ಮಂಗಳೂರು: ಪಿಜಿಡಬ್ಯುಎಫ್ಐ ವತಿಯಿಂದ ಪೆಟ್ರೋಲಿಯಂ ಸೆಕ್ಟರ್ಗಳಲ್ಲಿ ಇಂದು ಬೆಳಿಗ್ಗಿನಿಂದ ಸಂಜೆಯವರೆಗೆ ದೇಶವ್ಯಾಪಿ ಮುಷ್ಕರಕ್ಕೆ ಕರೆ ಕೊಟ್ಟಿದೆ. ಆ ಪ್ರಯುಕ್ತ ಇಂದು ಎಂಆರ್ಪಿಎಲ್ ಸಂಸ್ಥೆಯ ಮುಖ್ಯ ದ್ವಾರದಲ್ಲಿ ಎಂಆರ್ಪಿಎಲ್ ಕರ್ಮಚಾರಿ ಸಂಘ ಮತ್ತು ಎಂಆರ್ಪಿಎಲ್ ಎಂಪ್ಲಾಯಿಸ್ ಯೂನಿಯನ್ ಹಾಗೂ ಪೆಟ್ರೋಲಿಯಂ ಗ್ಯಾಸ್ ವರ್ಕರ್ಸ್ ಫೆಡರೇಶನ್ ಅಪ್ ಇಂಡಿಯಾ ವತಿಯಿಂದ ಮುಷ್ಕರ ಹಮ್ಮಿಕೊಳ್ಳಲಾಯಿತು.
ಎಂಆರ್ಪಿಎಲ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಶರತ್ ಜೋಗಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರ ಸಂಸ್ಥೆಯನ್ನು ಖಾಸಗಿಕರಣಗೊಳಿಸದೆ ಕಾರ್ಮಿಕ ಇಲಾಖೆಯ ಕೆಲವೊಂದು ಕಾನೂನುಗಳು ಕಾರ್ಮಿಕರಿಗೆ ಸಮಸ್ಯೆಯಾಗುತ್ತಿದ್ದು ಅದನ್ನು ಸರಳೀಕರಣಗೊಳಿಸಬೇಕು. ಸಂಸ್ಥೆಯು ನಷ್ಟದಲ್ಲಿದ್ದರೆ ಅದನ್ನು ತುಂಬಲು ಉದ್ಯೋಗಿಗಳು ಹಾಗೂ ಕಾರ್ಮಿಕರಿಗೆ ನೀಡುವ ಸವಲತ್ತುಗಳ ಕಡಿತಗೊಳಿಸುವುದು ಸರಿಯಲ್ಲ. ನಮ್ಮ ಎಲ್ಲಾ ಬೇಡಿಕೆಗಳಿಗೆ ಸರಕಾರ ಹಾಗೂ ಎಂಆರ್ಪಿಎಲ್ ಸಂಸ್ಥೆ ಸಹಕಾರ ನೀಡಬೇಕು ಎಂದರು.
ಸರಕಾರ ಮತ್ತು ಸಂಸ್ಥೆಗೆ ಮನವಿ ಸಲ್ಲಿಕೆ
-ಕಾರ್ಮಿಕ ವಿರೋಧಿ ಕಾನೂನು ಜಾರಿ ಮಾಡಿರುವುದನ್ನು ವಾಪಸ್ ಪಡೆಯಬೇಕು
-ಸಾರ್ವಜನಿಕ ವಲಯದ ಕಂಪೆನಿಗಳನ್ನು ಖಾಸಗೀಕರಣ ಮಾಡಬಾರದು
-ಕಾರ್ಮಿಕರ ಆರೋಗ್ಯ ಭದ್ರತೆಯಾಗಿರುವ ಇ,ಎಸ್,ಐ ಇಲ್ಲದೆ ಇರುವುದರಿಂದ ಯಾವುದೇ ರೀತಿಯ ಅದಕ್ಕೆ ತಕ್ಕುದಾದ ಕಾನೂನು ಬದಲಾವಣೆ ಮಾಡದೇ ಇರುವುದರಿಂದ ಕಾರ್ಮಿಕರು ಸಂಕಷ್ಟ ಪಡುತ್ತಿದೆ ಇದನ್ನು ಸರಿಪಡಿಸಬೇಕು
-ಕಾರ್ಮಿಕ ಸಂಘಟನೆಯನ್ನು ರಚಿಸುವ ಹಕ್ಕನ್ನು ಕಸಿದುಕೊಳ್ಳಲಾಗಿದೆ ಇದನ್ನು ರಾಜ್ಯ ಸರಕಾರ ವಾಪಾಸ್ ಪಡೆಯಬೇಕು
-ಐದು ವರ್ಷಕೊಮ್ಮೆ ಹೆಚ್ಚಳ ಅಗಬೇಕಿದ್ದ ಕನಿಷ್ಟ ವೇತನವನ್ನು ಜಾರಿಗೊಳಿಸಬೇಕು
-ಎಂಆರ್ಪಿಎಲ್ ಸಂಸ್ಥೆ ಇಎಸ್ಐ ವಂಚಿತರಾದ ಕಾರ್ಮಿಕರಿಗೆ ಮೆಡಿಕ್ಲೈಮ್ ಪಾಲಿಸಿ ನೀಡಬೇಕು
-ಕಾರ್ಮಿಕರಿಗೆ ಪ್ರಸ್ತುತ ನೀಡುತ್ತಿದ್ದ ಸಂಸ್ಥೆಯ ವಿಶೇಷ ಭತ್ಯೆ ದ್ವಿಗುಣಗೊಳಿಸಬೇಕು
-ಕಾರ್ಮಿಕನೊಬ್ಬ ಕೆಲಸದ ಸಮಯ ಅಥವಾ ಗೇಟ್ ನ ಹೊರಗಡೆ ಮರಣ ಹೊಂದಿದ್ದಲ್ಲಿ ಪ್ರಸ್ತುತ ನೀಡುತ್ತಿದ್ದ 10 ಲಕ್ಷ ಇನ್ಸೂರೆನ್ಸ್ ನ್ನು 50 ಲಕ್ಷಕ್ಕೆ ಎರಿಸಬೇಕು
