
ಬೆಳ್ತಂಗಡಿ: 27 ವರ್ಷ ವಯಸ್ಸಿನ ಯುವಕನ ಶವ ಪೊಲೀಸ್ ಠಾಣಾ ವ್ಯಾಪ್ತಿಯ ಗುರುವಾಯನಕೆರೆ ವಿದ್ಯುತ್ ಸಬ್ ಸ್ಟೇಷನ್ ಬಳಿ ಇಂದು ಸಂಜೆ ಪತ್ತೆಯಾಗಿದ್ದು ಮೃತನ ತಂದೆ ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ.
ಮೃತ ಯುವಕ ಮುಸ್ತಾಕ್ ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದು, ಆತನ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಜೂನ್ 30ರಂದು ಮುಸ್ತಾಕ್ ರನ್ನು ಸಹೋದರ ಮನಾಸಿರ್ ರಾತ್ರಿ ತಮ್ಮ ಬೈಕ್ನಲ್ಲಿ ಕಲ್ಲೇರಿಯಿಂದ ಮದ್ದಡ್ಕದಲ್ಲಿ ಪಾರ್ಕ್ ಮಾಡಲಾಗಿದ್ದ ಅವರ ಲಾರಿಯ ಬಳಿ ಬಿಟ್ಟು ಹೋಗಿದ್ದರು. ಅದಾದ ಬಳಿಕ ಮುಸ್ತಾಕ್ ನಾಪತ್ತೆಯಾಗಿದ್ದರು. ಇಂದು ಕುವೆಟ್ಟು ಗ್ರಾಮದ ಶಕ್ತಿನಗರದ ಸಮೀಪವಿರುವ ವಿದ್ಯುತ್ ಸಬ್ ಸ್ಟೇಷನ್ನ ನಿರ್ಜನ ಪ್ರದೇಶದಲ್ಲಿ ಮುಸ್ತಾಕ್ ಶವವಾಗಿ ಪತ್ತೆಯಾಗಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ಹಿನ್ನೆಲೆ ಬಯಲಾಗಲಿದೆ.
