ನವದೆಹಲಿ: ಅಹ್ಮದಾಬಾದ್ನ ಭೌತ ಸಂಶೋಧನಾ ಪ್ರಯೋಗಾಲಯದ (PRL) ವಿಜ್ಞಾನಿಗಳು ಚಂದ್ರನ ದಕ್ಷಿಣ ಧ್ರುವದ ಅತ್ಯಂತ ಶೀತಲ ಮತ್ತು ಶಾಶ್ವತ ಕತ್ತಲೆಯಿಂದ ಆವೃತವಾಗಿರುವ ಕುಳಿಗಳ (Craters) ಆಳದಲ್ಲಿ ಘನೀಕೃತ ಮಂಜುಗಡ್ಡೆ ಅಥವಾ ಭೂಗತ ಹಿಮವಿರುವುದನ್ನು ಪತ್ತೆಹಚ್ಚಿದ್ದಾರೆ. ಕುತೂಹಲದ ಸಂಗತಿಯೆಂದರೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಕಳುಹಿಸಿದ್ದ ʻಚಂದ್ರಯಾನ-2′ ನೌಕೆಯು ಕಳುಹಿಸಿರುವ ಅತ್ಯಾಧುನಿಕ ದತ್ತಾಂಶಗಳನ್ನು ಆಧರಿಸಿ ಈ ನಿಗೂಢ ಸತ್ಯವನ್ನು ಹೊರಗೆಳೆಯಲಾಗಿದೆ. ನಿಸರ್ಗದ ರಹಸ್ಯಗಳನ್ನು ಭೇದಿಸುವ ಮನುಷ್ಯನ ಹಪಾಹಪಿಗೆ ಚಂದ್ರ ಈಗ ಹೊಸದೊಂದು ಕದ ತೆರೆದಿದ್ದಾನೆ.
ಚಂದ್ರನ ಮೇಲ್ಮೈಯನ್ನು ದಾಟಿ ಅದರ ಗರ್ಭದೊಳಗೆ ಇಣುಕಿ ನೋಡುವುದು ಸಾಮಾನ್ಯ ತಂತ್ರಜ್ಞಾನಕ್ಕೆ ಸಾಧ್ಯವಿರಲಿಲ್ಲ. ಆದರೆ, ಚಂದ್ರಯಾನ-೨ ಆರ್ಬಿಟರ್ನಲ್ಲಿ ಅಳವಡಿಸಲಾಗಿದ್ದ ‘ಡ್ಯುಯಲ್ ಫ್ರೀಕ್ವೆನ್ಸಿ ಸಿಂಥೆಟಿಕ್ ಅಪರ್ಚರ್ ರಾಡಾರ್’ (DFSAR) ಎಂಬ ಮೈಕ್ರೋವೇವ್ ಇಮೇಜಿಂಗ್ ಉಪಕರಣವು ಚಂದ್ರನ ಅಂಧಕಾರದ ಪದರಗಳನ್ನು ಸೀಳಿ ಈ ರಹಸ್ಯವನ್ನು ಪತ್ತೆ ಮಾಡಿದೆ. ಎಲ್-ಬ್ಯಾಂಡ್ ಮತ್ತು ಎಸ್-ಬ್ಯಾಂಡ್ ತರಂಗಾಂತರಗಳಲ್ಲಿ ಚಂದ್ರನನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಿದ ಜಗತ್ತಿನ ಮೊದಲ ರಾಡಾರ್ ಇದಾಗಿದೆ. ಈ ಹಿಂದೆ ಇದೇ ಚಂದ್ರಯಾನ-೨ ಚಂದ್ರನ ಅಂಗಳದಲ್ಲಿ ನೀರಿನ ಕಣಗಳು (H2O) ಮತ್ತು ಹೈಡ್ರಾಕ್ಸಿಲ್ ಇರುವುದನ್ನು ಪತ್ತೆಹಚ್ಚಿ ಇಡೀ ಜಗತ್ತನ್ನೇ ಬೆರಗುಗೊಳಿಸಿತ್ತು. ಈಗ ಅದರ ಮುಂದುವರಿದ ಭಾಗವಾಗಿ ಹಿಮದ ಹೆಪ್ಪುಗಟ್ಟಿದ ಬೃಹತ್ ಸಂಗ್ರಹವೇ ಪತ್ತೆಯಾಗಿದೆ.
