
ಶಿವಮೊಗ್ಗ: ಊರಗಡೂರು-ಸೂಳೆಬೈಲ್ನಲ್ಲಿ ಮಂಗಳವಾರ(ಮೇ 19) ತಡರಾತ್ರಿ ಅಕ್ರಮ ಗೋ ಸಾಗಾಟ ತಡೆಯಲು ಹೋದವರ ಮೇಲೆ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ನಗರ ಹೊರವಲಯದ ಸೂಳೆಬೈಲ್ನಲ್ಲಿ ನಡೆದಿದೆ.

ಶಿವಮೊಗ್ಗ ಏರ್ಪೋರ್ಟ್ ರಸ್ತೆಯಿಂದ ನಗರದ ಒಳಗಡೆ ಗೋವುಗಳನ್ನು ವಾಹನದಲ್ಲಿ ತರಲಾಗಿತ್ತು. ಇದನ್ನ ಗಮನಿಸಿ, ವಾಹನ ತಡೆಯಲು ಹಿಂದೂ ಕಾರ್ಯಕರ್ತರು ಮುಂದಾದರು. ಈ ವೇಳೆ ವಾಹನ ನಿಲ್ಲಿಸದೇ, ಸೂಳೆಬೈಲ್ ಭಾಗಕ್ಕೆ ಚಾಲಕ ವಾಹನ ಚಲಾಯಿಸಿಕೊಂಡು ಬಂದಿದ್ದಾನೆ ಎನ್ನಲಾಗಿದೆ.

ಅಕ್ರಮ ಗೋ ಸಾಗಾಟದ ವಾಹನ ಸೂಳೆಬೈಲ್ ಭಾಗದಲ್ಲಿ ಕೆಲ ವಾಹನಕ್ಕೆ ಡಿಕ್ಕಿಯಾಗಿದೆ ಎನ್ನಲಾಗಿದೆ. ತಕ್ಷಣವೇ ವಾಹನ ತಡೆದಿರುವ ಸ್ಥಳೀಯರು ಹಾಗೂ ಹಿಂದೂ ಕಾರ್ಯಕರ್ತರು ಈ ವೇಳೆ ಅನ್ಯಕೋಮಿನ ಯುವಕರು ಗೋವುಗಳನ್ನು ವಾಹನದಿಂದ ಕೆಳಗಿಳಿಸಿ ಓಡಿಸಿದ್ದಾರೆ ಎನ್ನಲಾಗಿದೆ.ಘಟನೆ ಸಂಬಂಧ ಸ್ಥಳದಲ್ಲಿ ಎರಡು ಗುಂಪಿನ ನಡುವೆ ತಳ್ಳಾಟ- ನೂಕಾಟ ನಡೆದಿದೆ.

ಗೋ ರಕ್ಷಣೆಗೆ ಮುಂದಾಗಿದ್ದ ಹಿಂದೂ ಕಾರ್ಯಕರ್ತನ ಮೇಲೆ ಅನ್ಯಕೋಮಿನ ಯುವಕರ ಗುಂಪು ಹಲ್ಲೆ ನಡೆಸಿದೆ. ವಿಷಯ ತಿಳಿಯುತ್ತಿದ್ದಂತೆ ತುಂಗಾನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ವಾಹನ ಸಹಿತ ಚಾಲಕನನ್ನು ವಶಕ್ಕೆ ಪಡೆದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.