ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಅವರ ಆರೋಗ್ಯ ವಿಚಾರಿಸಲು ಹಿರಿಯ ರಾಜಕೀಯ ಧುರೀಣ ದಿ.ಆಸ್ಕರ್ ಫೆರ್ನಾಂಡಿಸ್ ಅವರ ಕುಟುಂಬದ ಸದಸ್ಯರು ಭೇಟಿ ನೀಡಿದರು.

ಹಿರಿಯ ನಾಯಕರು ಹಾಗೂ ಮಾಜಿ ಕೇಂದ್ರ ಸಚಿವವಾಗಿದ್ದ ದಿವಂಗತ ಆಸ್ಕರ್ ಫೆರ್ನಾಂಡಿಸ್ ಅವರ ಪತ್ನಿ ಬ್ಲಾಸಮ್ ಫೆರ್ನಾಂಡಿಸ್, ಪುತ್ರ ಓಷನ್ ಫೆರ್ನಾಂಡಿಸ್ ಹಾಗೂ ಅಳಿಯ ಮಾರ್ಕ್ ಸಲ್ದಾನ್ ಅವರು ಭಂಡಾರಿಯವರ ಸದಾಶಿವನಗರದ ನಿವಾಸಕ್ಕೆ ಆಗಮಿಸಿ, ವಿಶ್ರಾಂತಿ ಪಡೆಯುತ್ತಿರುವ ಶಾಸಕರ ಕುಶಲೋಪರಿ ವಿಚಾರಿಸಿದರು.

ಮಂಜುನಾಥ ಭಂಡಾರಿ ಅವರು ಕೆಳದಿನಗಳಿಂದ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ವೇಳೆ ಭೇಟಿ ನೀಡಿದ ಆಸ್ಕರ್ ಕುಟುಂಬದ ಸದಸ್ಯರು ಹಳೆಯ ಒಡನಾಟದ ಬಗ್ಗೆ ಕೆಲಕಾಲ ಚರ್ಚಿಸಿದರು. ಅಲ್ಲದೆ, ಮಂಜುನಾಥ ಭಂಡಾರಿಯವರು ಶೀಘ್ರವಾಗಿ ಗುಣಮುಖರಾಗಿ, ಸಾರ್ವಜನಿಕ ಜೀವನದಲ್ಲಿ ಮತ್ತೆ ಸಕ್ರಿಯವಾಗಿ ತೊಡಗಿಸಿಕೊಳ್ಳಲಿ ಎಂದು ಹಾರೈಸಿ ತೆರಳಿದರು.
