ಒಂದು ವರ್ಷದಿಂದ ನಕಲಿ ಪೊಲೀಸ್‌ ಠಾಣೆ ಕಾರ್ಯಾಚರಣೆ: ಅಸಲಿ ಪೊಲೀಸರಿಗೆ ಗೊತ್ತಾಗಿಲ್ಲ ಯಾಕೆ?

ಪೂರ್ಣಿಯಾ, ಬಿಹಾರ: ಪೂರ್ಣಿಯಾ ಜಿಲ್ಲೆಯ ಕಸ್ಬಾ ಪೊಲೀಸ್ ಠಾಣೆ ಪ್ರದೇಶದ ಮೋಹಾನಿ ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ನಕಲಿ ಪೊಲೀಸ್ ಠಾಣೆ ಕಾರ್ಯನಿರ್ವಹಿಸುತ್ತಿತ್ತು ಎಂಬ ವಿಚಾರ ಈಗ ಸಂಚಲನ ಸೃಷ್ಟಿಸಿದೆ. ಇದರ ನಕಲಿ ಪೊಲೀಸರು ಜನರಿಂದ ಕೋಟ್ಯಂತರ ಹಣ ಪೀಕಿಸಿದ್ದಾರೆ. ಈ ನಕಲಿ ಪೊಲೀಸ್ ಠಾಣೆಯ ಮೂಲಕ ಪ್ರಮುಖ ಆರೋಪಿ ಎಂದು ಗುರುತಿಸಲಾಗಿರುವ ರಾಹುಲ್ ಕುಮಾರ್ ಸಾಹ್ ಎಂಬಾತ ಗ್ರಾಮೀಣ ಯುವಕರಿಗೆ ಉದ್ಯೋಗದ ಆಮಿಷ ಒಡ್ಡಿ ಲಕ್ಷಾಂತರ ರೂಪಾಯಿ ವಂಚಿಸಿದ್ದಾನೆ ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ. ವಿಚಿತ್ರವೆಂದರೆ ಈ ವಿಚಾರ ಅಸಲಿ ಪೊಲೀಸರಿಗೆ ಯಾಕೆ ಗೊತ್ತಾಗಿಲ್ಲ ಎನ್ನುವುದು ಕುತೂಹಲ ಮೂಡಿಸಿದೆ.

AI Generated Photo

ಪೊಲೀಸ್​ ಅಧಿಕಾರಿಯಂತೆ ನಟಿಸಿ ಯುವಕರಿಗೆ ವಂಚನೆ: ಗ್ರಾಮೀಣ ರಕ್ಷಾ ದಳದ ಹೆಸರಿನಲ್ಲಿ ಕಾನ್ಸ್​ಟೇಬಲ್​ ಮತ್ತು ಚೌಕೀದಾರ್ ನೇಮಕಾತಿಗಾಗಿ ಯುವಕರಿಂದ 2500 ರಿಂದ 5000 ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ಹೇಳಲಾಗುತ್ತಿದೆ. ವಿಷಯ ಬೆಳಕಿಗೆ ಬಂದ ನಂತರ ರಾಹುಲ್ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಬಿಹಾರ ಪೊಲೀಸರು ದಾಳಿ ನಡೆಸುತ್ತಿದ್ದಾರೆ. ಈ ನಡುವೆ ಸ್ಥಳೀಯ ಆಡಳಿತದ ನಿರ್ಲಕ್ಷ್ಯ ಮತ್ತು ಅನುಮಾನಾಸ್ಪದ ಪಾತ್ರದ ಬಗ್ಗೆ ಹಲವು ಪ್ರಶ್ನೆಗಳು ಕೂಡಾ ಎದ್ದಿವೆ.

ನಕಲಿ ಸಮವಸ್ತ್ರ, ವಾಹನ ತಪಾಸಣೆ, ವಸೂಲಿ; ರಾಹುಲ್ ಕುಮಾರ್ ಸಾಹ್ ಯುವಕರಿಗೆ ಪೊಲೀಸ್ ಸಮವಸ್ತ್ರ, ಲಾಠಿ ಮತ್ತು ನಕಲಿ ಗುರುತಿನ ಚೀಟಿ ನೀಡುವ ಮೂಲಕ ವಾಹನ ತಪಾಸಣೆ ಮತ್ತು ಮದ್ಯ ಕಳ್ಳಸಾಗಣೆ ವಿರುದ್ಧ ದಾಳಿಗಳನ್ನು ಮಾಡಿಸಿದ್ದ. ವಂಚನೆಗೊಳಗಾದ ವಿದ್ಯಾರ್ಥಿಗಳು ರಾಹುಲ್ ಆದೇಶದ ಮೇರೆಗೆ ಗೆರುವಾ ಘಾಟ್ ಮತ್ತು ಗಾಂಧಿ ಘಾಟ್ ಸೇತುವೆಯಲ್ಲಿ ವಾಹನಗಳನ್ನು ಪರಿಶೀಲಿಸುತ್ತಿದ್ದರು. ಈ ವೇಳೆ ನಿಯಮ ಉಲ್ಲಂಘಿಸಿದ್ದೀರಿ ಎಂದು 400 ರೂ.ಗಳವರೆಗೆ ಚಲನ್ ನೀಡಿ, ಹಣ ವಸೂಲು ಮಾಡುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ.

