ಹಿಂದೂಗಳ ವಿರುದ್ಧ ಕಿಡಿಕಾರಿದ್ದ ಖಮೇನಿ?: ವೈರಲ್ ಆಯ್ತು ಸರ್ವೋಚ್ಛ ನಾಯಕನ ಹಳೆಯ ಟ್ವೀಟ್!

ಮಂಗಳೂರು: ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ಭೀಕರ ಯುದ್ಧದಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯವಾಗಿದೆ. ಭಾರತದಲ್ಲಿ ಈಗ ಖಮೇನಿ ಸಾವಿಗಿಂತ ಹೆಚ್ಚಾಗಿ ಅವರು 2020ರಲ್ಲಿ ಮಾಡಿದ್ದ ಒಂದು ಸ್ಫೋಟಕ ಟ್ವೀಟ್ ಭಾರಿ ಚರ್ಚೆಗೆ ಕಾರಣವಾಗಿದೆ.

ಏನಿತ್ತು ಆ ವಿವಾದಾತ್ಮಕ ಟ್ವೀಟ್‌ನಲ್ಲಿ?
ಮಾರ್ಚ್ 5, 2020 ರಂದು ಖಮೇನಿ ಅವರು ತಮ್ಮ ಅಧಿಕೃತ ಟ್ವಿಟ್ಟರ್ (X) ಖಾತೆಯಲ್ಲಿ ಭಾರತದ ಬಗ್ಗೆ ಅತ್ಯಂತ ಕಹಿಯಾದ ಮಾತುಗಳನ್ನು ಆಡಿದ್ದರು. ದೆಹಲಿ ಗಲಭೆಗಳ ನೆಪದಲ್ಲಿ ಭಾರತದ ಆಂತರಿಕ ವಿಚಾರಕ್ಕೆ ಕೈಹಾಕಿದ್ದ ಅವರು “ಭಾರತದಲ್ಲಿ ಮುಸ್ಲಿಮರ ಹತ್ಯಾಕಾಂಡದಿಂದ ಪ್ರಪಂಚದಾದ್ಯಂತದ ಮುಸ್ಲಿಮರ ಹೃದಯಗಳು ದುಃಖಿಸುತ್ತಿವೆ. ಭಾರತವು ಇಸ್ಲಾಂ ಪ್ರಪಂಚದಿಂದ ಪ್ರತ್ಯೇಕವಾಗುವುದನ್ನು ತಡೆಯಲು ಭಾರತ ಸರ್ಕಾರವು ಉಗ್ರಗಾಮಿ ಹಿಂದೂಗಳು ಮತ್ತು ಅವರ ಪಕ್ಷಗಳನ್ನು ಎದುರಿಸಬೇಕು ಮತ್ತು ಮುಸ್ಲಿಮರ ಹತ್ಯಾಕಾಂಡವನ್ನು ನಿಲ್ಲಿಸಬೇಕು.” ಎಂದು ಟ್ವಿಟರ್‌ ಪೋಸ್ಟ್‌ ಹಾಕಿದ್ದರು.

ಆದರೆ ಖಮೇನಿ, ಇಂದು ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ಕ್ಷಿಪಣಿ ದಾಳಿಗೆ ಬಲಿಯಾಗಿದ್ದಾರೆ. ಟೆಹ್ರಾನ್‌ನಲ್ಲಿರುವ ಇರಾನ್‌ನ ಗಣ್ಯ ಪಡೆ ಐಆರ್‌ಜಿಸಿ (IRGC) ಪ್ರಧಾನ ಕಚೇರಿಯನ್ನು ಅಮೆರಿಕದ ಸೇನೆ ಸಂಪೂರ್ಣವಾಗಿ ಧೂಳೀಪಟ ಮಾಡಿದೆ. ಅಂದು ಹಿಂದೂ ವಿರೋಧಿ ಹೇಳಿಕೆ ನೀಡಿದ್ದ ಖಮೇನಿ ಅವರ ಟ್ವೀಟ್ ಅನ್ನು ಈಗ ಅನೇಕರು ಮುನ್ನೆಲೆಗೆ ತಂದಿದ್ದು, ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

error: Content is protected !!