ಮಂಗಳೂರು–ಸುಬ್ರಹ್ಮಣ್ಯ ರೈಲು ಸೇವೆ 35 ದಿನ ಸ್ಥಗಿತ!!

ಮಂಗಳೂರು: ದಕ್ಷಿಣ ಪಶ್ಚಿಮ ರೈಲ್ವೆ ವ್ಯಾಪ್ತಿಯಲ್ಲಿ ತುರ್ತು ಹಳಿ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆ, ಕರಾವಳಿ ಭಾಗದ ಪ್ರಮುಖ ಮಾರ್ಗವಾದ ಮಂಗಳೂರು–ಸುಬ್ರಹ್ಮಣ್ಯ ನಡುವೆ ಸಂಚರಿಸುವ ರೈಲು ಸೇವೆಯಲ್ಲಿ ಭಾರೀ ಬದಲಾವಣೆಗಳನ್ನು ಘೋಷಿಸಲಾಗಿದೆ.

ಮಂಗಳೂರು ಸೆಂಟ್ರಲ್–ಸುಬ್ರಹ್ಮಣ್ಯ ರೋಡ್ ನಡುವಿನ ಪ್ಯಾಸೆಂಜರ್ ರೈಲುಗಳು ಒಟ್ಟು 35 ದಿನಗಳ ಕಾಲ ಸಂಪೂರ್ಣ ರದ್ದುಗೊಂಡಿವೆ. ರೈಲು ಸಂಖ್ಯೆ 56629 (ಮಂಗಳೂರು–ಸುಬ್ರಹ್ಮಣ್ಯ ರೋಡ್) ಹಾಗೂ 56630 (ಸುಬ್ರಹ್ಮಣ್ಯ ರೋಡ್–ಮಂಗಳೂರು) ರೈಲುಗಳು ಮಾರ್ಚ್ 23ರಿಂದ ಏಪ್ರಿಲ್ 14ರವರೆಗೆ ಮತ್ತು ಜೂನ್ 10ರಿಂದ ಜೂನ್ 21ರವರೆಗೆ ಸಂಚರಿಸುವುದಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.

ಈ ಮಧ್ಯೆ, ಕೆಲವು ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲಿಯೂ ವ್ಯತ್ಯಾಸ ಉಂಟಾಗಲಿದೆ. ಯಶವಂತಪುರ–ಕಾರವಾರ (16515), ಯಶವಂತಪುರ–ಮಂಗಳೂರು (16575, 16539) ರೈಲುಗಳು ಸುಮಾರು 20 ನಿಮಿಷಗಳ ವಿಳಂಬದಿಂದ ಸಂಚರಿಸಲಿವೆ. ಮಂಗಳೂರು–ಸುಬ್ರಹ್ಮಣ್ಯ ಪ್ಯಾಸೆಂಜರ್ (56229) ರೈಲು ಏಪ್ರಿಲ್ 21ರಿಂದ ಜೂನ್ 9ರವರೆಗೆ ಸುಮಾರು 55 ನಿಮಿಷ ತಡವಾಗಿ ಓಡಲಿದೆ.

ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಮನಗಂಡು ಯುಗಾದಿ ಹಾಗೂ ರಂಜಾನ್ ಪ್ರಯುಕ್ತ ಯಶವಂತಪುರ–ಮಡಗಾಂವ್–ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ ರೈಲು ಕೂಡ ಓಡಿಸಲಾಗುತ್ತಿದೆ. ಈ ರೈಲು ಮಾರ್ಚ್ 20ರಂದು ಬೆಳಿಗ್ಗೆ 11.50ಕ್ಕೆ ಯಶವಂತಪುರದಿಂದ ಹೊರಟು, ಶನಿವಾರ ಬೆಳಿಗ್ಗೆ 6.45ಕ್ಕೆ ಮಡಗಾಂವ್ ತಲುಪಿದೆ.

ರೈಲು ವಾಪಸ್ಸು ಮಾರ್ಚ್ 22ರಂದು ಬೆಳಿಗ್ಗೆ 11ಕ್ಕೆ ಮಡಗಾಂವ್‌ನಿಂದ ಹೊರಟು, ಸೋಮವಾರ ಬೆಳಿಗ್ಗೆ 5.20ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ಈ ವಿಶೇಷ ರೈಲು ಕುಣಿಗಲ್, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಪುತ್ತೂರು, ಉಡುಪಿ, ಕುಂದಾಪುರ, ಭಟ್ಕಳ, ಕಾರವಾರ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.

ಅಲ್ಲದೆ, ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿಯೂ ಕಾರ್ಯಾಚರಣಾ ಕಾರಣಗಳಿಂದ ಕರ್ನೂಲ್–ಕಾಚಿಗುಡ, ರಾಯಚೂರು–ಕಾಚಿಗುಡ ಹಾಗೂ ಗದ್ವಾಲ್ ಮಾರ್ಗದ ಹಲವು ರೈಲುಗಳು ಮಾರ್ಚ್ ಮಧ್ಯದಿಂದ ಏಪ್ರಿಲ್ 1ರವರೆಗೆ ರದ್ದುಗೊಂಡಿವೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಯಾಣಿಕರು ಮುಂಚಿತವಾಗಿ ತಮ್ಮ ಪ್ರಯಾಣ ಯೋಜನೆ ರೂಪಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.

error: Content is protected !!