
ಮಂಗಳೂರು: ಇತ್ತೀಚೆಗೆ ಉಳ್ಳಾಲ ಠಾಣೆ ವ್ಯಾಪ್ತಿಯ ತೊಕ್ಕೊಟ್ಟಿನಲ್ಲಿ ನಡೆದ ರೌಡಿಶೀಟರ್ ಆರಿಫ್ ಹುಸೇನ್ ಹತ್ಯೆ ಪ್ರಕರಣದ ಸಂಬಂಧಿಸಿದಂತೆ ಪ್ರಮುಖ ಏಳು ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ರಿಫತ್, ಜುಟ್ಟು ಅಷ್ಪಾಕ್, ಖಲೀಲ್, ಶಾಕೀರ್, ಇರ್ಫಾನ್, ರಿಜ್ವಾನ್ ಹಾಗೂ ಅವರಿಗೆ ಸಹಕರಿಸಿದ್ದ ಇರ್ಷಾದ್ ಬಂಧಿತ ಆರೋಪಿಗಳು.

ಕೃತ್ಯ ನಡೆದ ದಿನದಂದು ಆರೋಪಿಗಳು ಇನ್ನೋವಾ ಕಾರಿನಲ್ಲಿ ಸಂಚು ರೂಪಿಸಿ ಆರಿಫ್ ಅವರ ಬೈಕನ್ನು ಹಿಂಬಾಲಿಸಿದ್ದರು. ಹಿಂದಿನಿಂದ ಕಾರನ್ನು ಡಿಕ್ಕಿ ಹೊಡೆಸಿ, ತೀವ್ರವಾಗಿ ಹಲ್ಲೆ ನಡೆಸಿ ಕೊಲೆಗೈದು ಸ್ಥಳದಿಂದ ಪರಾರಿಯಾಗಿದ್ದರು.

ಈ ಹತ್ಯೆಯ ಸಂಚು ಇನ್ನೂ ಆಳವಾಗಿ ಹರಡಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಕೃತ್ಯದ ಹಿಂದೆ ಇರುವ ಇತರ ಸಹಚರರನ್ನು ಗುರುತಿಸುವ ಕೆಲಸ ಪ್ರಗತಿಯಲ್ಲಿದೆ. ಹೆಚ್ಚಿನ ವಿಚಾರಣೆಯ ನಂತರ ಸಂಪೂರ್ಣ ಸತ್ಯಾಂಶ ಹೊರಬರಲಿದೆ ಎಂದು ಮಂಗಳೂರು ನಗರ ಪೊಲೀಸ್ ಅಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.