ಪರಿಸರ ಸ್ವಚ್ಛಗೊಳಿಸಲು ನಾಗರಾಜನ ಏಕಾಂಗಿ ಹೋರಾಟ: ʻನೀ ಬದಲಾಗು… ನಿನ್ನ ಹೆಜ್ಜೆಗೆ ನಾಡು ಬದಲಾಗಲಿʼ

ಇವರ ಹೆಸರು ನಾಗರಾಜ. ಬಿಸಿಲು, ಗಾಳಿ, ಮಳೆ ಎನ್ನದೆ ಅಡ್ಯಾರಿನಿಂದ ಫರಂಗಿಪೇಟೆಯ ನಡುವೆ ಆತ ರಸ್ತೆ ಬದಿಯಲ್ಲಿ ನಿಂತಿರುವ ಇವರ ಕೈಯ್ಯಲ್ಲಿ ಒಂದು ಬೋರ್ಡ್‌ ಇದೆ. ಅದರಲ್ಲಿ ” ರಸ್ತೆಯಲ್ಲಿ ಕಸ ಬಿಸಾಡಬೇಡಿ ” ಎಂಬ ಘೋಷ ವಾಕ್ಯ ಇದೆ.
ಹೌದು ಅಡ್ಯಾರಿನಿಂದ ಫರಂಗಿಪೇಟೆಯ ರಸ್ತೆ ಬದಿಯಲ್ಲಿ ಬಿದ್ದಿರುವ ಕಸವನ್ನು ಸ್ವಚ್ಛಗೊಳಿಸಿ ” ರಸ್ತೆಯಲ್ಲಿ ಕಸ ಬಿಸಾಡಬೇಡಿ ” ಎಂಬ ಬೋರ್ಡ್‌ ಹಿಡಿದು ರಸ್ತೆಯಲ್ಲಿ ಸಾಗುವ ವಾಹನ ಸವಾರರ ಮುಂದೆ ಪ್ರದರ್ಶಿಸುತ್ತಾರೆ. ಅದೂ ಕೂಡಾ ಗಾಳಿ, ಮಳೆ, ಬಿಸಿಲನ್ನೂ ಲೆಕ್ಕಿಸದೆ! ರಸ್ತೆ ಬದಿ ಯಾರೋ ಎಸೆದು ರಾಶಿ ಬಿದ್ದಿರುವ ಕಸದ ವಿಡಿಯೋ ಮಾಡಿ, ಅದನ್ನು ಸ್ವತಃ ತೆರವು ಮಾಡಿ, ಇದೀಗ ಕೈಯ್ಯಲ್ಲಿ ಬೋರ್ಡ್‌ ಹಿಡಿದು ಜನತೆಗೆ ಜಾಗೃತಿ ಮೂಡಿಸುವ ಈ ಯುವಕ ಏಕಾಂಗಿ ಹೋರಾಟಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಸಂಬಂಧಪಟ್ಟ ʻ ನೀ ಬದಲಾಗು… ನಿನ್ನ ಹೆಜ್ಜೆಗೆ ನಾಡು ಬದಲಾಗಲಿ ʼ ಎಂಬ ಶಿರ್ಷಿಕೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮುದ್ದಾದ ಬರಹದೊಂದಿಗೆ ಹರಿದಾಡುತ್ತಿರುವ ನಾಗರಾಜನ ವಿಡಿಯೋ ಜನತೆಯ ಅಪಾರ ಮೆಚ್ಚುಗೆ ಗಳಿಸಿದೆ. ಅಂದಹಾಗೆ ಈ ಬರಹವನ್ನು ಬರೆದಿರುವವರು ದಿವಾಕರ್ ಶೆಟ್ಟಿ ಅಡ್ಯಾರ್ ಎಂಬವದ್ದು! ಅದನ್ನು ಇಲ್ಲಿ ಹಾಗೆಯೇ ಇಲ್ಲಿ ಭಟ್ಟಿ ಇಳಿಸಿದ್ದೇವೆ

 

ʻನೀ ಬದಲಾಗು… ನಿನ್ನ ಹೆಜ್ಜೆಗೆ ನಾಡು ಬದಲಾಗಲಿʼ

 