ಹೆಲ್ಮೆಟ್ ಅಥವಾ ಚಾಲನಾ ಪರವಾನಗಿ ಇಲ್ಲದವರಿಗೆ 400 ರೂ.ಗಳ ಚಲನ್ ನೀಡಲಾಗುತ್ತಿತ್ತು. ಅದರಲ್ಲಿ 200 ರೂ.ಗಳನ್ನು ಗಸ್ತು ತಂಡಕ್ಕೆ ಕಮಿಷನ್ ಆಗಿ ನೀಡಲಾಗುತ್ತಿತ್ತು. ಉಳಿದ ಮೊತ್ತವನ್ನು ಸರ್ಕಾರಿ ಖಜಾನೆಯಲ್ಲಿ ಠೇವಣಿ ಇಡುವುದಾಗಿ ರಾಹುಲ್ ತಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದರು ಎಂದು ಈ ಗ್ಯಾಂಗ್​ ನ ಅಕ್ರಮಕ್ಕೆ ಬಲಿಯಾದ ಸಂತ್ರಸ್ತ ಹೇಳಿಕೊಂಡಿದ್ದಾನೆ.

ಮದ್ಯ ಕಳ್ಳಸಾಗಣೆ, ನಕಲಿ ಪೊಲೀಸ್ ಠಾಣೆ: ಈ ಜಾಲದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿರುವ ರಾಹುಲ್, ಮೋಹನಿ ಪಂಚಾಯತ್‌ನ ಮಧ್ಯ ವಿದ್ಯಾಲಯ ಬೆಟೌನಾವನ್ನು ನಕಲಿ ಪೊಲೀಸ್ ಠಾಣೆಯನ್ನಾಗಿ ಮಾಡಿಕೊಂಡಿದ್ದರು. ಅಲ್ಲಿ ಮದ್ಯ ಕಳ್ಳಸಾಗಣೆದಾರರಿಂದ ಅಕ್ರಮ ವಸೂಲಿ ಮಾಡುತ್ತಿದ್ದ. ವಶಪಡಿಸಿಕೊಂಡ ವಾಹನಗಳು ಮತ್ತು ಮದ್ಯವನ್ನು ಬಿಟ್ಟು ಕಳುಹಿಸಲು ಲಂಚ ತೆಗೆದುಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ. ಸಿಎನ್‌ಜಿ ಆಟೋವನ್ನು ಗಸ್ತು ತಿರುಗಾಟಕ್ಕೆ ಬಳಕೆ ಮಾಡಲಾಗುತ್ತಿತ್ತು ಎಂದು ಈ ಜಾಲದಲ್ಲಿ ಸಿಲುಕಿದ್ದ ಸಂತ್ರಸ್ತನೊಬ್ಬ ಹೇಳಿಕೊಂಡಿದ್ದಾನೆ.

ಈ ಜಾಲ ಬಹಿರಂಗವಾಗಿದ್ದು ಹೇಗೆ? ; ಕಸ್ಬಾದ ರಾಣಿ ಸತಿ ದೇವಸ್ಥಾನದಲ್ಲಿ ತರಬೇತಿಗಾಗಿ ಅಭ್ಯರ್ಥಿಗಳನ್ನು ಕರೆದಾಗ ಇದು, ನಕಲಿ ಪೊಲೀಸ್ ಠಾಣೆ ಎಂಬ ವಿಚಾರ ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾದ ಕೆಲವು ಹಳೆಯ ಸಂತ್ರಸ್ತರು, ಇದು ನಕಲಿ ಪೊಲೀಸ್​ ಠಾಣೆ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ನಂತರ ಎಲ್ಲಾ ಯುವಕರು ಅನುಮಾನಗೊಂಡು, ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಆ ಬಳಿಕ ಇವರೆಲ್ಲ ತಾವು ಮೋಸ ಹೋಗಿರುವುದು ಗೊತ್ತಾಗಿದೆ. ಆ ಬಳಿಕ ಯುವಕರು ತಮ್ಮ ಹಣವನ್ನು ಮರಳಿ ಪಡೆಯಲು ರಾಹುಲ್ ಕುಮಾರ್ ಸಾಹ್ ಅವರ ಮನೆಗೆ ಹೋಗಿದ್ದಾರೆ. ಆದರೆ ಈ ಬಗ್ಗೆ ಸುಳಿವು ಪಡೆದ ಪ್ರಮುಖ ಆರೋಪಿ ಎಸ್ಕೇಪ್​ ಆಗಿದ್ದಾನೆ.

