ಟೆಹ್ರಾನ್: ಕಳೆದ ಕೆಲವು ದಿನಗಳಿಂದ ಅಮೆರಿಕಾ ಮತ್ತು ಇಸ್ರೇಲ್ ವಿರುದ್ಧದ ಸಂಘರ್ಷದಲ್ಲಿ ತೊಡಗಿರುವ ಇರಾನ್, ಶನಿವಾರ ತನ್ನ ನೆರೆಹೊರೆಯ ರಾಷ್ಟ್ರಗಳ ಮೇಲೆ ನಡೆದ ಅನಿರೀಕ್ಷಿತ ದಾಳಿಗಳಿಗಾಗಿ ಅಧಿಕೃತವಾಗಿ ಕ್ಷಮೆಯಾಚಿಸಿದೆ. ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರು ಸರ್ಕಾರಿ ದೂರದರ್ಶನದಲ್ಲಿ ಮಾಡಿದ ಭಾಷಣದಲ್ಲಿ, ನೆರೆರಾಷ್ಟ್ರಗಳ ಮೇಲೆ ಇನ್ನು ಮುಂದೆ ದಾಳಿ ಮಾಡುವುದಿಲ್ಲ ಎಂಬ ಭರವಸೆಯನ್ನು ನೀಡಿದ್ದಾರೆ.

ಇರಾನ್ನಿಂದ ಆಕಸ್ಮಿಕವಾಗಿ ದಾಳಿಗೊಳಗಾದ ನೆರೆಹೊರೆಯ ದೇಶಗಳಿಗೆ ತಮ್ಮ ಪರವಾಗಿ ಮತ್ತು ದೇಶದ ಪರವಾಗಿ ಅಧ್ಯಕ್ಷರು ವಿಷಾದ ವ್ಯಕ್ತಪಡಿಸಿದ್ದಾರೆ. ಇರಾನ್ನ ಮಧ್ಯಂತರ ನಾಯಕತ್ವ ಮಂಡಳಿಯು ನೆರೆರಾಷ್ಟ್ರಗಳ ಮೇಲೆ ಯಾವುದೇ ಕ್ಷಿಪಣಿ ದಾಳಿ ಮಾಡದಂತೆ ಆದೇಶಿಸಿದೆ. ಆದರೆ, ಈ ರಾಷ್ಟ್ರಗಳ ಭೂಭಾಗದಿಂದ ಇರಾನ್ ಮೇಲೆ ದಾಳಿ ನಡೆದರೆ ಮಾತ್ರ ಪ್ರತ್ಯುತ್ತರ ನೀಡಲಾಗುವುದು ಎಂಬ ಷರತ್ತನ್ನು ವಿಧಿಸಲಾಗಿದೆ. ಸಂಘರ್ಷದ ನಡುವೆಯೂ ಇರಾನ್ ಶರಣಾಗುವ ಪ್ರಶ್ನೆಯೇ ಇಲ್ಲ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. “ಇರಾನ್ ಶರಣಾಗುತ್ತದೆ ಎನ್ನುವ ಶತ್ರುಗಳ ಕನಸು ಈಡೇರದು” ಎಂದು ಅವರು ಗುಡುಗಿದ್ದಾರೆ.

ಹಿನ್ನೆಲೆ ಮತ್ತು ಹಾನಿ:
ಫೆಬ್ರವರಿ 28 ರಿಂದ ಆರಂಭವಾದ ʻಆಪರೇಷನ್ ಎಪಿಕ್ ಫ್ಯೂರಿ’ ಅಡಿಯಲ್ಲಿ ಅಮೆರಿಕಾ ಮತ್ತು ಇಸ್ರೇಲ್ ಪಡೆಗಳು ಇರಾನ್ನ ಪ್ರಮುಖ ನಗರಗಳ ಮೇಲೆ ಸರಣಿ ವಾಯುದಾಳಿಗಳನ್ನು ನಡೆಸಿವೆ. ಈ ದಾಳಿಯಲ್ಲಿ ಇರಾನ್ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದರು.
ಇರಾನ್ ಪ್ರತಿಯಾಗಿ ನಡೆಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು ಅಮೆರಿಕಾ ಸೇನಾ ನೆಲೆಗಳ ಮೇಲೆ ಮಾತ್ರವಲ್ಲದೆ, ದುಬೈ, ಅಬುಧಾಬಿ ಮತ್ತು ಬಹ್ರೇನ್ನಂತಹ ನಾಗರಿಕ ಪ್ರದೇಶಗಳ ಮೇಲೂ ಪರಿಣಾಮ ಬೀರಿದ್ದವು. ವಿಶೇಷವಾಗಿ ವಿಶ್ವದ ಅತ್ಯಂತ ಜನನಿಬಿಡ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆದಿದ್ದು, ಅಲ್ಲಿನ ವಿಮಾನ ಸಂಚಾರ ಸ್ಥಗಿತಗೊಂಡಿದೆ. ಜೊತೆಗೆ ಜಬೆಲ್ ಅಲಿ ಬಂದರು ಮತ್ತು ಪಾಮ್ ಜುಮೇರಾದಂತಹ ಐಷಾರಾಮಿ ಪ್ರದೇಶಗಳಲ್ಲೂ ಹಾನಿ ಸಂಭವಿಸಿದೆ.
ಈ ರಾಜತಾಂತ್ರಿಕ ಕ್ಷಮೆಯಾಚನೆಯು ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯನ್ನು ತುಸು ತಗ್ಗಿಸುವ ಲಕ್ಷಣಗಳನ್ನು ತೋರಿಸಿದೆಯಾದರೂ, ಇರಾನ್ ಮತ್ತು ಅಮೆರಿಕಾ-ಇಸ್ರೇಲ್ ನಡುವಿನ ನೇರ ಸಂಘರ್ಷ ಇನ್ನೂ ಮುಂದುವರಿಯುವ ಸಾಧ್ಯತೆಗಳಿವೆ.