-ಕಾರ್ಮಿಕರು ಎತ್ತರ ಪ್ರದೇಶದಲ್ಲಿ ಕೆಲಸ ಮಾಡುವುದರಿಂದ ಎತ್ತರ ಭತ್ಯೆ ನೀಡಬೇಕು
-ಕಂಪೆನಿ ಒಳಗೆ ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ ,ಶೌಚಾಲಯ ವ್ಯವಸ್ಥೆ ವಿಶೇಷವಾಗಿ ಮಹಿಳೆಯರಿಗೆ ವಿಶ್ರಾಂತಿ ಕೊಠಡಿಯಿಲ್ಲ ಅದನ್ನು ನಿರ್ಮಿಸಿ ಕೊಡಬೇಕು
-ಕಾರ್ಮಿಕರಿಗೆ ಕ್ಯಾಂಟಿನ್ ವ್ಯವಸ್ಥೆ ಸರಿ ಪಡಿಸಬೇಕು
-ಮಹಿಳಾ ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು
ಬೇಡಿಕೆ ಈಡೇರದಿದ್ದರೆ ನಿರಂತರ ಬೃಹತ್ ಪ್ರತಿಭಟನೆ
ಈ ಎಲ್ಲಾ ಬೇಡಿಕೆಗಳನ್ನು ಎಂಆರ್ಪಿಎಲ್ ಸಂಸ್ಥೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ನಿರಂತರ ಬೃಹತ್ ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ಸಂಸದರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಂಆರ್ಪಿಎಲ್ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳಲ್ಲಿ ಕಾರ್ಮಿಕರ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕಾಗಿ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಿದರು. ಆದರೆ ಕಂಪೆನಿ ಗಮನ ನೀಡದಿರುವುದು ಕಾರ್ಮಿಕರ ಅಕ್ರೋಶಕ್ಕೆ ಕಾರಣವಾಯಿತು.
ಕಾರ್ಮಿಕರ ಸಮಸ್ಯೆಗಳನ್ನು ಅರಿತು ಅದಕ್ಕೆ ಸ್ಪಂದನೆ ನೀಡಲು ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳಿಗೆ ಒಳ್ಳೆಯ ಮನಸ್ಸು ನೀಡಲು ಪೆರ್ಮುದೆ ಗ್ರಾಮದ ಕಾರಣಿಕ ದೈವ ಪಿಲಿಚಾಮುಂಡಿಗೆ ಎಲ್ಲಾ ಕಾರ್ಮಿಕರು ಈ ಹಿಂದೆ ಪ್ರಾರ್ಥನೆ ಸಲ್ಲಿಸಿದ್ದರು.
ಎಂಆರ್ಪಿಎಲ್ ಎಂಪ್ಲಾಯಿಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಸಾಯಿಪೃಥ್ವಿ ಕರ್ಮಚಾರಿ ಸಂಘದ ಅಧ್ಯಕ್ಷ ಪ್ರಸಾದ್ ಅಂಚನ್, ಉಪಾಧ್ಯಕ್ಷ ಸುರೇಶ್ ಪೊಸ್ರಾಲ್, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಭಟ್,ಜತೆ ಕಾರ್ಯದರ್ಶಿ ಸುನೀಲ್ ಬೋಳ, ಸುರೇಶ್ ಪೂಜಾರಿ ಕೃಷ್ಣಾಪುರ, ಕೋಶಾಧಿಕಾರಿ ಪುರುಷೋತ್ತಮ, ಎಸ್ಸಿ ವಿಭಾಗದ ಅಧ್ಯಕ್ಷ ಸಂತೋಷ್ ಹಾಗೂ ಎಂಪ್ಲಾಯಿಸ್ ಯೂನಿಯನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.