ಮಂಗಳೂರು: ಕಾಲು ತುಳಿತ ಪ್ರಕರಣವನ್ನು ಮುಚ್ವಿ ಹಾಕಲು ರಾಜ್ಯ ಸರ್ಕಾರ ವ್ಯವಸ್ಥಿತ ಷಡ್ಯಂತ್ರ ಮಾಡಿದೆ. ಜನರ ಮನಸ್ಸನ್ನು ಬೇರೆಡೆ ತಿರುಗಿಸಿ ಹೊಸ ವಿಚಾರವನ್ನು ತರುವುದಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆಶಿಯನ್ನು ಡೆಲ್ಲಿಗೆ ಕರೆಸಿ ಜಾತಿ ಗಣತಿ ಪ್ರಸ್ತಾಪ ಮಾಡಿಸಿದ್ದಾರೆ. ಕಾಲ್ತುಳಿತ ಪ್ರಕರಣ ಜನರ ಮನಸ್ಸಿನಿಂದ ಮಾಸಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯಮ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಕಸಿತ ಭಾರತ ಸಂಕಲ್ಪದ ಅಂಗವಾಗಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಪತ್ರಕರ್ತರ ಮುಂದಿಟ್ಟ ಶೋಭಾ ಕರಂದ್ಲಾಜೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಕೋಟ್ಯಂತರ ಹಣ ಖರ್ಚು ಮಾಡಿ ಜಾತಿ ಗಣ ಮಾಡಿದ್ದಾಗಿ ಸರ್ಕಾರ ಹೇಳುತ್ತಿದೆ. ಇದೀಗ ಮತ್ತೊಮ್ಮೆ ಜಾತಿ ಗಣತಿ ಪ್ರಸ್ತಾಪ ಮಾಡಿದ್ದಾರೆ. ಇದು ಯಾರ ದುಡ್ಡು? ಕಳೆದ ಬಾರಿ ಜಾತಿ ಗಣತಿ ಯಾವಾಗ ಮಾಡಿದ್ದಿರಿ? ಆಫೀಸನಲ್ಲಿ ಕೂತು ಅಲ್ಲೊಂದು ಇಷ್ಟು ಜಾತಿ ಇಲ್ಲೊಂದು ಇಷ್ಟು ಜಾತಿ ಎಂದು ಬರೆದು ರಾಜ್ಯದಲ್ಲಿ ಅಲ್ಪಸಂಖ್ಯಾತರನ್ನು ಹೆಚ್ಚಿದ್ದಾರೆ ಎಂದು ತೋರಿಸಿ ಅವರಿಗೆ ಹೆಚ್ಚು ಮೀಸಲಾತಿ ಕೊಡುವ ಷಡ್ಯಂತ್ರ ಮಾಡಿದ್ದಾರೆ. ನಿಮಗೆ ಜಾತಿಗಳಿಗೆ ಸಹಾಯ ಮಾಡುವ ಉದ್ದೇಶವಿಲ್ಲ. ಜಾತಿ ಜಾತಿಗಳ ಮಧ್ಯೆ ಹೊಡೆದಾಟ ನಡೆಯಲು ಈ ರೀತಿ ಮಾಡಲಾಗಿದೆ. ಕಾಲ್ತುಳಿತ ದುರಂತವನ್ನು ಮುಚ್ಚಿಹಾಕಲು ಜಾತಿ ಗಣತಿ ಮುಂದೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನುದಾನ ಒದಗಿಸುತ್ತಿಲ್ಲ ಎಂದು ಸುಳ್ಳು ಹೇಳುತ್ತಿರುವ ಸಿದ್ದರಾಮಯ್ಯನವರೇ ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಗರಿಷ್ಠ ಅನುದಾನ ಕೊಟ್ಟಿದೆ. ಸಿದ್ದರಾಮಯ್ಯರೇ ನೀವು ನೀತಿ ಆಯೋಗದ ಸಭೆಗೆ ಎಷ್ಟು ಸಾರಿ ಬಂದಿದ್ದೀರಿ? ನೀತಿ ಆಯೋಗದ ಸಭೆಯಲ್ಲಿ ನಿಮ್ಮ ಬೇಡಿಕೆಗಳನ್ನು ಡಿಮ್ಯಾಂಡ್ ಇಡಬೇಕಿತ್ತು. ನೀತಿ ಆಯೋಗದ ಸಭೆಗೆ ಬಾರದೆ ರಾಜ್ಯ ಜನತೆಗೆ ಮೋಸ ಮಾಡಿದ್ದೀರಿ. ರಾಜ್ಯದ ಜನತೆ ಏನು ಪಾಪ ಮಾಡಿದ್ದಾರೆ ಸ್ವಾಮಿ? ಚುನಾವಣೆ ಸಂದರ್ಭ ಎಲ್ಲ ಡ್ರಾಮಾ ಮಾಡೋಣ. ನೀವು ಬೈತೀವಿ, ಅವರು ಬೈತಾರೆ. ಉಳಿದ ನಾಲ್ಕೂವರೆ ವರ್ಷ ಏನು ಮಾಡಿದ್ದೀರಿ? ರಾಜ್ಯದ ಜನತೆ ಏನು ಪಾಪ ಮಾಡಿದ್ದೀರಿ. ಕೇಂದ್ರ ಕೊಟ್ಟ ಒಂದೊಂದು ಪೈಸೆಯನ್ನು ಸದುಪಯೋಗ ಮಾಡ್ಬೇಕು. ಎಕ್ಸ್ಟ್ರಾ ಡಿಮಾಂಡ್ ನೀತಿ ಆಯೋಗದ ಮುಂದಿಡಬೇಕು. ಆಗ ರಾಜ್ಯ ಅಭಿವೃದ್ಧಿಯಾಗಲು ಸಾಧ್ಯ ಎಂದರು.
