ಬಂಟ್ವಾಳ: ಮಗುವೊಂದಕ್ಕೆ ಅರ್ಧ ಟಿಕೆಟ್ ತೆಗೆಯುವ ವಿಚಾರವಾಗಿ ನಿರ್ವಾಹಕ ಟಿಕೆಟ್ ಯಂತ್ರದಲ್ಲಿ ಮಹಿಳೆಗೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ವಾಗ್ವಾದ ನಡೆದ ಘಟನೆ ಗುರುವಾರ ರಾತ್ರಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಬಸ್ಸಿನಲ್ಲಿ ನಡೆದಿದ್ದಾಗಿ ಹೇಳಲಾಗಿದೆ.

ಬಸ್ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದು, ಇದರಲ್ಲಿ ಮಹಿಳೆಯೋರ್ವರು ಮಗು ಜೊತೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಮಹಿಳೆ ಮಗುವಿಗೆ ಅರ್ಧ ಟಿಕೆಟ್ ಕೊಡುವಂತೆ ವಿನಂತಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಕಂಡಕ್ಟರ್ ಇದಕ್ಕೆ ಒಪ್ಪದೇ ಇದ್ದಾಗ ಮಹಿಳೆ ಇದಕ್ಕೆ ಆಕ್ಷೇಪಿಸಿದ್ದು, ಕುಪಿತನಾದ ಬಸ್ ಕಂಡಕ್ಟರ್ ಆಕೆಗೆ ಟಿಕೆಟ್ ಯಂತ್ರದಲ್ಲಿ ಹಲ್ಲೆ ನಡೆಸಿದ್ದಾಗಿ ಮಹಿಳೆ ಆರೋಪಿಸಿದ್ದಾಗಿ ಪೊಲೀಸ್ ಮೂಲಗಳಿಂದ ಮಾಹಿತಿ ಲಭಿಸಿದೆ.
ಹಲ್ಲೆಯಿಂದ ಬೆಚ್ಚಿಬಿದ್ದ ಮಹಿಳೆ ನಾನು ಪೊಲೀಸರಿಗೆ ದೂರು ನೀಡುತ್ತೇನೆ, ಬಸ್ಸನ್ನು ನಿಲ್ಲಿಸುವಂತೆ ಕೇಳಿದಾಗ ಕಂಡಕ್ಟರ್ ಈಕೆ ಜೊತೆ ವಾಗ್ವಾದ ನಡೆಸಿದ್ದಾನೆ ಎನ್ನಲಾಗಿದೆ. ಆದರೆ ಬಸ್ ಚಾಲಕ ಬಸ್ಸನ್ನು ನಿಲ್ಲಿಸಲು ಮುಂದಾಗಲಿಲ್ಲ. ಈ ಹಿನ್ನೆಲೆಯಲ್ಲಿ ಬಸ್ನಲ್ಲಿದ್ದ ಪ್ರಯಾಣಿಕರೊಬ್ಬರು ಬಂಟ್ವಾಳ ನಗರ ಪೊಲೀಸರಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಠಾಣಾ ಪಿಎಸ್ಐ ರಾಮಕೃಷ್ಣ ಹಾಗೂ ಸಿಬ್ಬಂದಿ ಆಗಮಿಸಿ ಬಸ್ಸನ್ನು ಬಿ.ಸಿ.ರೋಡು ನಿಲ್ದಾಣದಲ್ಲಿ ನಿಲ್ಲಿಸಿ ವಿಚಾರಣೆ ನಡೆಸಿದ್ದಾರೆ.
ಈ ಹಿಂದೆ ಸರ್ಕಾರಿ ಬಸ್ ನಿರ್ವಾಹಕನೊಬ್ಬ ಬಸ್ನಲ್ಲಿ ತೂಕಡಿಸುತ್ತಿದ್ದ ಪ್ರಯಾಣಿಕ ಯುವತಿಯನ್ನು ಅಸಭ್ಯವಾಗಿ ಸ್ಪರ್ಷಿಸಿ ಕೆಲಸದಿಂದ ಅಮಾನಾತಾಗಿದ್ದ. ಇದೀಗ ಈ ಘಟನೆ ನಡೆದಿದ್ದು, ಬಸ್ ಸಿಬ್ಬಂದಿಗೆ ಎಚ್ಚರಿಕೆ ನೀಡುವಂತೆ ಸಾರ್ವಜನಿಕರು ಪೊಲೀಸರನ್ನು ಆಗ್ರಹಿಸಿದ್ದಾರೆ.