ಇಲ್ಲಿ ಒಬ್ಬ ಮುಂಜಾನೆ ಮಳೆ, ಗಾಳಿ, ಬಿಸಿಲು,ಎನ್ನದೆ ಕೈಯಲ್ಲಿ ” ರಸ್ತೆಯಲ್ಲಿ ಕಸ ಬಿಸಾಡಬೇಡಿ ” ಎಂಬ ಒಂದು ಬೋರ್ಡ್ ಹಿಡಿದುಕೊಂಡು ನಿಂತಿದ್ದಾನೆ. ಯಾರಾದರೂ ಇವನ ಬಗ್ಗೆ ಯೋಚಿಸಿದ್ದೀರಾ?
ಎಲ್ಲರೂ ಬದಲಾಗುತ್ತಾರೆ ಎಂಬುದು ಅವನ ಕನಸು.
ಆದರೆ “ಕೆಲವರಾದರೂ ಬದಲಾಗಬಹುದು” ಎಂಬ ನಂಬಿಕೆಯೇ ಅವನ ತಾಳ್ಮೆಯ ಶಕ್ತಿ, ಅವನ ನಿಲ್ಲುವ ಉದ್ದೇಶ.
ಅವನು ನಾಯಕನೂ ಅಲ್ಲ, ನಟನೂ ಅಲ್ಲ’ ಪ್ರಖ್ಯಾತ ವ್ಯಕ್ತಿಯು ಅಲ್ಲ – ಆದರೆ ಆತ ಪರಿಸರದ ಬದಲಾವಣೆಗೆ ಹೊಸದೊಂದು ಹೆಜ್ಜೆ ಹಾಕುತ್ತಿರುವ ಸಾಮಾನ್ಯ ನಾಗರಿಕ.! ಈತನ ಹೆಸರು ನಾಗರಾಜ್.
ಆದರೆ ಆತನು ತೋರಿಸುತ್ತಿರುವ ರಸ್ತೆ ಬದಿಯ ಹೋರಾಟ, ಸಾವಿರ ಸಂಕಷ್ಟದ ವೀರಗಾಥೆಗೂ ಕಡಿಮೆಯಲ್ಲ.ಹೆಸರು ಮಾತ್ರ ಸಾಮಾನ್ಯ. ಆದರೆ ಹೃದಯ – ಸರ್ವಜ್ಞನಷ್ಟು ಗಂಭೀರ.
ಅಡ್ಯಾರಿನಿಂದ ಫರಂಗಿಪೇಟೆಯ ನಡುವೆ ಆತ ರಸ್ತೆ ಬದಿಯಲ್ಲಿ ನಿಂತಿದ್ದನ್ನು ಕಂಡರೂ ಕಾಣದಂತೆ ಹೋಗಬೇಡಿ ಒಂದು ನಿಮಿಷ ಅವನನ್ನು ಮಾತನಾಡಿಸಿ ಅವನ ಕಾಳಜಿಗೆ ಧನ್ಯವಾದ ತಿಳಿಸಿ!
ಪ್ರತಿಯೊಂದು ದಿನವೂ ನಾವು ನೋಡುತ್ತೇವೆ, ನೋಡಿದರೂ ನೋಡದಂತೆ ಸಾಗುತ್ತೇವೆ– ಒಬ್ಬ ರಸ್ತೆಯ ಬದಿಯಲ್ಲಿ ವಾಹನದಲ್ಲಿ ಬಂದು ಕಳ್ಳನಂತೆ ದೊಡ್ಡ ಪ್ಲಾಸ್ಟಿಕ್ ಕವರ್ ಎಸೆದು ಹೋಗುತ್ತಾನೆ. ಇನ್ನೊಬ್ಬನು ಕಾರಿನ ಕಿಟಕಿಯಿಂದ ಇನ್ನೊಂದು ತೊಟ್ಟೆಯನ್ನು ಹಾಕುತ್ತಾನೆ. ಮತ್ತೊಬ್ಬ ಬಿಯರ್ ಬಾಟಲ್ ಎಸೆಯುತ್ತಾನೆ , ಇನ್ನೊಬ್ಬ ಡೈಪರ್ ಚೀಲವನ್ನು ತಳ್ಳಿ ಹೋಗುತ್ತಾನೆ. ಆದರೆ ನಾವು ಮಾತ್ರ ಅದರ ಬಗ್ಗೆ ಚಿಂತಿಸುವುದೇ ಇಲ್ಲ.
ಈಗ ಈ ನಿಸರ್ಗವೂ ನಮಗೆ ಉತ್ತರಿಸದೆ ಸಹನಶೀಲವಾಗಿ ಸಹಿಸಿ ಕೊಳ್ಳುತ್ತಿದೆ. ನಾವೆಲ್ಲರೂ ಸಹ ಈ ಭೂಮಾತೆಯ ಗರ್ಭದಲ್ಲಿ ಬದುಕುತ್ತಿರುವವರಲ್ಲವೇ?
ಆ ಕ್ಷಣದ ಸುಲಭತನಕ್ಕಾಗಿ ಇವರೆಲ್ಲರೂ ಎಸೆಯುವ ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ನಮ್ಮ ನಾಳೆಯ ಪ್ರಾಣವಾಯುವನ್ನು ಖಂಡಿತ ಕಸಿದುಕೊಳ್ಳುತ್ತದೆ.
ನಾವು ಕುಡಿಯುವ ನೀರು, ಮಲಿನವಾಗಿ
ನಲ್ಲಿ ಮೂಲಕ ಪುನಃ ನಮಗೆ ಬಂದು ಮನೆಗೆ ಮುಟ್ಟುತ್ತದೆ.
ಪ್ರಕೃತಿ ಮತ್ತು ಸಮುದ್ರ ಯಾವುದನ್ನು ನನ್ನ ಬಳಿ ಇಟ್ಟುಕೊಳ್ಳುವುದಿಲ್ಲ ಎಲ್ಲವನ್ನು ಹಿಂದುರುಗಿಸುತ್ತದೆ.
ಇಂದು ನಾವು ಮಾಡಿದ ತಪ್ಪಿಗೆ ಮುಂದೆ
ಬಲಿ ಪಶುಗಳು ಕೂಡ ನಾವೇ ಆಗುತ್ತೇವೆ.
ಎಂಬ ಸಣ್ಣ ಧ್ಯಾನ ಕೂಡ ನಮ್ಮ ಈ ಮುಂದುವರಿದ ಸಮಾಜಕ್ಕೆ ಆಗದಿರುವುದು ಮಾತ್ರ ಶೋಚನೀಯ.!

