
ಮಂಗಳೂರು IAS, ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಹಾಗೂ ರಾಮಕೃಷ್ಣ ಮಿಷನ್, ಮಂಗಳೂರು ಇವರ ಸಹಯೋಗದಲ್ಲಿ “ಮಾರ್ಗದರ್ಶಿ – Cracking the UPSC Examination” ಎಂಬ ವಿಶೇಷ ನಾಗರಿಕ ಸೇವಾ ಪರೀಕ್ಷಾ ಮಾರ್ಗದರ್ಶನ ಕಾರ್ಯಕ್ರಮವನ್ನು 2026ರ ಜೂನ್ 28ರಂದು ಭಾನುವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 12.30ರವರೆಗೆ ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಿಷನ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ನಾಗರಿಕ ಸೇವಾ ಪರೀಕ್ಷೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ, ಪ್ರೇರಣೆ ಹಾಗೂ ಸ್ಪಷ್ಟ ದಿಕ್ಕುನಿರ್ದೇಶನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಿಷನ್, ಮಂಗಳೂರು ಇದರ ಕಾರ್ಯದರ್ಶಿಗಳಾದ ಸ್ವಾಮಿ ಜಿತಕಾಮಾನಂದಜಿ, ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಶ್ರೀ ಅರುಣ್ ಜೇಜಿ ಚಕ್ರವರ್ತಿ, IPS, ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸುಧೀರ್ ಕುಮಾರ್ ರೆಡ್ಡಿ, IPS ಹಾಗೂ ಮಂಗಳೂರಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾದ ಶ್ರೀ ಶಶಿಕಾಂತ್ ಸೋಮನಾಥ್ ವಿಭೂತೆ, IFS ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. UPSC ಮಾಸ್ಟರ್ ಟ್ರೈನರ್ಗಳಾದ ಶ್ರೀ ಮೋಹನ್ ಕೃಷ್ಣಮೂರ್ತಿ ಹಾಗೂ ಶ್ರೀ ಚಂದ್ರಮೋಹನ್ ಇನಗಂಟಿ, ಪ್ರಥಮ ದರ್ಜೆ ಮಹಿಳಾ ಕಾಲೇಜು, ಬಲ್ಮಠ, ಮಂಗಳೂರು ಇದರ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸುಮನಾ ಬಿ., ಜಾಗತಿಕ ಮಟ್ಟದ ಗೂಗಲ್ ಪ್ರಮಾಣಿತ ಶಿಕ್ಷಣತಜ್ಞ ಹಾಗೂ ಮೈಕ್ರೋಸಾಫ್ಟ್ ಪ್ರಮಾಣಿತ ಶಿಕ್ಷಣ ತಜ್ಞರಾದ ಶ್ರೀ ಡಾನ್ ಪ್ರಕಾಶ್ ಮತ್ತು ಮಂಗಳೂರು IAS ಸಂಸ್ಥಾಪಕರಾದ ಶ್ರೀ ಸಂತೋಷ್ ರಾವ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ನೀಡಲಿದ್ದಾರೆ.

UPSC ಪರೀಕ್ಷೆಯ ಮಾದರಿ, ಪರಿಣಾಮಕಾರಿ ಅಧ್ಯಯನ ತಂತ್ರಗಳು, ಸಮಯ ನಿರ್ವಹಣೆ, ಉತ್ಪಾದಕತೆ ವೃದ್ಧಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಸಾಮಾನ್ಯವಾಗಿ ಮಾಡುವ ತಪ್ಪುಗಳು, ತಜ್ಞರೊಂದಿಗೆ ನೇರ ಪ್ರಶ್ನೋತ್ತರ, ಪ್ರೇರಣಾತ್ಮಕ ಮಾರ್ಗದರ್ಶನ ಹಾಗೂ ವೃತ್ತಿ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ವಿಶೇಷ ಉಪನ್ಯಾಸಗಳು ನಡೆಯಲಿವೆ. ಈ ಕಾರ್ಯಕ್ರಮವು ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ಟೆಲಿನೊ ಹಾಗೂ ಮಂಗಳೂರು IAS ಸಂಸ್ಥಾಪಕರಾದ ಶ್ರೀ ಸಂತೋಷ್ ರಾವ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಅಗತ್ಯವಾದ ಮತ್ತು ಸರಿಯಾದ ತಯಾರಿ ವಿಧಾನ, ಮಾರ್ಗದರ್ಶನ ಹಾಗೂ ಸ್ಪಷ್ಟತೆಯನ್ನು ಅಭ್ಯರ್ಥಿಗಳಿಗೆ ಒದಗಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಎಲ್ಲಾ ಅಧಿವೇಶನಗಳಿಗೆ ಪ್ರವೇಶ, ಊಟ, ಇ-ಪ್ರಮಾಣಪತ್ರ ಹಾಗೂ ಭವಿಷ್ಯದ ವಿದ್ಯಾರ್ಥಿವೇತನ ಮತ್ತು ಮಾರ್ಗದರ್ಶನ ಕಾರ್ಯಕ್ರಮಗಳ ಅವಕಾಶಗಳು ಲಭ್ಯವಾಗಲಿವೆ. ನಾಗರಿಕ ಸೇವೆ ಹಾಗೂ ಸರ್ಕಾರಿ ಉದ್ಯೋಗ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಆಸನಗಳು ಸೀಮಿತವಾಗಿರುವುದರಿಂದ ಮೊದಲಿಗೆ ನೋಂದಾಯಿಸುವವರಿಗೆ ಆದ್ಯತೆ ನೀಡಲಾಗುವುದು. ನೋಂದಣಿ ಶುಲ್ಕ ರೂ. 200 ಆಗಿರುತ್ತದೆ.

ಪತ್ರಿಕಾಗೋಷ್ಠಿಯಲ್ಲಿ ಸಂತೋಷ್ ರಾವ್ – ಸಂಸ್ಥಾಪಕರು, ಮಂಗಳೂರು ಐಎಎಸ್, ಫಾ. ರೋಶನ್ ರೊಸಾರಿಯೊ OFM (CAP) – ನಿರ್ದೇಶಕರು, ಸಂದೇಶ ಫೌಂಡೇಶನ್ ಫಾರ್ ಕಲ್ಚರ್ ಆ್ಯಂಡ್ ಎಜುಕೇಶನ್, ರೊಯ್ ಕ್ಯಾಸ್ಟೆಲಿನೊ – ಅಧ್ಯಕ್ಷರು, ರಚನಾ – ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ
ಆ್ಯಲ್ರನ್ ರೊಡ್ರಿಗಸ್ ಮತ್ತಿತರರು ಉಪಸ್ಥಿತರಿದ್ದರು.