
ಮಂಗಳೂರು: ಪ್ರಚಲಿತ ಚಾರಿಟಬಲ್ ಟ್ರಸ್ಟ್ (ರಿ.) ಹಾಗೂ ಲೋಬೋ ಫೌಂಡೇಶನ್ (ರಿ.) ಇವರ ಸಂಯುಕ್ತ ಆಶ್ರಯದಲ್ಲಿ ಒಂದು ತಿಂಗಳ ಕಾಲ ವಿವಿಧ ಶಾಲೆಗಳಲ್ಲಿ ನಡೆಯಲಿರುವ ‘ಬಾಲಿಕಾ ಜಾಗೃತಿ ಅಭಿಯಾನ–2026’ ರ ಉದ್ಘಾಟನಾ ಸಮಾರಂಭವು ಕಾವೂರಿನ ಬಿ.ಜಿ.ಎಸ್. ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು.

ಅಭಿಯಾನಕ್ಕೆ ಬಿ.ಜಿ.ಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪೂಜ್ಯ ಶ್ರೀ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, “ಬಾಲಕಿಯರ ಶಿಕ್ಷಣ ಹಾಗೂ ಅವರ ಜಾಗೃತಿಯು ಸಮಾಜದ ಉನ್ನತಿಗೆ ಅತ್ಯಗತ್ಯ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬಾಲಕಿಯರು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು” ಎಂದು ಹೇಳಿದರು.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, “ಬಾಲಕಿಯರ ಸುರಕ್ಷತೆ ಮತ್ತು ಶಿಕ್ಷಣದ ಕುರಿತು ಇಂತಹ ಅಭಿಯಾನಗಳು ಅತ್ಯಂತ ಅವಶ್ಯಕ. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡುತ್ತಿರುವುದು ಶ್ಲಾಘನೀಯ” ಎಂದು ಅಭಿಪ್ರಾಯಪಟ್ಟರು.
ಪ್ರಚಲಿತ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷೆ ಡಾ. ಸಂಸದ್ ಕುಂಜತ್ತಬೈಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಬಿ.ಜಿ.ಎಸ್. ಸಂಸ್ಥೆಗಳ ಮಂಗಳೂರು ವ್ಯವಸ್ಥಾಪಕರಾದ ಸುಬ್ಬ ಕಾರಡ್ಕ ಹಾಗೂ ಬಿ.ಜಿ.ಎಸ್. ಪ್ರೌಢಶಾಲೆ, ಕಾವೂರಿನ ಮುಖ್ಯೋಪಾಧ್ಯಾಯಿನಿ ಪ್ರಿಯಾ ಬಂಗೇರ ಉಪಸ್ಥಿತರಿದ್ದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ವಕೀಲೆ ಮಾನಸ ಹೆಗ್ಡೆ, ಸಮಾಜಕಾರ್ಯ ಮತ್ತು ಶಿಕ್ಷಣ ತಜ್ಞೆ ಅನುರಾಧ ಶೆಟ್ಟಿ, ಕರ್ನಾಟಕ ಸರ್ಕಾರದ ಬಾಲ ನ್ಯಾಯ ಮಂಡಳಿಯ ಸದಸ್ಯೆ ಸಚಿತಾ ನಂದಗೋಪಾಲ್ ಹಾಗೂ ಎ.ಜೆ. ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಸಂಸ್ಕೃತಿ ಶೆಟ್ಟಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಪ್ರಚಲಿತ ಚಾರಿಟಬಲ್ ಟ್ರಸ್ಟ್ (ರಿ.) ನ ಕೋಶಾಧಿಕಾರಿ ವಿಧಿಶ್ ಸಾಲಿಯಾನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಟ್ರಸ್ಟೀ ಕವಿತಾ ಶ್ರೀರಾಮ್ ಸ್ವಾಗತಿಸಿದರು. ಟ್ರಸ್ಟೀ ಸವಾದ್ ವಂದಿಸಿದರು. ಕಾರ್ಯದರ್ಶಿ ಹನಿಷ ಸವಾದ್ ಕಾರ್ಯಕ್ರಮ ನಿರೂಪಿಸಿದರು.
