ಹಗ್ಗ ಜಗ್ಗಾಡಿದ ಬಂಟ ಯುವತಿಯರು: ಸುರತ್ಕಲ್‌ ಎದುರು ಮಂಡಿಯೂರಿದ ಕುಂಜತ್ತೂರು!

ಸುರತ್ಕಲ್: ಬಂಟರ ಸಂಘ ಪೈವಳಿಕೆ ಮಂಜೇಶ್ವರ ಇದರ ಆಶ್ರಯದಲ್ಲಿ ಮಹಿಳೆಯರ ಅಂತರ್ ರಾಜ್ಯ ಮಟ್ಟದ ಬಂಟರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘದ ಮಹಿಳಾ ತಂಡವು 25 ಸಾವಿರ ನಗದಿನೊಂದಿಗೆ ಪ್ರಥಮ ಸ್ಥಾನವನ್ನು ಗೆದ್ದುಕೊಂಡಿದೆ.
ಕಯ್ಯಾರು ಎಸ್ ಆರ್ ಎ ಎಲ್ ಪಿ ಶಾಲಾ ಮೈದಾನದಲ್ಲಿ ನಡೆದ ಲೀಗ್ ಮಾದರಿಯ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದವು.

ಫೈನಲ್ ಪಂದ್ಯಾಟದಲ್ಲಿ ಸುರತ್ಕಲ್ ಬಂಟರ ಮಹಿಳಾ ತಂಡ ಹಾಗೂ ಕುಂಜತ್ತೂರು ಮಹಿಳಾ ತಂಡದ ಮಧ್ಯೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಸುರತ್ಕಲ್‌ ಬಂಟ ಯುವತಿಯರ ಪೌರುಷದ ಮುಂದೆ ಕುಂಜತ್ತೂರು ಬಂಟ ಯುವತಿಯರು ಮಂಡಿಯೂರಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಂಬೈ ಹೇರಂಭ ಇಂಡಸ್ಟ್ರೀಸ್ ಸಂಸ್ಥೆಯ ಅಧ್ಯಕ್ಷ, ಉದ್ಯಮಿ ಸದಾಶಿವ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿ ವಿತರಿಸಿದರು. ಮಾಜಿ ಸಚಿವ ಬಿ ರಮಾನಾಥ ರೈ, ಪೈವಳಿಕೆ ಬಂಟರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸುರತ್ಕಲ್ ತಂಡದ ನಾಯಕಿ ಬಬಿತಾ ಶೆಟ್ಟಿ ಮತ್ತು ಸದಸ್ಯರು ಪ್ರಶಸ್ತಿ ಸ್ವೀಕರಿಸಿದರು. ಬೆಸ್ಟ್ ಲಾಕರ್ ಪ್ರಶಸ್ತಿಯನ್ನು ವೈಷ್ಣವಿ ಅಡಪ ಪಡೆದರು. ತಂಡದ ಕೋಚ್ ನಿನಾದ್ ಜಯರಾಮ ಶೆಟ್ಟಿ ಮತ್ತು ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.

error: Content is protected !!