ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿವಾಸಿ ಕನ್ನಡಿಗರ ವೇದಿಕೆ ಬಹರೈನ್ ನಿಂದ ಉಡುಪಿ-ದ.ಕ. ಡಿಸಿಗೆ ಮನವಿ

ಮಂಗಳೂರು: ಅನಿವಾಸಿ ಕನ್ನಡಿಗರ ವೇದಿಕೆ ಬಹರೈನ್ ಇದರ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮಗಿಲನ್‌ ಹಾಗೂ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಕೆ. ಅವರಿಗೆ ಮನವಿ ಸಲ್ಲಿಸಲಾಯಿತು.


ಮನವಿಯಲ್ಲಿ ಏನಿದೆ?
ಕೊಲ್ಲಿ ದೇಶಗಳಲ್ಲಿ ಒಂದಾದ ಬಹರೈನ್ ಸುಮಾರು 20 ಸಹಸ್ರ ಕನ್ನಡಿಗರನ್ನೊಳಗೊಂಡ ಒಂದು ಪುಟ್ಟ ದೇಶ. ಕಳೆದ ಸುಮಾರು ನಾಲ್ಕೂವರೆ ದಶಕಗಳಿಂದ ಈ ದೇಶದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಶ್ರೀಮಂತ ಪರಂಪರೆಯನ್ನು ಬಹರೈನ್ ಕನ್ನಡಿಗರಿಗೆ ಹಾಗೂ ಬಹರೈನ್ ನ ನಾಗರೀಕರಿಗೆ ಪರಿಚಯಿಸುವ ಕಾರ್ಯಗಳಾಗುತ್ತಿವೆ. ವಿವಿಧ ಸಂಘಟನೆಗಳು, ವಿವಿಧ ವೇದಿಕೆಗಳು ಕನ್ನಡಿಗರ ಸಹಾಯಕ್ಕೆ ಸ್ಪಂದಿಸುತ್ತಾ ಬಂದಿವೆ. ಕರ್ನಾಟಕ ಸರಕಾರದ ಆಶ್ರಯದಲ್ಲಿ ಸ್ಥಾಪಿತವಾದ ಅನಿವಾಸಿ ಕನ್ನಡಿಗರ ವೇದಿಕೆ ಕಳೆದ ಹಲವಾರು ವರುಷಗಳಿಂದ ತನ್ನ ಸೇವಾ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ.

ಕರ್ನಾಟಕ ಸರಕಾರವು ಕೊಲ್ಲಿ ದೇಶಗಳ ಅನಿವಾಸಿ ಕನ್ನಡಿಗರ ಮಕ್ಕಳನ್ನು ಕರ್ನಾಟಕದ ಕಾಲೇಜುಗಳ ಪ್ರವೇಶದ ಪ್ರಕ್ರೀಯೆಯಲ್ಲಿ ಕರ್ನಾಟಕದಲ್ಲಿರುವ ಸ್ಥಳೀಯ ಮಕ್ಕಳಂತೆಯೇ ಪರಿಗಣಿಸಬೇಕು ಹಾಗೂ ಅನಿವಾಸಿ ಕನ್ನಡಿಗರಿಗಿರುವ ನಿರ್ಬಂಧಗಳನ್ನು ಈ ಮಕ್ಕಳ ಮೇಲೆ ಹೇರಬಾರದು. ಕೊಲ್ಲಿ ಕನ್ನಡಿಗರಲ್ಲಿ ಬಹುತೇಕರು ಸಣ್ಣ ಮಟ್ಟದ ವೇತನವನ್ನು ಪಡೆಯುತ್ತಿರುವವರು, ನೀಲಿ ಕಾಲರ್ ಉದ್ಯೋಗಿಗಳು ಹಾಗೂ ಕಟ್ಟಡ ಕಾರ್ಮಿಕರು. ಇದಲ್ಲದೆ, ಬಹರೇನ್ ದೇಶದ ಶಾಲೆಗಳಲ್ಲಿ ಕನ್ನಡವನ್ನು ಒಂದು ಐಚ್ಚಿಕ ವಿಷಯವನ್ನಾಗಿ ಕಲಿಸಲಾಗುತ್ತಿದೆ.

ಪ್ರತೀ ಪಂಚಾಯತ್, ತಾಲೂಕು ಹಾಗೂ ಜಿಲ್ಲಾ ಕಚೇರಿಗಳಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿರುವ ಅನಿವಾಸಿ ಕನ್ನಡಿಗರಿಗೆ ಏಕ ಗವಾಕ್ಷಿ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು. ಇದರಿಂದಾಗಿ ಸೀಮಿತ ಅವಧಿಗೆ ರಜೆಯಲ್ಲಿ ಬರುವ ಕನ್ನಡಿಗರಿಗೆ ಸಹಾಯವಾಗುತ್ತದೆ.