ಇಂದು ನಾವು ಎಸೆದ ಕಸದ ತ್ಯಾಜ್ಯ ಹಾಗೂ ಅದರಿಂದ ಸಿಗುವ ಕ್ಷಣಿಕ ತೃಪ್ತಿ, ನಮ್ಮ ಮುಂದಿನ ತಲೆಮಾರಿಗೆ ಹತ್ತಾರು ವರ್ಷಗಳ ಕಾಲ ಶಾಪವಾಗಿ ಕಾಡಲಿದೆ.
ನಾವು ಎಸೆದ ಬಾಟಲಿ – ಒಂದು ಹಕ್ಕಿಯ ಗಂಟಲಲ್ಲಿ ಸಿಕ್ಕಿ ದಾರಿ ತಪ್ಪಬಹುದು. ನಮ್ಮ ನಿರ್ಲಕ್ಷ್ಯದ ಇಳಿಜಾರಿನಲ್ಲಿ ಒಂದು ಮಗು ಕಾಲುಜಾರಿ ಬೀಳಬಹುದು. ಕಸವೆಲ್ಲ ನದಿ ಸೇರಿ ಜಲಚರಗಳೆಲ್ಲವೂ ನಷ್ಟವಾಗಬಹುದು, ದನದ ಹೊಟ್ಟೆ ಸೇರಿ ಸಾವು ಬರಬಹುದು. ಮುಂದೆ ಅದೇ ನೇತ್ರಾವತಿಯ ನೀರು ಕುಡಿಯುವ ನಮಗೆ ಹಾಗೂ ನಮ್ಮ ಮಕ್ಕಳಿಗೆ ಭಾದೆ ಭಾದಿಸಬಹುದು. !

