ಮಂಗಳೂರು: ಮಂಗಳೂರು ಹೋಬಳಿಯ ಐತಿಹಾಸಿಕ ಹಿನ್ನೆಲೆಯುಳ್ಳ ಜಪ್ಪುಗುಡ್ಡೆಚಾವಡಿಯ ಪುನರ್ನವೀಕರಣಗೊಂಡ ಮನೆಯ ಪ್ರವೇಶೋತ್ಸವ ಮತ್ತು ಧರ್ಮನೇಮವು ಫೆಬ್ರವರಿ 20 ರಿಂದ 25ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಮಾಲಾಡಿ ಅಜಿತ್ ಕುಮಾರ್ ರೈ ಕೊಡಿಯಾಲ್ ಗುತ್ತು ಅವರು ತಿಳಿಸಿದರು.

ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಿಯಾಲಗುತ್ತು, ಜಪ್ಪುಗುಡ್ಡೆಗುತ್ತು ಮತ್ತು ಬಡಿಲಗುತ್ತು ಮನೆತನಗಳು ತುಳುನಾಡಿನ ಕಟ್ಟುಕಟ್ಟಳೆಗಳನ್ನು ಮತ್ತು ದೈವದೇವರ ಆರಾಧನಾ ಕ್ಷೇತ್ರಗಳ ಸೇವೆಗಳನ್ನು ಸತ್ಯ-ಧರ್ಮದ ಹಾದಿಯಲ್ಲಿ ನಡೆಸಿಕೊಂಡು ಬರುತ್ತಿರುವ ಜವಾಬ್ದಾರಿಯುತ ಮನೆತನಗಳಾಗಿವೆ ಎಂದು ಹೇಳಿದರು.

ಜಪ್ಪುಗುಡ್ಡೆಗುತ್ತು ಮನೆತನವು ಬಂಟ್ ಸಮುದಾಯದ ನಾಲ್ಮನ್ನ ಬಳಿಯವರ ಮೂಲಮನೆಯಾಗಿದ್ದು, 1869ರ ದಾಖಲೆಗಳಲ್ಲೂ ಇದರ ಉಲ್ಲೇಖವಿದೆ ಹಾಗೂ ಈ ಮನೆತನದ ಯಜಮಾನರನ್ನು ʻಸುಬ್ಬಯ್ಯ ಭಂಡ್ರಿಯಾಲ್’ ಎಂಬ ಪದನಾಮದಿಂದ ಗೌರವಿಸಲಾಗುತ್ತದೆ ಎಂದು ಅವರು ವಿವರಿಸಿದರು.

ಈ ಭವ್ಯ ಪರಂಪರೆಯನ್ನು ಉಳಿಸಿಕೊಂಡು ಹೋಗುವ ದೃಷ್ಟಿಯಿಂದ ಶಿಥಿಲಗೊಂಡಿದ್ದ ಹಳೆಯ ಚಾವಡಿಯನ್ನು ಈಗ ಪುನರ್ನವೀಕರಣಗೊಳಿಸಲಾಗಿದೆ. ಇದರ ಪ್ರಯುಕ್ತ ಫೆಬ್ರವರಿ 22, 2026ರಂದು ಮುಂಜಾವಿನಿಂದ ಮರುದಿನ ಮುಂಜಾವದವರೆಗೆ ಚಾವಡಿ ಪ್ರವೇಶೋತ್ಸವ ನಡೆಯಲಿದ್ದು, ಫೆಬ್ರವರಿ 20 ರಿಂದ 25ರ ವರೆಗೆ ಪರಂಪರಾಗತವಾಗಿ ಆರಾಧಿಸಿಕೊಂಡು ಬರುತ್ತಿರುವ ಮುಂಡಿತಾಯ ವೈದ್ಯನಾಥ ಮತ್ತು ಪರಿವಾರ ದೈವಗಳ ಧರ್ಮನೇಮೋತ್ಸವವು ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ಎಲ್ಲಾ ಕಾರ್ಯಕ್ರಮಗಳಿಗೆ ಪಟ್ಟದ ಯಜಮಾನರು, ಕುಟುಂಬಸ್ಥರು ಮತ್ತು ಮಾಗಣೆಯ ಹತ್ತುಸಮಸ್ತರು ಸೇರಿ ಎಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುವುದಾಗಿ ರೈ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗುತ್ತಿನ ಪ್ರಮುಖರಾದ ಶಡ್ಡೆ ಮಂಜುನಾಥ ಭಂಡಾರಿ, ನಿಟ್ಟೆ ಗುತ್ತು ರವಿರಾಜ್ ಶೆಟ್ಟಿ, ಜಪ್ಪುಗುಡ್ಡೆಗುತ್ತು ಭುಜಂಗ ಶೆಟ್ಟಿ, ಗಿರಿಧರ ಶೆಟ್ಟಿ, ಜಪ್ಪುಗುಡ್ಡೆಗುತ್ತು ಗಣೇಶ್ ಶೆಟ್ಟಿ, ಪ್ರವೀಣ್ಚಂದ್ರ ಆಳ್ವ ಹಾಗೂ ಡಾ. ಸಾಯಿಗೀತಾ ಹೆಗ್ಡೆ ಉಪಸ್ಥಿತರಿದ್ದರು.