ಸ್ಥಳ ಖರೀದಿಸುವ ಹಾಗೂ ಮನೆ ಕಟ್ಟುವ ಪ್ರಕ್ರೀಯೆಗಳಿಗಾಗಿ ಸದ್ಯದ ಪರಿಸ್ಥಿತಿಗಳಲ್ಲಿ ವರುಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಅಧಿಕಾರಿಗಳ ಕಚೇರಿಗಳಿಗೆ ಅಲೆದಾಡುವ ಪದ್ದತಿಯ ಬದಲು ಈ ಪ್ರಕ್ರೀಯೆಗಳನ್ನು ಅನಿವಾಸಿಗಳಿಗೆಂದೇ ಮೀಸಲಾಗಿಟ್ಟಿರುವ ಆನ್ ಲೈನ್ ಮೂಲಕ, ನಿರ್ದಿಷ್ಟ ಸಮಯದೊಳಗೆ ಸಂಪೂರ್ಣಗೊಳಿಸುವ ವ್ಯವಸ್ಥೆಯನ್ನು ಜ್ಯಾರಿಗೆ ತರಬೇಕು. ಈ ವ್ಯವಸ್ಥೆಯ ಸರಿಯಾದ ಅನುಷ್ಠಾನಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅನಿವಾಸಿ ಭಾರತೀಯ ಸಂಪರ್ಕಾಧಿಕಾರಿಯೊಬ್ಬರನ್ನು ನೇಮಿಸಬೇಕು.

ಕೊಲ್ಲಿ ದೇಶಗಳಲ್ಲಿ ಸ್ವಂತವಾಗಿ ಅಥವಾ ಸ್ಥಳೀಯ ಅನಿವಾಸಿ ಕನ್ನಡಿಗರ ವೇದಿಕೆಗಳ ಸಹಕಾರದೊಂದಿಗೆ ಕರ್ನಾಟಕ ಸರಕಾರದ ಅನಿವಾಸಿ ಭಾರತೀಯ ಸಹಾಯ ಕಚೇರಿಗಳನ್ನು ಸ್ಥಾಪಿಸಬೇಕು. ಈ ಕಚೇರಿಗಳು ಕರ್ನಾಟಕ ಸರಕಾರ ಹಾಗೂ ಅನಿವಾಸಿ ಭಾರತೀಯರ ಮಧ್ಯದ ಸಂಪರ್ಕ ಸೇತುವೆಯಾಗಿ ಕೆಲಸ ನಿರ್ವಹಿಸಬೇಕು.

ವಿವಿಧ ಕಾರಣಗಳಿಂದ ಕೊಲ್ಲಿ ದೇಶಗಳಲ್ಲಿ ಉದ್ಯೋಗ ಕಳಕೊಂಡವರನ್ನು ಸರಕಾರ ಕಡಿಮೆ ಪಕ್ಷ ಒಂದು ವರುಷಗಳ ತನಕ ಮಾನವೀಯ ದೃಷ್ಟಿಯಿಂದ ನೋಡಿಕೊಂಡು ಅವರ ಕನಿಷ್ಠ ಅಗತ್ಯತೆಗಳನ್ನು ಪೂರೈಸುವರೇ, ನಿರ್ಧಿಷ್ಟ ಮೊತ್ತವನ್ನು ಅವರ ಖಾತೆಗೆ ವರ್ಗಾಯಿಸುತ್ತಿರಬೇಕು. ಅಂತಹಾ ವ್ಯಕ್ತಿಗಳಿಗೆ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಸರಕಾರದ ಮೂಲಕ ಸಾಲ ಸೌಲಭ್ಯ ಹಾಗೂ ಸಬ್ಸಿಡಿಯನ್ನು ನೀಡಬೇಕು.

