಮುಖ್ಯ ಮಂತ್ರಿಯವರಿಗೆ ಮನವಿಯನ್ನು ನೀಡಿದ್ದೇವೆಬ ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಕೆ.ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದ್ದಾರೆ.
ಬಂಟರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತಾಡಿದ ಅವರು, ”ಬಂಟ ನಾಡವ ಸಮಾಜದಲ್ಲಿ 40 ಶೇಕಡಾಕ್ಕಿಂತ ಹೆಚ್ಚು ಜನರು ಬಡತನ ರೇಖೆಗಿಂತ ಕೆಳಗಿನ ಮಟ್ಟದಲ್ಲಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಇತರ ಕಾರಣಗಳಿಂದಾಗಿ ಅಂದಾಜು 20 ಲಕ್ಷ ಜನರು ದೇಶದ ವಿವಿಧ ಭಾಗಗಳಲ್ಲಿ ಮತ್ತು ವಿದೇಶಗಳಲ್ಲಿದ್ದಾರೆ. ಅವರೆಲ್ಲರ ಬೇರು, ಮೂಲ ಹಾಗೂ ಅವಿನಾಭಾವ ಸಂಬಂಧ ನಮ್ಮ ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳೊಂದಿಗಿದೆ. ನಮ್ಮ ಸಮಾಜದ ಒಟ್ಟು ಜನಸಂಖ್ಯೆಯನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲು ಹಾಗೂ ಕೂಲಂಕಶ ಅಧ್ಯಯನ ಮಾಡಲು ಬಾಂಧವ್ಯ ಎಂಬ ಹೆಸರಿನಲ್ಲಿ ವಿಶ್ವದಾದ್ಯಂತ ಇರುವ ಬಂಟರ/ನಾಡವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಇತರ ವಿಷಯಗಳ ಬಗ್ಗೆ ಸಮೀಕ್ಷೆ ಮಾಡಿ ವಿಶ್ವ ಬಂಟರ ಮಾಹಿತಿಕೋಶವನ್ನು ತಯಾರಿಸುವ ಬಗ್ಗೆ ಮುಂದಡಿಯಿಟ್ಟಿದ್ದೇವೆ. ಭಾಂದವ್ಯ ಎಂಬ ಈ ಮಹತ್ವಪೂರ್ಣವಾದ ಮಾಹಿತಿ ಸಂಗ್ರಹ ಕಾರ್ಯಕ್ರಮದಲ್ಲಿ ಬಾಗಿಯಾಗಿ ಸುಖೀ ಸಮೃದ್ಧ ಸಮಾಜದ ನಿರ್ಮಾಣಕ್ಕೆ ಕಾರಣೀಕರ್ತರಾಗಬೇಕೆಂದು ಸಮಾಜ ಬಾಂಧವರೊಡನೆ ವಿನಂತಿಸಿಕೊಳ್ಳುತ್ತೇವೆ“ ಎಂದರು.
ಬಂಟರು ಯಾನೆ ಒಂದೇ ನಾಡವರು ಸಮುದಾಯ/ಜಾತಿಯವರಾಗಿರುತ್ತಾರೆ. ಯಾವುದೇ ಮೀಸಲಾತಿ ಇಲ್ಲದ ಸಮಯದಲ್ಲಿ 1908ನೇ ಇಸವಿಯಲ್ಲಿ ನಮ್ಮ ಹಿರಿಯರು ಸಂಘವನ್ನು ಸ್ಥಾಪಿಸುವಾಗ ಅದಕ್ಕೆ ಬಂಟರ ಯಾನೆ ನಾಡವರ ಮಾತೃಸಂಘ ಎಂದು ಹೆಸರನ್ನು ಇಟ್ಟರು, ಬಂಟ ಮತ್ತು ನಾಡವ ಸಮಾಜ ಒಂದೇ ಎಂದು ನೂರಾರು ವರ್ಷಗಳ ದಾಖಲೆಗಳಿವೆ. ಹಿಂದುಳಿದ ವರ್ಗಗಳ ಆಯೋಗವು ಪ್ರಕಟಿಸಿದ ಪಟ್ಟಿಯಲ್ಲಿ ಬಂಟ ಮತ್ತು ನಾಡವ ಜಾತಿಯನ್ನು ಬೇರೆ ಬೇರೆ ಜಾತಿಯಾಗಿ ತೋರಿಸಿದ್ದಾರೆ ಎಂದರು.
