ಸಾಗರ : ಪ್ರೇಯಸಿಯನ್ನು ಭೇಟಿ ಮಾಡಲು ಬುರ್ಖಾ ಧರಿಸಿ ಬಂದಿದ್ದ ಅಪ್ರಾಪ್ತ ಬಾಲಕನೊಬ್ಬನನ್ನು ಮಕ್ಕಳ ಕಳ್ಳನೆಂದು ಶಂಕಿಸಿ ಸ್ಥಳೀಯರು ಆತನನ್ನು ಕಂಬಕ್ಕೆ ಕಟ್ಟಿ ಹಾಕಿ ಪೋಲೀಸರಿಗೆ ಒಪ್ಪಿಸಿದ ಘಟನೆ ಭಾನುವಾರ(ಫೆ.01) ನಡೆದಿದೆ.

ತಾಲೂಕಿನ ತ್ಯಾಗರ್ತಿ ಮೂಲದ ಬಾಲಕನೋರ್ವ ರವಿವಾರ ಮಧ್ಯಾಹ್ನ ಜನ್ನತ್ ನಗರಕ್ಕೆ ಬುರ್ಖಾ ಧರಿಸಿ ಆಗಮಿಸಿದ್ದು, ತನ್ನ ಪ್ರೇಯಸಿಯನ್ನು ರಹಸ್ಯವಾಗಿ ಭೇಟಿಯಾಗುವುದು ಆತನ ಉದ್ದೇಶವಾಗಿತ್ತು ಎನ್ನಲಾಗಿದೆ. ಆದರೆ, ಬುರ್ಖಾ ತೊಟ್ಟಿದ್ದ ಆತನ ನಡವಳಿಕೆ ಅಸಹಜವಾಗಿ ಕಂಡಿದ್ದರಿಂದ ಸ್ಥಳೀಯ ಮಕ್ಕಳು ಭಯಭೀತರಾಗಿದ್ದಾರೆ. ಈಗಾಗಲೇ ಹರಡಿರುವ ವದಂತಿಗಳಿಂದ ಪ್ರಭಾವಿತರಾಗಿದ್ದ ಮಕ್ಕಳು ಹಾಗೂ ಸ್ಥಳೀಯರು, ಆತನನ್ನು ಮಕ್ಕಳನ್ನು ಅಪಹರಿಸಲು ಬಂದ ಕಳ್ಳನೆಂದು ಭಾವಿಸಿದ್ದಾರೆ.

ಸಂಶಯಗೊಂಡ ಸ್ಥಳೀಯರು ಬಾಲಕನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸಾಗರ ಟೌನ್ ಪೊಲೀಸರು ಯುವಕನನ್ನು ಜನರ ಸಂಘರ್ಷದಿಂದ ಬಿಡಿಸಿ ವಶಕ್ಕೆ ಪಡೆದಿದ್ದಾರೆ. ನಂತರ ನಡೆಸಿದ ತೀವ್ರ ವಿಚಾರಣೆಯಲ್ಲಿ ಆತ ಕಳ್ಳನಲ್ಲ ಎಂಬುದು ಹಾಗೂ ಕೇವಲ ತನ್ನ ಪ್ರೇಯಸಿಯನ್ನು ಕಾಣಲು ಈ ವೇಷ ಧರಿಸಿ ಬಂದಿದ್ದ ಎಂಬ ಸತ್ಯಾಂಶ ಹೊರಬಿದ್ದಿದೆ.