ಮಂಗಳೂರು: ಮಂಗಳೂರಿನ ಕೊಡಿಯಾಲಬೈಲ್ ಪ್ರದೇಶದಲ್ಲಿರುವ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಹಾಕಲಾಗಿರುವ ಜಾಮರ್ನಿಂದಾಗಿ ಕಳೆದ 6 ತಿಂಗಳಿನಿಂದ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುತ್ತಿರುವ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಅಧಿವೇಶನದಲ್ಲಿ ಪ್ರಸ್ತಾಪಿಸಿದರು.
ಈ ಪ್ರದೇಶದ ಸುತ್ತಮುತ್ತ ಎರಡು ಕಿಲೋಮೀಟರ್ವರೆಗೆ ಹಲವಾರು ವಸತಿ ಸಮುಚ್ಛಯಗಳಿಗೆ ಮೊಬೈಲ್ ಕರೆ ಬರುತ್ತಿಲ್ಲ. ಅಂಗಡಿ, ಹೋಟೆಲ್, ಎಲ್ಐಸಿ ಸೇರಿದಂತೆ ಎಲ್ಲೆಡೆ ಆನ್ ಲೈನ್ ವಹಿವಾಟು ಇಲ್ಲದೇ ವ್ಯಾಪಾರ-ವಹಿವಾಟುಗಳಿಗೆ ಭಾರಿ ಹಿನ್ನಡೆಯಾಗಿದೆ. ಇದೇ ವ್ಯಾಪ್ತಿಯಲ್ಲಿ ಬರುವ ಮಂಗಳೂರು ಮಹಾನಗರ ಪಾಲಿಕೆ, ಹತ್ತಾರು ಬ್ಯಾಂಕ್ಗಳು, ಹಲವು ಶಿಕ್ಷಣ ಸಂಸ್ಥೆಗಳು ಮಾತ್ರವಲ್ಲ ಪಕ್ಕದಲ್ಲೇ ಇರುವ ನ್ಯಾಯಾಲಯದ ಕಲಾಪಕ್ಕೂ ನೆಟ್ವರ್ಕ್ ಸಮಸ್ಯೆ ಆಗಿರುವುದು ಗಂಭೀರ ವಿಚಾರ. ದಿಲ್ಲಿಯ ಟೆಲಿಕಮ್ಯುನಿಕೇಷನ್ ಕನ್ಸಲೆಂಟ್ ತಂತ್ರಜ್ಞರು ಮಂಗಳೂರಿಗೆ ಬಂದು ಪರಿಶೀಲನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
ಜೈಲಿನೊಳಗೆ ಜಾಮರ್ ಹಾಕಿದ್ದರೂ ಒಳಗಿನ ಖೈದಿಗಳಿಗೆ ನೆಟ್ವರ್ಕ್ ಸಿಗುತ್ತಿದೆ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ. ಆದರೆ ಜೈಲಿನ ಹೊರಗಿರುವ ಸಾರ್ವಜನಿಕರಿಗೆ ಮಾತ್ರ ಈ ಕಾಟ ತಪ್ಪಿಲ್ಲ. ಇದು ಯಾವ ನ್ಯಾಯ? ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತಾಗಿದೆ ಇಲ್ಲಿನ ಪರಿಸ್ಥಿತಿ. ಇದರ ವಿರುದ್ಧ ಹತ್ತಾರು ಪ್ರತಿಭಟನೆಗಳು ನಡೆದರೂ ಫಲಿತಾಂಶ ಮಾತ್ರ ಶೂನ್ಯ. ಶೀಘ್ರದಲ್ಲಿ ಇದಕ್ಕೊಂದು ಮುಕ್ತಿ ಕೊಡಿ ಎಂದು ಶಾಸಕರು ಸರ್ಕಾರವನ್ನು ಆಗ್ರಹಿಸಿದರು.