ನರೇಂದ್ರ ಮೋದಿ ಪ್ರಧಾನಿಯಾಗಿ ಯಶಸ್ವಿ 11ವರ್ಷ ಪೂರೈಸಿದ್ದಾರೆ. ಕೇಂದ್ರ ಸರ್ಕಾರ ದೇಶದಲ್ಲಿ ಮಹತ್ವದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ದೇಶವನ್ನು ಅಭಿವೃದ್ಧಿಯಲ್ಲಿ ಮೂರನೇ ಸ್ಥಾನಕ್ಕೆ ತರುವ ಗುರಿ ಹೊಂದಿದ್ದಾರೆ. ದೇಶದಲ್ಲಿ ರಫ್ತು ಹೆಚ್ಚಾಗಿದ್ದು, ಕೃಷಿ ಕೇತ್ರದಲ್ಲೂ ಅಭಿವೃದ್ಧಿ ಸಾಧಿಸಿದೆ. ಯು.ಪಿ.ಎ ಸರ್ಕಾರದಿಂದ ಬೇಸತ್ತಿದ್ದ ಜನ ದೇಶದಲ್ಲಿ ಬದಲಾವಣೆ ಬಯಸಿ ನರೇಂದ್ರ ಮೋದಿಯವರನ್ನು ಆರಿಸಿ ತಂದರು. ಇದೀಗ ದೇಶದ ಚಿತ್ರಣವೇ ಬದಲಾಗಿದ್ದು, ಮೋದಿ ನುಡಿದಂತೆ ನಡೆಯುತ್ತಿದ್ದಾರೆ. ವಿಕಸಿತ ಭಾರತ ಅವರ ಸಂಕಲ್ಪವಾಗಿದ್ದು, 2047ಕ್ಕೆ ಭಾರತ ವಿಶ್ವದಲ್ಲೇ ನಂಬರ್ ವನ್ ಆಗುವುದು ಅವರ ಗುರಿಯಾಗಿದೆ. ದೇಶದ ಭದ್ರತೆಯ ವಿಚಾರದಲ್ಲಿ ಅನೇಕ ಸುಧಾರಣೆಗಳಾಗಿದೆ. ಭ್ರಷ್ಟಾಚಾರ ರಹಿತವಾದ ಸರ್ಕಾರವನ್ನು ಕೊಡುವುದಾಗಿ ಮೋದಿ ವಾಗ್ದಾನ ಮಾಡಿದಂತೆ ನಡೆದಿದ್ದಾರೆ. ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ದಶದ ಸೈನ್ಯ ಸ್ವಾವಲಂಬಿ ಆಗಿದ್ದು, ಶಸ್ತ್ರಾಸ್ತ್ರಗಳಲ್ಲಿ 90% ನಾವು ಆತ್ಮ ನಿರ್ಭರ ಆಗಿದ್ದೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಉಮಾನಾಥ್ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಶಾಸಕ ಸಂಜೀವ ಮಠಂದೂರು, ಸಂಸದ ಕ್ಯಾ|ಬ್ರಿಜೇಶ್ ಚೌಟ ಮತ್ತಿತರರು ವೇದಿಕೆಯಲ್ಲಿದ್ದರು.
ಅಡಿಕೆ ತಟ್ಟೆ ಗಮನಕ್ಕೆ ಬಂದಿದೆ:
ಅಡಕೆ ತಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳ ಬಗ್ಗೆ ಅಮೆರಿಕಾ ವರದಿ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶೋಭಾ, ಈ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಬೇರೆ ದೇಶದಲ್ಲಿ ಈ ಸಮಸ್ಯೆ ಇಲ್ಲ, ಈ ಬಗ್ಗೆ ವಿದೇಶಾಂಗ ಸಚಿವಾಲಯದ ಗಮನಕ್ಕೆ ತರಲಾಗಿದೆ, ಈ ಬಗ್ಗೆ ಇರುವ ಗೊಂದಲ ನಿವಾರಿಸಲಾಗುವುದು ಎಂದರು.