ತೀರ್ಥಹಳ್ಳಿ: ಕಾಂತಾರ ಚಾಪ್ಟರ್ 1 ಚಿತ್ರ ತಂಡದ ಮತ್ತೊಬ್ಬ ಕಲಾವಿದ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇದು ಚಿತ್ರತಂಡದ ಮೂರನೇ ಕಲಾವಿದನ ಸಾವಾಗಿದ್ದು, ಭಾರೀ ಆತಂಕಕ್ಕೆ ಕಾರಣವಾಗಿದೆ. ಚಿತ್ರದ ಸಹಕಲಾವಿದ ವಿಜು ವಿ.ಕೆ ಮೃತ ದುರ್ದೈವಿ.
ಕೇರಳದ ತ್ರಿಶೂರ್ ಮೂಲದ ಮಿಮಿಕ್ರಿ ಕಲಾವಿದ ವಿಜು ಕಾಂತರ ಚಲನಚಿತ್ರಕ್ಕಾಗಿ ಆಗುಂಬೆ ಸಮೀಪದ ಯಡೂರಿನ ಹೋಂ ಸ್ಟೇ ಒಂದರಲ್ಲಿ ತಂಗಿದ್ದರು. ಬುಧವಾರ ರಾತ್ರಿ ಏಕಾಏಕಿ ವಿಜು ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತೀರ್ಥಹಳ್ಳಿಯ ಆಸ್ಪತ್ರೆಗೆ ರವಾನಿಸುವ ವೇಳೆ ಮಾರ್ಗ ಮಧ್ಯೆ ವಿಜು ಕೊನೆಯುಸಿರೆಳೆದಿದ್ದಾರೆ.
ಸದ್ಯ ವಿಜು ಅವರ ಮೃತದೇಹ ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಯಲ್ಲಿರಿಸಲಾಗಿದೆ. ಪೊಲೀಸರು ಕೇರಳದಿಂದ ವಿಜು ಕುಟುಂಬಸ್ಥರ ಆಗಮನಕ್ಕೆ ಕಾಯುತ್ತಿದ್ದಾರೆ. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕಪಿಲ್:
ಕಳೆದ ಮೇ ತಿಂಗಳಲ್ಲಿ ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಕಪಿಲ್ ಕೊಲ್ಲೂರಿನ ಸೌಪರ್ಣಿಕ ನದಿ ಈಜಲು ಹೋಗಿದ್ದವರು, ನೀರಲ್ಲಿ ಮುಳುಗಿ ಮೃತಪಟ್ಟಿದ್ದರು.
ರಾಕೇಶ್ ಪೂಜಾರಿ:
‘ಕಾಮಿಡಿ ಕಿಲಾಡಿಗಳು ಸೀಸನ್ 3’ ಕಾರ್ಯಕ್ರಮದಲ್ಲಿ ವಿನ್ನರ್ ಆಗಿದ್ದ ರಾಕೇಶ್ ಪೂಜಾರಿ ಮೇ 12 ರಂದು ಹೃದಯಾಘಾತದಿಂದ ವಿಧಿವಶರಾಗಿದ್ದರು. ಮೇ 11 ರಂದು ಸ್ನೇಹಿತರ ಮದುವೆಯಲ್ಲಿ ರಾಕೇಶ್ ಪೂಜಾರಿ ಭಾಗವಹಿಸಿದ್ದ ಮರುದಿನ ‘ಸುಸ್ತು.. ಸುಸ್ತು’ ಎಂದಿದ್ದಾರೆ. ಕೂಡಲೆ ಅವರನ್ನ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಹೃದಯಾಘಾತದಿಂದ ರಾಕೇಶ್ ಪೂಜಾರಿ ಕೊನೆಯುಸಿರೆಳೆದಿದ್ದರು.
ಕಾಂತಾರ ಚಾಪ್ಟರ್ 1 ಸಿನಿಮಾ ಚಿತ್ರೀಕರಣ ಆರಂಭವಾದ ನಂತರ ಇದು ಮೂರನೇ ಸಾವಾಗಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಕಾಂತಾರಕ್ಕೆ ಒಂದಲ್ಲ ಒಂದು ಗಂಡಾಂತರ ಬರುತ್ತಲೇ ಇದೆ. ಈ ಹಿಂದೆ ಕೊಲ್ಲೂರಿನಲ್ಲೇ ಜೂನಿಯರ್ ಆರ್ಟಿಸ್ಟ್ ಗಳಿದ್ದ ಬಸ್ ಪಲ್ಟಿಯಾಗಿ ಅಪಘಾತ ಸಂಭವಿಸಿತ್ತು. ಬಳಿಕ ಗಾಳಿ ಮಳೆಗೆ ಬೃಹತ್ ಸೆಟ್ ಹಾರಿ ಹೋಗಿತ್ತು. ಇದೀಗ ಮೂರನೇ ಸಾವಾಗಿದೆ.