ಕಸ್ಬಾ ಪೊಲೀಸ್​ ಠಾಣೆಗೆ ತೆರಳಿ ದೂರು: ಈ ನಡುವೆ ವಂಚನೆಗೆ ಒಳಗಾದ ಯುವಕರು ಕಸ್ಬಾ ಪೊಲೀಸ್ ಠಾಣೆಗೆ ತೆರಳಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಅಲ್ಲಿನ ಪೊಲೀಸ್​​​ ಅಧಿಕಾರಿಗಳು ಮೊಹನಿಯಲ್ಲಿ ಯಾವುದೇ ಪೊಲೀಸ್ ಠಾಣೆ ಇಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕಸ್ಬಾ ಪೊಲೀಸರು, ಪ್ರಮುಖ ಆರೋಪಿ ರಾಹುಲ್​ ಮನೆಗೆ ತೆರಳಿ, ಆತ ಶರಣಾಗುವಂತೆ ಹೇಳಿ ಎರಡು ದಿನಗಳ ಕಾಲಾವಕಾಶ ನೀಡಿದ್ದಾರೆ. ಎರಡು ದಿನಗಳ ಒಳಗಾಗಿ ಆರೋಪಿ ಶರಣಾಗದಿದ್ದರೆ, ಕೋರ್ಟ್​ ಆದೇಶದೊಂದಿಗೆ ಮನೆ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಆರೋಪಿಯ ಪೋಷಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಸೂಕ್ತ ತನಿಖೆಗೆ ಕಸ್ಬಾ ಶಾಸಕರ ಒತ್ತಾಯ: ಬಿಹಾರದ ಮಾಜಿ ಸಚಿವ ಮತ್ತು ಕಸ್ಬಾ ಶಾಸಕ ಮೊಹಮ್ಮದ್ ಅಫಾಕ್ ಆಲಂ, ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನ್ಯಾಯಯುತ ತನಿಖೆ ನಡೆಸುವಂತೆ ಪೂರ್ಣಿಯಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕೇಯ ಕೆ. ಶರ್ಮಾ ಗೆ ಒತ್ತಾಯಿಸಿದ್ದಾರೆ. ಇಷ್ಟು ದೊಡ್ಡ ವಂಚನೆ ನಡೆಯುತ್ತಿದ್ದರೂ ಪೊಲೀಸರಿಗೆ ಯಾವುದೇ ಮಾಹಿತಿ ಇರಲಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ಸರ್ಕಾರ ನಿರುದ್ಯೋಗವನ್ನು ಉತ್ತೇಜಿಸುತ್ತಿರುವುದರಿಂದ ವಿದ್ಯಾವಂತ ಯುವಕರು ವಂಚಕರ ಬಲೆಗೆ ಬೀಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕಸ್ಬಾ ಪೊಲೀಸ್ ಎಸ್‌ಎಚ್‌ಒ ಹೇಳಿದ್ದಿಷ್ಟು: ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರಕರಣದ ಆರೋಪಿ ರಾಹುಲ್ ಕುಮಾರ್ ಸಾಹ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರಾಹುಲ್ ಕುಮಾರ್ ಬಂಧನಕ್ಕಾಗಿ ಹಲವಾರು ಸಂಭಾವ್ಯ ಅಡಗುತಾಣಗಳ ಮೇಲೆ ದಾಳಿ ಮಾಡಲಾಗಿದೆ. ರಾಹುಲ್ ಕುಟುಂಬಕ್ಕೆ ಎರಡು ದಿನಗಳ ಗಡುವು ನೀಡಲಾಗಿದೆ. ಆತ ಶರಣಾಗದಿದ್ದರೆ ಕಾನೂನಿನ ಪ್ರಕಾರ ಜಪ್ತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಕಸ್ಬಾ ಪೊಲೀಸ್ ಎಸ್‌ಎಚ್‌ಒ ಅಜಯ್ ಕುಮಾರ್ ಅಜ್ನಬಿ ಹೇಳಿದ್ದಾರೆ.

ಈ ಗ್ಯಾಂಗ್‌ನ ಇತರ ಸಹಚರರು ಯಾರು? ಅದರ ಪ್ರಮುಖ ಕಿಂಗ್‌ಪಿನ್ ಯಾರು? ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.

error: Content is protected !!