ಅನಿವಾಸಿ ಭಾರತೀಯರು ಭಾರತದಲ್ಲಿ ನೆಲೆಸಲು ಪ್ರಾರಂಭಿಸಿದಾಗ, ಮೂರು ತಿಂಗಳಲ್ಲಿ ಅವರ NRE ಬ್ಯಾಂಕ್ ಖಾತೆ ಯನ್ನು ಸ್ಥಳೀಯ ಖಾತೆಯನ್ನಾಗಿ ಪರಿವರ್ತಿಸಲಾಗುತ್ತದೆ. ಇದರಿಂದಾಗಿ ಸಾಮಾನ್ಯ ಜನರು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಶ್ರೀಮಂತ ಅನಿವಾಸಿಗಳಿಗಾಗಿ ಗಲ್ಫ್ ದೇಶಗಳು ಸೀಮಿತ ಶುಲ್ಕಕ್ಕೆ ವಾಸ್ತವ್ಯ ಪರವಾನಗಿಯನ್ನು ನೀಡಲು ಪ್ರಾರಂಭಿಸಿದ ಪರಿಣಾಮ ಅಂತಹಾ ಭಾರತೀಯರು ತಮ್ಮ ಹಣವನ್ನು ಕೊಲ್ಲಿ ದೇಶಗಳ ಬ್ಯಾಂಕ್ ಗಳಲ್ಲೇ ಉಳಿಸಿಕೊಳ್ಳುತ್ತಾರೆ. ಈ ಪರಿಸ್ಥಿತಿಯನ್ನು ತಪ್ಪಿಸಲು, ಭಾರತದಲ್ಲಿ ಶಾಶ್ವತವಾಗಿ ನೆಲಸುವ ಪ್ರತೀ ಅನಿವಾಸಿ ಭಾರತೀಯರು ತಮ್ಮ NRE ಬ್ಯಾಂಕ್ ಖಾತೆಗಳನ್ನು ಮೂರು ವರುಷಗಳ ಕಾಲ ಮುಂದುವರಿಸಲು ಅವಕಾಶವಿರಬೇಕು.

ಕೊಲ್ಲಿ ದೇಶಗಳಿಗಿರುವ ವಿಮಾನ ಯಾನದ ದರಗಳ ಮೇಲೆ ಸರಕಾರದ ನಿಯಂತ್ರಣ ವಿರಬೇಕು. (ಸದ್ಯದ ಪರಿಸ್ತಿತಿ ಯಲ್ಲಿ ಈ ಸಂಸ್ಥೆಗಳು ಶಾಲೆಗಳ ರಜೆ ಸಮಯದಲ್ಲಿ ಹಾಗೂ ಹಬ್ಬ ಹರಿದಿನಗಲ್ಲಿ ದರಗಳನ್ನು ಮೂರು ಅಥವಾ ನಾಲ್ಕು ಪಟ್ಟು ಏರಿಸುತ್ತಿವೆ).

ಮಂಗಳೂರಿನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಸ್ಟಮ್ಸ್ ಹಾಗೂ ಇತರ ಸಿಬಂದಿಗಳ ಬೇಜಾವಾಬ್ದಾರಿ ಯಿಂದಾಗಿ ಗೌರವಾನ್ವಿತ ಪ್ರಯಾಣಿಕರು ಮುಜುಗರವನ್ನು ಅನುಭವಿಸುವುದು ಆಗಾಗ್ಗೆ ಕಂಡು ಬರುತ್ತಿದೆ. ಕಾನೂನುಗಳನ್ನು ಮೀರುವ ಪ್ರಯಾಣಿಕರನ್ನು ಸೂಕ್ತ ರೀತಿಯಲ್ಲಿ ಶಿಕ್ಷಿಸಬೇಕು ಆದರೆ ಇತರ ಎಲ್ಲ ಪ್ರಯಾಣಿಕರನ್ನು ಗೌರವಪೂರ್ವಕವಾಗಿ ನೋಡಿಕೊಳ್ಳಬೇಕು. ಇಮಿಗ್ರೇಷನ್ ಹಾಗೂ ಕಸ್ಟಮ್ಸ್ ವಿಭಾಗದ ಸಿಬಂದಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಹಾಗೂ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿಶೇಷ ಕೌಂಟರ್ ಗಳನ್ನೂ ತೆರೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಆಸ್ಟಿನ್ ಸಂತೋಷ್ (ಸಮಿತಿ ಸಲಹೆಗಾರ) , ರಾಜೇಶ್ ಶೆಟ್ಟಿ (ಸಲಹೆಗಾರ̧) ಉದಯ್ ಶೆಟ್ಟಿ ಹಿರಿಯ ಸದಸ್ಯ̧ ಸಂಜೀವ್ ಶೆಟ್ಟಿ ಹಿರಿಯ ಸದಸ್ಯ ಹಾಗೂ ಅಶೋಕ್ ಕೊಡವೂರು ಉಪಸ್ಥಿತರಿದ್ದರು.

error: Content is protected !!