ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ಧಾರ್ಮಿಕ ಕಾರ್ಯಗಳಿಂದ ಬಿಜೆಪಿ ಮಾಜಿ ಮುಖಂಡ ಪಿ.ಜಿ. ಜಗನ್ನಿವಾಸ್ ರಾವ್ ಅವರನ್ನು ದೂರ ಇಡಬೇಕು, ಇಲ್ಲದಿದ್ದರೆ ಜಾತ್ರೆಯ ಧ್ವಜಾರೋಹಣದ ವೇಳೆ ಕೊಡಿಮರದಡಿಯಲ್ಲಿ ಕುಳಿತು ನ್ಯಾಯ ಕೇಳುವುದಾಗಿ ನಮಿತಾ ಎಚ್ಚರಿಕೆ ನೀಡಿದ್ದಾರೆ.

ಪುತ್ತೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಗಳಿಗೆ ಅನ್ಯಾಯ ಮಾಡಿದವರನ್ನು ದೇವಸ್ಥಾನದ ಪವಿತ್ರ ಕಾರ್ಯಗಳಲ್ಲಿ ಭಾಗವಹಿಸಲು ಬಿಡಬಾರದು. ಏಪ್ರಿಲ್ 10 ರಂದು ನಡೆಯಲಿರುವ ಜಾತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಗನ್ನಿವಾಸ್ ರಾವ್ ಭಾಗವಹಿಸಬಾರದು. ಒಂದು ವೇಳೆ ಅವರನ್ನು ಸೇರಿಸಿಕೊಂಡರೆ, ತಾನು ಕೊಡಿಮರದ ಅಡಿಯಲ್ಲಿ ಕುಳಿತು ತಂತ್ರಿಗಳಲ್ಲಿ ನ್ಯಾಯ ಕೋರುವುದಾಗಿ ಅವರು ತಿಳಿಸಿದ್ದಾರೆ. ಹಿಂದೂ ಯುವತಿಗೆ ವಂಚನೆ ಮಾಡಿದ ಕುಟುಂಬಕ್ಕೆ ದೇವಸ್ಥಾನದ ಜವಾಬ್ದಾರಿಗಳನ್ನು ನೀಡುವುದು ಸರಿಯಲ್ಲ. ಈ ಸಂಬಂಧ ಅವರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೂ ಅಧಿಕೃತ ಮನವಿ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ
ಬಿಜೆಪಿ ಮಾಜಿ ಮುಖಂಡ ಪಿ.ಜಿ. ಜಗನ್ನಿವಾಸ್ ರಾವ್ ಮಗ ಶ್ರೀಕೃಷ್ಣ ಯುವತಿ ಜೊತೆ ದೈಹಿಕ ಸಂಬಂಧ ಬೆಳೆಸಿದ್ದು ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಡಿಎನ್ಎ ವರದಿಯಲ್ಲೂ ಶ್ರೀಕೃಷ್ಣನೇ ತಂದೆ ಎಂದು ಸಾಬೀತಾಗಿದೆ. ಇದೀಗ ಮಗುವಿಗೆ ಈಗ 9 ತಿಂಗಳು ಕಳೆದಿದೆ. ಆರಂಭದಲ್ಲಿ ಮದುವೆ ಮಾಡಿಕೊಡುವುದಾಗಿ ಕಾಲಾವಕಾಶ ಕೇಳಿದ್ದ ಜಗನ್ನಿವಾಸ್ ರಾವ್, ಈಗ ಮದುವೆಗೆ ಒಪ್ಪುತ್ತಿಲ್ಲ ಮತ್ತು ಅನ್ಯಾಯ ಮಾಡುತ್ತಿದ್ದಾರೆ ಎಂದು ತಾಯಿ ದೂರಿದ್ದಾರೆ.

ಪುತ್ತೂರಿನ ಅತ್ಯಂತ ದೊಡ್ಡ ಧಾರ್ಮಿಕ ಕಾರ್ಯಕ್ರಮವಾದ ಮಹಾಲಿಂಗೇಶ್ವರ ಜಾತ್ರೆಯ ಹೊತ್ತಲ್ಲೇ ಈ ವಿವಾದ ಮುನ್ನೆಲೆಗೆ ಬಂದಿರುವುದು ಸ್ಥಳೀಯವಾಗಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸದ್ಯ ಈ ವಿಚಾರದಲ್ಲಿ ದೇವಸ್ಥಾನದ ಸಮಿತಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.