ಬೆಂಗಳೂರು: ಭಾರತೀಯ ಸಶಸ್ತ್ರ ಪಡೆಗಳು ಅಗತ್ಯಬಿದ್ದರೆ ʻಆಪರೇಷನ್ ಸಿಂಧೂರ್ 2.0′ (Operation Sindoor 2.0) ಕಾರ್ಯಾಚರಣೆಗೆ ಸಂಪೂರ್ಣ ಸಜ್ಜಾಗಿವೆ ಎಂದು ಭೂಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶನಿವಾರ ತಿಳಿಸಿದ್ದಾರೆ. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ (NDA) 150ನೇ ಬ್ಯಾಚ್ನ ಪಾಸಿಂಗ್ ಔಟ್ ಪರೇಡ್ ಸಮಾರಂಭದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಿದೆಯಷ್ಟೇ, ಆದರೆ ಮುಂದಿನ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳು ಪರಸ್ಪರ ಸಮನ್ವಯತೆಯೊಂದಿಗೆ ಸಿದ್ಧತೆ ನಡೆಸಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ವರ್ಷ ಏಪ್ರಿಲ್ನಲ್ಲಿ ನಡೆದ ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ, ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಲು ಭಾರತವು ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯನ್ನು ಹಮ್ಮಿಕೊಂಡಿತ್ತು. ಈ ಕಾರ್ಯಾಚರಣೆಯು ಭಾರತದ ದೃಢ ಸಂಕಲ್ಪ ಮತ್ತು ಸಶಸ್ತ್ರ ಪಡೆಗಳ ನಿಖರ ಹಾಗೂ ಸಮಯೋಚಿತ ದಾಳಿಯ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಭವಿಷ್ಯದ ಯುದ್ಧಗಳು ಕೇವಲ ಭೂಮಿ, ಆಕಾಶ ಅಥವಾ ಸಮುದ್ರಕ್ಕೆ ಸೀಮಿತವಾಗಿರದೆ ಬಾಹ್ಯಾಕಾಶ, ಸೈಬರ್ ಮತ್ತು ಮಾಹಿತಿ ತಂತ್ರಜ್ಞಾನದ ರಂಗಕ್ಕೂ ವಿಸ್ತರಿಸಲಿವೆ ಎಂದು ಜನರಲ್ ದ್ವಿವೇದಿ ಅಭಿಪ್ರಾಯಪಟ್ಟಿದ್ದಾರೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ
.


ಸದ್ಯದ ಯುದ್ಧಭೂಮಿಗಳು ನಿರಂತರ ಕಣ್ಗಾವಲಿಗೆ ಒಳಪಟ್ಟಿರುವುದರಿಂದ ಮಿಲಿಟರಿ ಯೋಜನೆಗಳನ್ನು ರೂಪಿಸುವಾಗ ಮತ್ತು ಗಡಿಭಾಗದ ನಾಗರಿಕರ ರಕ್ಷಣೆಯ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕಾಗಿದೆ. ತಂತ್ರಜ್ಞಾನದ ಪ್ರಗತಿಗೆ ತಕ್ಕಂತೆ ಭಾರತೀಯ ಸೇನೆಯು ಡ್ರೋನ್ ಬೆಟಾಲಿಯನ್, ದಿವ್ಯಾಸ್ತ್ರ ಬ್ಯಾಟರಿಗಳು ಮತ್ತು ಭೈರವ್ ಬೆಟಾಲಿಯನ್ಗಳಂತಹ ಅತ್ಯಾಧುನಿಕ ರಚನೆಗಳನ್ನು ಅಳವಡಿಸಿಕೊಳ್ಳುತ್ತಿದೆ. ಸೇನೆಯ ಪ್ರತಿಯೊಬ್ಬ ಸೈನಿಕನೂ ಡ್ರೋನ್ ಆಪರೇಟ್ ಮಾಡುವ ಸಾಮರ್ಥ್ಯ ಹೊಂದಿರಬೇಕು ಎಂಬ “ಈಗಲ್ ಆನ್ ದಿ ಆರ್ಮ್” (Eagle on the Arm) ದೂರದೃಷ್ಟಿಯೊಂದಿಗೆ ಅಕಾಡೆಮಿಗಳಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಭಾರತೀಯ ಸೇನೆಯಲ್ಲಿ ಬಹುಕಾಲದಿಂದ ಬಾಕಿ ಉಳಿದಿರುವ ‘ಥಿಯೇಟರೈಸೇಶನ್’ (ಮೂರೂ ಸೇನೆಗಳ ಏಕೀಕೃತ ಕಮಾಂಡ್) ಪ್ರಕ್ರಿಯೆಯು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದು, ಚೀಫ್ಸ್ ಆಫ್ ಸ್ಟಾಫ್ ಕಮಿಟಿಯ ಚರ್ಚೆಗಳು ಪೂರ್ಣಗೊಂಡಿವೆ. ಈ ಕುರಿತ ಅಂತಿಮ ವರದಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅನುಮೋದನೆಗೆ ಕಳುಹಿಸಲಾಗಿದೆ. ಹೊಸ ಪ್ರಸ್ತಾವನೆಯ ಪ್ರಕಾರ, ಮೂರೂ ಸೇನಾ ಮುಖ್ಯಸ್ಥರು ಸೈನ್ಯದ ತರಬೇತಿ ಮತ್ತು ನಿರ್ವಹಣೆಯನ್ನು ನೋಡಿಕೊಂಡರೆ, ಥಿಯೇಟರ್ ಕಮಾಂಡರ್ಗಳು ಕಾರ್ಯಾಚರಣೆಯ ಜವಾಬ್ದಾರಿಯನ್ನು ಹೊರಲಿದ್ದಾರೆ. ಮುಂದಿನ 2 ರಿಂದ 3 ವರ್ಷಗಳಲ್ಲಿ ಈ ಹೊಸ ವ್ಯವಸ್ಥೆಯು ಜಾರಿಗೆ ಬರಲಿದೆ ಎಂದು ಜನರಲ್ ಉಪೇಂದ್ರ ದ್ವಿವೇದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.