
ಮಂಗಳೂರು: ಕೊಡಿಯಾಲಬೈಲ್ನ ಕೆನರಾ ಶಾಲೆಯಲ್ಲಿ 2025–26ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ 20 ವಿದ್ಯಾರ್ಥಿಗಳಿಗೆ 12.07.2026 ರಂದು ಸಂಜೆ 4.30ಕ್ಕೆ ಭವ್ಯ ಸನ್ಮಾನ ಸಮಾರಂಭವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಎಸ್.ಎಸ್.ಎಲ್.ಸಿ. ಸಾಧಕರ ಹೆಸರನ್ನು ಒಳಗೊಂಡ ‘Wall of Fame’ ನಾಮಫಲಕವನ್ನು ಕೆನರಾ ವಿಕಾಸ್ ವಿದ್ಯಾಸಂಸ್ಥೆಗಳ ಸಮೂಹದ ಸಂಯೋಜಕರು ಹಾಗೂ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಸದಸ್ಯರಾದ ಬಸ್ತಿ ಪುರುಷೋತ್ತಮ ಶೆಣೈ, ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಉಪಾಧ್ಯಕ್ಷರು ಹಾಗೂ ಕೆನರಾ ಶಾಲೆಯ ಸಂಚಾಲಕರಾದ ಕೆ.ಸುರೇಶ್ ಕಾಮತ್, ಕೆನರಾ ಶಾಲೆಯ ಮುಖ್ಯೋಪಾಧ್ಯಾಯಿನಿ ಕವಿತಾ ಮೌರ್ಯ ಹಾಗೂ ಎಸ್.ಎಸ್.ಎಲ್.ಸಿ. ಟಾಪರ್ ಪವನ್ ಅವರಿಂದ ಅನಾವರಣಗೊಳಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಬಸ್ತಿ ಪುರುಷೋತ್ತಮ ಶೆಣೈ ಅವರು 2025–26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ 20 ವಿದ್ಯಾರ್ಥಿಗಳನ್ನು ಹೂ, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು, ಪರಿಶ್ರಮ, ಶಿಸ್ತು ಮತ್ತು ದೃಢಸಂಕಲ್ಪದಿಂದ ವಿದ್ಯಾರ್ಥಿಗಳು ಜೀವನದಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಬೇಕು ಎಂದು ಪ್ರೇರೇಪಿಸಿದರು. ಕೆ.ಸುರೇಶ್ ಕಾಮತ್ ಅವರು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ ಎಲ್ಲ ಸಾಧಕರಿಗೆ ಶುಭ ಹಾರೈಸಿದರು. ರಕ್ಷಾ ನಿರೂಪಿಸಿದರು. ನಮಿತಾ ಮಲ್ಯ ಸ್ವಾಗತಿಸಿದರು.. ಸಹಶಿಕ್ಷಕಿ ಕುಮಾರಿ ನವ್ಯಶ್ರೀ ವಂದನಾರ್ಪಣೆಗೈದರು.

ಶಾಲೆಯ ಮುಖ್ಯೋಪಾಧ್ಯಾಯಿನಿ ಕವಿತಾ ಮೌರ್ಯ , ಕೆನರಾ ಹೈಸ್ಕೂಲ್ ಅಸೋಸಿಯೇಷನ್ ನ PRO ಉಜ್ವಲ್ ಮಲ್ಯ, ಕೆನರಾ ಇಂಟರ್ ನ್ಯಾಷನಲ್ ಶಾಲೆಯ ಮುಖ್ಯೋಪಾಧ್ಯಾಯಿನಿ ತೃಪ್ತಿ , ಕೆನರಾ ಶಾಲೆಯ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ, ಸನ್ಮಾನಿತ ವಿದ್ಯಾರ್ಥಿಗಳ ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಸಾಧಕರಿಗೆ ಅಭಿನಂದನೆ ಸಲ್ಲಿಸಿದರು. ಸಮಾರಂಭವು ಸಂಭ್ರಮ ಮತ್ತು ಗೌರವದ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.
