ಮಂಗಳೂರು: ಆರೋಗ್ಯಧಾಮ ಯೋಗ ವಿದ್ಯಾ ಟ್ರಸ್ಟ್ ಮಂಗಳೂರಿನ ತಪಸ್ವಿ ಸ್ಕೂಲ್ ಆಫ್ ಯೋಗ ಮತ್ತು ಮಂಗಳೂರಿನ ಕೆನರಾ ಹೈಸ್ಕೂಲ್ ಅಸೋಸಿಯೇಷನ್(ರಿ) ಸಹಯೋಗದೊಂದಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯನ್ನು ಆಯೋಜಿಸಲು ಹೆಮ್ಮೆಪಡುತ್ತದೆ. ಈ ಕಾರ್ಯಕ್ರಮವು ಜೂನ್ 15, 2025 ರಂದು ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ನಡೆಯಲಿದೆ ಎಂದು ಆರೋಗ್ಯಧಾಮ ಯೋಗ ವಿದ್ಯಾ ಟ್ರಸ್ಟ್(ರಿ) ಇದರ ಪ್ರಮುಖರು ಹೇಳಿದರು.
ಅವರು ಮಂಗಳೂರಿನ ಪತ್ರಿಕಾ ಭವನದಲ್ಲಿ ಮಾಹಿತಿ ನೀಡಿ, ಆರೋಗ್ಯಧಾಮ ಯೋಗ ವಿದ್ಯಾ ಟ್ರಸ್ಟ್(ರಿ) 2017ನೇ ಇಸವಿಯಲ್ಲಿ ಸ್ಥಾಪನೆಯಾಗಿದ್ದು ಮಂಗಳೂರಿನ ಪ್ರತಿಷ್ಠಿತ ಯೋಗ ಸಂಸ್ಥೆಗಳಲ್ಲಿ ಒಂದಾಗಿದೆ. ಭಾರತೀಯ ಪ್ರಾಚೀನ ಯೋಗವಿಜ್ಞಾನದ ಪೋಷಣೆ, ಯೋಗಾಸಕ್ತರಿಗೆ ಸೂಕ್ತ ತರಬೇತಿ, ಸಾರ್ವಜನಿಕರಿಗೆ ಯೋಗದ ಪ್ರಾಮುಖ್ಯತೆ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು, ಸದ್ರಣ ಸುಸಂಸ್ಕೃತ ಯುವ ಜನಾಂಗದ ನಿರ್ಮಾಣ ಇವು ಸಂಸ್ಥೆಯ ಗುರಿ ಮತ್ತು ಉದ್ದೇಶಗಳಾಗಿವೆ. ಈ ನಿಟ್ಟಿನಲ್ಲಿ ಪ್ರತಿ ವರ್ಷವೂ ಯೋಗ ದಿನದ ಆಚರಣೆಗಳು, ಯೋಗಕ್ಕೆ ಸಂಬಂಧಿಸಿದ ಕಾರ್ಯಗಾರ, ವಿಚಾರ ಸಂಕಿರಣಗಳು, ಶಾಲಾ-ಕಾಲೇಜು ಮಕ್ಕಳಿಗಾಗಿ ಯೋಗ ಶಿಬಿರಗಳು, ರೋಗಿಗಳಿಗೆ ಯೋಗ ಚಿಕಿತ್ಸೆ, ಸಾರ್ವಜನಿಕರಿಗಾಗಿ ಯೋಗ ಆರೋಗ್ಯ ಶಿಬಿರದಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಗೊಳಿಸುವಲ್ಲಿ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿದೆ. ಯೋಗಾಸನ ಸ್ಪರ್ಧೆಯು ಪುರುಷ ಮತ್ತು ಮಹಿಳಾ ಸ್ಪರ್ಧಿಗಳಿಗೆ 14 ವಿಭಿನ್ನ ವಿಭಾಗಗಳನ್ನು ಒಳಗೊಂಡಿದ್ದು, 250ಕ್ಕಿಂತಲೂ ಹೆಚ್ಚು ಸ್ಪರ್ದಾಳುಗಳು ಭಾಗವಹಿಸುವ ನಿರೀಕ್ಷೆ ಇದೆ. ತುಳುನಾಡ ಯೋಗ ಕುಮಾರ-2025 ಮತ್ತು ತುಳುನಾಡ ಯೋಗ ಕುಮಾರಿ-2025 ಚಾಂಪಿಯನ್ನಗಳ ಆಯ್ಕೆಯಲ್ಲಿ ಕೊನೆಗೊಳ್ಳುತ್ತದೆ ಎಂದು ಹೇಳಿದರು.
ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಅನುಭವಿ ಯೋಗ ತಜ್ಞರು, ಗೌರವಾನ್ವಿತ ಯೋಗ ಶಿಕ್ಷಕರು, ವೈದ್ಯರು, ಶಿಕ್ಷಣ ತಜ್ಞರು, ಯೋಗಪಟುಗಳು, ಯೋಗಾಕಾಂಕ್ಷಿಗಳು, ಯೋಗವನ್ನು ಸಂರಕ್ಷಿಸಲು ಮತ್ತು ಮುನ್ನಡೆಸಲು ಬದ್ಧರಾಗಿರುವ ಉದ್ಯಮಿಗಳು ಮತ್ತು ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ. ಆಸಾಧಾರಣ ಪ್ರತಿಭೆಗಳ ಪ್ರದರ್ಶನಕ್ಕೆ ಸಾಕ್ಷಿಯಾಗುವುದಲ್ಲದೆ ಜ್ಞಾನವಿನಿಮಯ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಗೆ ಈ ಕಾರ್ಯಕ್ರಮವು ಮಹತ್ವದ ವೇದಿಕೆಯಾಗಿದೆ ಎಂದು ಅವರು ವಿವರಿಸಿದರು.
ವೇದಿಕೆಯಲ್ಲಿ ಆರೋಗ್ಯಧಾಮ ಯೋಗ ವಿದ್ಯಾ ಟ್ರಸ್ಟ್(ರಿ) ಅಧ್ಯಕ್ಷ ಡಾ. ಸುರೇಶ್ ಕುಮಾರ್ ಶೆಟ್ಟಿ, ಸಂಚಾಲಕ ಡಾ. ರಂಗಪ್ಪ ಹೆಚ್.ಜಿ, ಉಪಾಧ್ಯಕ್ಷೆ ವಿದ್ಯಾ ಕಾಮತ್ , ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರಫುಲ್ಲ, ಪ್ರತ್ಯಕ್ಷ ಕುಮಾರ್ ಉಪಸ್ಥಿತರಿದ್ದರು.