)
ವಿಜ್ಞಾನ ಲೋಕದಲ್ಲಿ ಈ ಸಂಶೋಧನೆ ಇಷ್ಟೊಂದು ಸಂಚಲನ ಮೂಡಿಸಲು ಒಂದು ಬಲವಾದ ಕಾರಣವಿದೆ. ಮುಂದಿನ ದಿನಗಳಲ್ಲಿ ಮನುಷ್ಯ ಚಂದ್ರನ ಮೇಲೆ ಶಾಶ್ವತ ನೆಲೆ ಸ್ಥಾಪಿಸಲು ಹೊರಟರೆ, ಅಲ್ಲಿಗೆ ಭೂಮಿಯಿಂದ ನೀರನ್ನು ಹೊತ್ತೊಯ್ಯುವುದು ಅಸಾಧ್ಯದ ಮಾತು. ಚಂದ್ರನ ಆಳದಲ್ಲಿ ಸಿಗುವ ಈ ಹಿಮವನ್ನು ಕರಗಿಸಿ ಕುಡಿಯುವ ನೀರನ್ನಾಗಿ, ಉಸಿರಾಡಲು ಆಮ್ಲಜನಕವನ್ನಾಗಿ ಪರಿವರ್ತಿಸಬಹುದು. ಅಷ್ಟೇ ಅಲ್ಲ, ಈ ನೀರಿನಿಂದ ಹೈಡ್ರೋಜನ್ ಬೇರ್ಪಡಿಸಿ ರಾಕೆಟ್ಗಳಿಗೆ ಇಂಧನವನ್ನಾಗಿಯೂ ಬಳಸಬಹುದು! ಅಂದರೆ, ಮುಂದೊಂದು ದಿನ ಮಂಗಳ ಗ್ರಹ ಅಥವಾ ಕಲ್ಪನಾತೀತ ಬ್ರಹ್ಮಾಂಡದ ಆಳಕ್ಕೆ ಪ್ರಯಾಣ ಬೆಳೆಸಲು ಚಂದ್ರನೇ ನಮಗೆ ʻಪೆಟ್ರೋಲ್ ಬಂಕ್’ ಅಥವಾ ಲಾಂಚ್ ಪ್ಯಾಡ್ ಆಗಲಿದ್ದಾನೆ.

ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ತನ್ನ ‘ಆರ್ಟೆಮಿಸ್’ ಕಾರ್ಯಕ್ರಮದ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲೇ ಮಾನವನ ನೆಲೆ ನಿರ್ಮಿಸಲು ಯೋಜಿಸುತ್ತಿದೆ. ಕಾರಣ, ಅಲ್ಲಿನ ಕತ್ತಲೆಯ ಕಣಿವೆಗಳಲ್ಲಿ ಹಿಮದ ನಿಧಿ ಇದ್ದರೆ, ಅದರ ಪಕ್ಕದ ಎತ್ತರದ ಶಿಖರಗಳ ಮೇಲೆ ನಿರಂತರ ಸೂರ್ಯನ ಬೆಳಕು ಬೀಳುತ್ತದೆ. ಇದರಿಂದ ಸೌರಶಕ್ತಿ (Solar Power) ಉತ್ಪಾದನೆ ಸುಲಭವಾಗುತ್ತದೆ. ಈಗ ಇಸ್ರೋ ನೀಡಿರುವ ಈ ಮಹತ್ವದ ಮಾಹಿತಿಯು ಜಾಗತಿಕ ಬಾಹ್ಯಾಕಾಶ ರೇಸ್ನಲ್ಲಿ ಭಾರತದ ತೂಕವನ್ನು ಮತ್ತು ರಾಜತಾಂತ್ರಿಕ ಪ್ರಭಾವವನ್ನು ಜಗತ್ತಿನ ಎದುರು ಎತ್ತಿ ಹಿಡಿದಿದೆ. ಭವಿಷ್ಯದ ಜಾಗತಿಕ ಮಿಷನ್ಗಳು ಎಲ್ಲಿ ಇಳಿಯಬೇಕು, ಚಂದ್ರನ ಮೂಲಸೌಕರ್ಯ ಎಲ್ಲಾಗಬೇಕು ಎಂಬುದನ್ನು ಭಾರತದ ದತ್ತಾಂಶಗಳೇ ನಿರ್ಧರಿಸಲಿವೆ.

ಚಂದ್ರಯಾನ-೩ ರ ಅಭೂತಪೂರ್ವ ಯಶಸ್ಸಿನ ನಂತರ, ಭಾರತವು ಈಗ ಚಂದ್ರನ ಧ್ರುವಗಳಿಂದ ಮಣ್ಣು ಮತ್ತು ಕಲ್ಲಿನ ಮಾದರಿಗಳನ್ನು ಭೂಮಿಗೆ ತರುವ ‘ಚಂದ್ರಯಾನ-೪’ ಮಿಷನ್ಗೆ ಸಿದ್ಧತೆ ನಡೆಸುತ್ತಿದೆ. ಅಷ್ಟೇ ಅಲ್ಲ, 2040ರ ವೇಳೆಗೆ ಭಾರತೀಯ ಗಗನಯಾತ್ರಿಯನ್ನು ಚಂದ್ರನ ಮೇಲೆ ಇಳಿಸುವ ಮಹತ್ವಾಕಾಂಕ್ಷಿ ಗುರಿಯನ್ನೂ ಇಟ್ಟುಕೊಳ್ಳಲಾಗಿದೆ. ಒಂದು ಕಾಲದಲ್ಲಿ ಕೇವಲ ಕಾವ್ಯದ ವಸ್ತುವಾಗಿದ್ದ ಚಂದ್ರ, ಇಂದು ಜಾಗತಿಕ ಶಕ್ತಿಗಳ ವಾಣಿಜ್ಯ ಮತ್ತು ವೈಜ್ಞಾನಿಕ ಅಧಿಪತ್ಯದ ತೈಲ ಬಾವಿಯಾಗಿ (Oil Field) ಮಾರ್ಪಡುತ್ತಿರುವುದು ಪ್ರಕೃತಿ ಮತ್ತು ವಿಜ್ಞಾನದ ಮುಖಾಮುಖಿಯ ರೋಚಕ ಅಧ್ಯಾಯ.