ಅದು ಕೇವಲ ಕಸವಲ್ಲ… ಅದು ನಿಮ್ಮ ನಮ್ಮೆಲ್ಲರ ಜವಾಬ್ದಾರಿಯ ಪರಾಮರ್ಶೆ.

ಹೌದು…! ಇದು ಚಳವಳಿ ಅಲ್ಲ. ಇದು ಜವಾಬ್ದಾರಿ.
ಇದು ಆಕ್ರಮಣ ಅಲ್ಲ. ಇದು ಆಳವಾದ ಕಾಳಜಿ.
ನಾವೆಲ್ಲರೂ “ಒಬ್ಬ ಎಸೆದರೆ ಇನ್ನೊಬ್ಬನು ಎತ್ತುತ್ತಾನೆ” ಎಂಬ ಪರಿಸ್ಥಿತಿಯಲ್ಲಿ ಜೀವಿಸುತ್ತಿದ್ದೇವೆ.
ಆದರೆ ಯಾಕೆ ನಾವು “ಎಸೆಯದೇ ಇರುವವರು” ಆಗಬಾರದು?

ಮಾತು ಹೇಳದ ಮರಗಳು, ದೂರು ನೀಡದ ನದಿಗಳು, ತಾಳ್ಮೆಯ ಗಾಳಿಗಳು – ಇವೆಲ್ಲವೂ ನಮ್ಮ ಈ ನಿರ್ಲಕ್ಷ್ಯವನ್ನು ತಾಳುತ್ತಿದ್ದಾರೆ. ಆದರೆ ನಾಳೆ ಇವು ನಮ್ಮ ಮಕ್ಕಳಿಗಾಗಿ ಕುಡಿಯಲಾರದ ನೀರನ್ನು, ಉಸಿರಾಡಲಾಗದ ಗಾಳಿಯನ್ನು ಹಿಂದೆ ಕೊಡಬಹುದು.

ಇಂದು ನಾವು ನಿಮ್ಮಲ್ಲಿ ಕೇಳುತ್ತಿರುವುದು ದೊಡ್ಡ. ವಿಷಯವಲ್ಲ! ಒಂದು ಪ್ರಾರ್ಥನೆ ಮಾತ್ರ!
ಕಸ ಮಾತ್ರ ರಸ್ತೆಯ ಬದಿಯಲ್ಲಿ ಎಸೆಯದಿರಿ! ಕನಿಷ್ಠ ನಿಮ್ಮನ್ನು ನೀವು ತಿದ್ದಿಕೊಳ್ಳಿ ಸಮಾಜ ತನ್ನಷ್ಟಕ್ಕೆ ತಾನೇ ಸುಧಾರಿಸುತ್ತದೆ.
“ನೀನು ಬದಲಾಗಬಲ್ಲೆ. ನೀನು ಉದಾಹರಣೆ ಆಗಬಲ್ಲೆ. ನೀನು ಎಸೆದ ಕಸದ ಜಾಗದಲ್ಲಿ ನಗುಚೆಲ್ಲುವ ಹೂ ನಾಳೆ ನಮಗೆ ಸ್ವಾಗತ ನೀಡಬಹುದು”

ಬದಲಾವಣೆ ನಮ್ಮಿಂದ ಅಲ್ಲ – ತಮ್ಮಿಂದಲೇ ಆರಂಭ ಆಗಲಿ.
ನೀವೂ ಬನ್ನಿ – ನಾವು ಸಹ ಸೇರಿ ಕೈ ಹಿಡಿಯೋಣ.
ರಸ್ತೆ ಬದಿಯ ಕಸ ಮಾತ್ರವಲ್ಲ.
ಅಲ್ಲಿ ನಿಂತಿರುವ ನಂಬಿಕೆಯನ್ನೂ ನೋಡೋಣ, ಉಳಿಸೋಣ.
ಒಟ್ಟಾಗಿ – ನಮ್ಮ ಹೆಜ್ಜೆಗೆ ನಾಡು ಬದಲಾಗಲಿ.

error: Content is protected !!