ಸೆ.17ರಂದು ವಿದಾನಸಭಾಧ್ಯಕ್ಷ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಮತ್ತು ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿಯವರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು ಸಮೀಕ್ಷೆಯ ವಿಷಯದಲ್ಲಿ ಮಾಹಿತಿ ನೀಡುವ ಸಭೆ ನಡೆಯಿತು. ಈ ಸಭೆಯಲ್ಲಿ ಬಂಟ ನಾಡವ ಸಮಾಜ ಬಾಂಧವರು ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಮೀಕ್ಷೆಗೆ ಬರುವವರಿಗೆ ಯಾವರೀತಿ ಮಾಹಿತಿ ನೀಡಬೇಕು ಎಂಬ ಮಾರ್ಗದರ್ಶನವನ್ನು ಪಡೆದುಕೊಂಡಿದ್ದೇವೆ. ನಾವು ಪಡೆದುಕೊಂಡ ಮಾರ್ಗದರ್ಶನದಂತೆ ಸಮೀಕ್ಷೆಕಾರರು ಮನೆಗೆ ಬಂದಾಗ ಸಮಾಜ ಬಾಂಧವರು ಈ ಕೆಳಗಿನಂತೆ ಮಾಹಿತಿಯನ್ನು ನೀಡಬೇಕಾಗಿ ವಿನಂತಿಸುತ್ತೇವೆ.
ಪ್ರಜ್ಞಾವಂತರಾದ ಸಮಾಜ ಬಾಂಧವರು ಮೀಸಲಾತಿ ಮತ್ತುಇತರ ವಿಷಯಗಳಲ್ಲಿ ನಮಗಾದ ಕಷ್ಟ-ನಷ್ಟಗಳನ್ನು ಮನವರಿಕೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ಸರಕಾರದ/ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಮೀಕ್ಷೆಗೆ ಬರುವವರ ಮೊಬೈಲ್ ಆಪ್ ನಲ್ಲಿರುವ 8ನೇ ಕಾಲಂನಲ್ಲಿ ಧರ್ಮ ಎಂದಿರುವ ಜಾಗದಲ್ಲಿ ಹಿಂದೂ ಎಂದು ನಮೂದಿಸಿ, 9ನೇ ಕಾಲಂನಲ್ಲಿ ಜಾತಿ ಎಂದಿರುವ ಜಾಗದಲ್ಲಿ ಕೋಡ್ ಸಂಖ್ಯೆ (A-0227) ರಂತೆ BUNT ಎಂದು ನಮೂದಿಸಿ, 11ನೇ ಕಾಲಂನಲ್ಲಿರುವ ಸಮಾನಾರ್ಥದ (ಪರ್ಯಾಯ) ಹೆಸರು ಎಂದಿರುವ ಜಾಗದಲ್ಲಿ ಕೋಡ್ ಸಂಖ್ಯೆ (A-1026)ರಂತೆ NADAVA ಎಂದು ನಮೂದಿಸುವಂತೆ ವಿನಂತಿಸುತ್ತಿದ್ದೇವೆ.
ಇದೇ ರೀತಿಯಾಗಿ 9ನೇ ಕಾಲಂನಲ್ಲಿ ಜಾತಿ ಎಂದಿರುವ ಜಾಗದಲ್ಲಿ ಕೋಡ್ ಸಂಖ್ಯೆ (A-NADAVA ಎಂದು ನಮೂದಿಸುವ ಸಮಾಜ ಬಾಂಧವರು, ರಂತೆ (11, 1026) ಕಾಲಂನಲ್ಲಿರುವ ಸಮಾನಾರ್ಥದ (ಪರ್ಯಾಯ) ಹೆಸರು* ಎಂದಿರುವ ಜಾಗದಲ್ಲಿ (A-0227) ರಂತೆ BUNT ಎಂದು ನಮೂದಿಸಬೇಕೆಂದು ಕೇಳಿಕೊಳ್ಳುತ್ತಿದ್ದೇವೆ. ಸಮಾಜಬಾಂಧವರು ಈ ರೀತಿಯಲ್ಲಿ ಸಮೀಕ್ಷೆಯಲ್ಲಿ ತಮ್ಮನ್ನು ನೊಂದಾಯಿಸಿಕೊಳ್ಳುವ ಮೂಲಕ ಸಮಾಜಕ್ಕೆ ನ್ಯಾಯಬದ್ಧವಾಗಿ ಸಿಗಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಲು ಕಾರಣೀಭೂತರಾಗಬೇಕು“ ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷ ಕಾವು ಎ.ಹೇಮನಾಥ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ.ಎಂ.ಶೆಟ್ಟಿ, ಕೋಶಾಧಿಕಾರಿ ಸಿಎ ರಾಮ್ ಮೋಹನ್ ರೈ, ಜೊತೆ ಕಾರ್ಯದರ್ಶಿ ಸಂಜೀವ ಶೆಟ್ಟಿ ಸಂಪಿಗೆಡಿ ಮತ್ತಿತರರು ಉಪಸ್ಥಿತರಿದ್ದರು.