ಶಾಲಾ ಮಕ್ಕಳ ತರಬೇತಿ ಸಂಸ್ಥೆಯ ಮುಖ್ಯಸ್ಥರನ್ನೇ ಬ್ಲ್ಯಾಕ್ಮೇಲ್ ಮಾಡಿದ ಉದ್ಯೋಗಿ; ಆರೋಪಿ ಬಂಧನ

ಮಂಗಳೂರು: ಶಾಲಾ ಮಕ್ಕಳಿಗೆ ಸಂವಹನ ಕೌಶಲ್ಯ ತರಬೇತಿ ನೀಡುವ ನಗರದ ಸಂಸ್ಥೆಯೊಂದರ ಮುಖ್ಯಸ್ಥರನ್ನು ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬ ಖಾಸಗಿ ವೀಡಿಯೋ ಇದೆ ಎಂದು ಬ್ಲ್ಯಾಕ್ ಮೇಲ್ ಮಾಡಿ ಈಗ ಬಂಧಿತನಾಗಿದ್ದಾನೆ.

ಉಡುಪಿ ಕಾಪುವಿನ ಅಭಿಷೇಕ್‌ ಸುರೇಂದ್ರ ಪೂಜಾರಿ ಬಂಧಿತ ಆರೋಪಿ.

ಮಾರ್ಫ್‌ ಮಾಡಲಾದ ವೀಡಿಯೋ ಇರಿಸಿಕೊಂಡು ಬ್ಲ್ಯಾಕ್ ಮೇಲ್ ಮಾಡಿರುವುದಾಗಿ ಸಂಸ್ಥೆ ಮಾಲಕರ ಪುತ್ರಿ ನೀಡಿದ ದೂರಿನನ್ವಯ ಉರ್ವಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿ ಅಭಿಷೇಕ್‌ ನಗರದ ಖಾಸಗಿ ತರಬೇತಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಸಂಸ್ಥೆಯ ಮಾಲಕರನ್ನು ಈ ತರಬೇತಿಗೆ ದುಬೈನಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದು ಪುಸಲಾಯಿಸಿ ಕಳೆದ ವರ್ಷ ದುಬೈಗೆ ಕರೆದುಕೊಂಡು ಹೋಗಿದ್ದ, ಆದರೆ ಅಲ್ಲಿ ಹೋದ ಬಳಿಕ ಅಂತಹ ಬೇಡಿಕೆ ಕಂಡು ಬರದಿರುವುದು ಮತ್ತು ಆರೋಪಿಯ ಚಲನವಲನದ ಮೇಲೆ ಸಂಶಯ ಬಂದಾಗ ಅವರು ವಾಪಾಸ್‌ ಹಿಂದೆ ಬರಲು ಸಿದ್ಧರಾಗುತ್ತಿದ್ದರು. ಕಳೆದ ವರ್ಷ ಎ. 14ರಂದು ಆರೋಪಿ ಅಭಿಷೇಕ್‌, ಮಾಲಕರಿಗೆ ಅವರಿಗೆ ಸಂಬಂಧಿಸಿದ ಖಾಸಗಿ ವೀಡಿಯೋ ತೋರಿಸಿ, ಇದಲ್ಲದೆ ಅವರ ಪುತ್ರಿಯ ಖಾಸಗಿ ವಿಡಿಯೋ ಕೂಡಾ ತನ್ನಲ್ಲಿದೆ, ವೀಡಿಯೋ ಡಿಲೀಟ್‌ ಮಾಡಬೇಕಾದರೆ 2 ಕೋಟಿ ರೂ. ಮೊತ್ತವನ್ನು ತನ್ನ ಪತ್ನಿ ಶ್ರೀನಿಧಿ ಪಟ್ಲ ಖಾತೆಗೆ ವರ್ಗಾಯಿಸಬೇಕು, ಇಲ್ಲವಾದರೆ ವೀಡಿಯೋ ವೈರಲ್‌ ಮಾಡುವುದಾಗಿ ಎಂದು ಬ್ಲ್ಯಾಕ್ ಮೇಲ್ ಮಾಡಿದ್ದ.

ಆರೋಪಿಯು ಮತ್ತೆ 2025ರ ಡಿಸೆಂಬರ್‌ನಲ್ಲಿ ಮಾಲಕರ ಪುತ್ರಿಯ ಬಳಿ ಬಂದು 2 ಕೋಟಿ ರೂ. ಹಣಕ್ಕೆ ಬೇಡಿಕೆ ಇರಿಸಿ, ಹಣ ನೀಡದಿದ್ದರೆ ಇನ್ನು ಕಾಯುವುದಿಲ್ಲ, ಖಾಸಗಿ ವೀಡಿಯೋ ವೈರಲ್‌ ಮಾಡುತ್ತೇನೆ, ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದ. ಅಲ್ಲದೆ ಮಾಲಕರ ಖಾಸಗಿ ವೀಡಿಯೋಗಳನ್ನು ಮಂಗಳೂರು, ಉಡುಪಿಯ ಕೆಲವು ಶಾಲೆಗಳ ಪ್ರಾಂಶುಪಾಲರಿಗೆ  ಒನ್ಸ್‌  ವೀವ್‌ ಮೂಲಕ  ಕಳುಹಿಸಿದ್ದ ಎನ್ನಲಾಗಿದೆ.

ಆರೋಪಿಯ ಪತ್ನಿ ಶ್ರೀನಿಧಿ ವಿರುದ್ಧವೂ ದೂರು ದಾಖಲಾಗಿದ್ದು, ಆಕೆಯ ಕುರಿತು ಕೂಡ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!