ಬೆಂಗಳೂರು: ಹೈದರಾಬಾದ್ನಿಂದ ಬೆಂಗಳೂರಿಗೆ ಖಾಸಗಿ ಬಸ್ನಲ್ಲಿ ಬರುತ್ತಿದ್ದ ಅಪ್ರಾಪ್ತೆಗೆ ಕಾಮುಕ ಚಾಲಕ ಕಿರುಕುಳ ನೀಡಿದ ಘಟನೆ ಚಾಲುಕ್ಯ ಸರ್ಕಲ್ ಬಳಿ ನಡೆದಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿ ಸ್ಪೇರ್ ಡ್ರೈವರ್ ಅಗಿದ್ದು, ಸಂತ್ರಸ್ತ ಅಪ್ರಾಪ್ತೆಗೆ ಕಿರುಕುಳ ಕೊಟ್ಟ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನಾ ಸ್ಥಳದಲ್ಲಿ ಗಲಾಟೆಯಿಂದಾಗಿ ಜನ ಒಂದೆಡೆ ಸೇರಿದ ಹಿನ್ನೆಲೆ, ಟ್ರಾಫಿಕ್ ಹೆಚ್ಚಳವಾದ ಕಾರಣ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಯುವತಿಯಿಬ್ಬಳು ತೆಲಂಗಾಣದ ಹೈದರಬಾದ್ನಿಂದ ಬೆಂಗಳೂರಿಗೆ ಖಾಸಗಿ ಬಸ್ನಲ್ಲಿ ಬರುತ್ತಿದ್ದಳು. ಫೋನ್ನಲ್ಲಿ ಚಾರ್ಜ್ ಇರದ ಕಾರಣ ಬಸ್ನಲ್ಲೇ ಚಾರ್ಜಿಂಗ್ಗೆ ಹಾಕಿದ್ದಳು. ಆಕೆ ಬಸ್ನಿಂದ ಇಳಿಯುವಾಗ ಮೊಬೈಲ್ ಕೊಡಿ ಎಂದ ಚಾಲಕನನ್ನು ಕೇಳಿದ್ದಾಳೆ. ಅದಕ್ಕೆ ಚಾಲಕ ಮುತ್ತು ಕೊಟ್ಟರೆ ಮಾತ್ರ ಮೊಬೈಲ್ ಕೊಡುತ್ತೇನೆ ಎಂದು ಕಿರುಕುಳ ನೀಡಿದ್ದಾನೆ ಎಂದು ಯುವತಿ ತಮ್ಮ ಕುಟುಂಬದವರ ಬಳಿ ಹೇಳಿಕೊಂಡಿದ್ದಾಳೆ.
ಚಾಲಕನ ದುರ್ವರ್ತನೆ ಕಂಡು ಯುವತಿ ಅಸಮಾಧಾನಗೊಂಡು ಫೋನ್ ಮಾಡಿ ತನ್ನ ಕುಟುಂಬಸ್ಥರಿಗೆ ತಿಳಿಸಿದ್ದಾಳೆ. ಇದರಿಂದ ಕೋಪಗೊಂಡ ಯುವತಿಯ ಕುಟುಂಬಸ್ಥರು ಯುವತಿ ಇದ್ದ ಬಸ್ ಬೆಂಗಳೂರಿಗೆ ಬರುತ್ತಲ್ಲೇ ಸಿಬ್ಬಂದಿಯ ಕಾಲರ್ ಹಿಡಿದು ಎಳೆದಾಡಿ, ಬಟ್ಟೆ ಬಿಚ್ಚಿ ಹಿಗ್ಗಾಮುಗ್ಗ ಥಳಿಸಿದ್ದಾರೆ.
ಈ ಬಗ್ಗೆ ಯುವತಿಯ ಅಣ್ಣ ಮಾತನಾಡಿ, ಹೈದರಾಬಾದ್ನಿಂದ ನಮ್ಮ ಅಕ್ಕ ನನ್ನ ತಂಗಿಯನ್ನು ಬೆಂಗಳೂರಿಗೆ ಕಳುಹಿಸಿದರು. ನಾನು ಕೆಲಸ ಮುಗಿಸಿ ಬಂದಾಗ ನನ್ನ ತಂಗಿ ನನಗೆ ಕರೆ ಮಾಡಿದಳು. ಆಗ ತನಗೆ ಚಾಲಕ ಕಿರುಕುಳ ಕೊಟ್ಟ ಬಗ್ಗೆ ಹೇಳಿದಳು. ನಾನು ಮೆಜಸ್ಟಿಕ್ ಬಂದು ಅವಳಿಗಾಗಿ ಕಾಯುತ್ತಿದ್ದೆ. ಆದರೆ, ಬಸ್ ಚಾಲುಕ್ಯ ಸರ್ಕಲ್ನಲ್ಲಿ ನಿಂತಿತ್ತು. ಚಾಲಕನನ್ನು ಹಿಡಿದು ಥಳಿಸಿದೆವು ಎಂದು ಹೇಳಿದರು.